ಬೆಂಗಳೂರು : ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರೆ, ಖಂಡಿತ ಕರ್ನಾಟಕವು ಸುಂದರ ರಾಜ್ಯವಾಗಲಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅವರು ಅಭಿಪ್ರಾಯಪಟ್ಟರು.
ಇಂದು ತೋಟಗಾರಿಕೆ ಇಲಾಖೆ ವತಿಯಿಂದ ಹೊಸ ವರ್ಷದ ಪ್ರಯುಕ್ತ ವಿಧಾನಸೌಧ ಆವರಣದ ಕೈ ತೋಟದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆ ಹಿಂಭಾಗ ಆಯೋಜಿಸಿದ್ದ “ಸಸಿ ನೆಡುವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಗಂಧದ ಸಸಿಯನ್ನು ನೆಟ್ಟು, ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಗಳು ರೈತರೊಂದಿಗೆ ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ಅವರು ಗಿಡ ಮರಗಳನ್ನು ಇಷ್ಟ ಪಡುತ್ತಿದ್ದ ಕಾರಣ ಅವರ ಪ್ರತಿಮೆ ಇರುವ ಆವರಣದಲ್ಲಿ ಇಂದು ಗಂಧದ ಸಸಿಯನ್ನು ನೆಟ್ಟಿದ್ದೇವೆ ಎಂದರು.
ಗಂಧದ ಮರ ಇರುವ ಕಡೆ ಶಾಂತಿ, ನೆಮ್ಮದಿ ದೊರೆಯುವ ಜೊತೆಗೆ ವಾತಾವರಣವು ಉಲ್ಲಾಸದಿಂದ ಕೂಡಿರುತ್ತದೆ ಎಂದರು.ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕರಾದ ರಮೇಶ್ ಬಾಬು, ಕಾರ್ಯದರ್ಶಿ ಶ್ರೀಮತಿ ಆರ್.ಮಹಾಲಕ್ಷ್ಮಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
