ಸಮಗ್ರ ಸುದ್ದಿ

ಪ್ರವಾಸೋದ್ಯಮವು ಅಡೆತಡೆಗಳನ್ನು ನಿವಾರಿಸುವ ಸಾಮಾಜಿಕ ಶಕ್ತಿ: ಸಚಿವ ಹೆಚ್.ಕೆ.ಪಾಟೀಲ್

Share

ಬೆಂಗಳೂರು: ಪ್ರವಾಸೋದ್ಯಮವು ಅಡೆತಡೆಗಳನ್ನು ನಿವಾರಿಸುವ ಒಂದು ಸಾಮಾಜಿಕ ಶಕ್ತಿ. ಅನುಭವದ ಗುಣಮಟ್ಟ ಮತ್ತು ಸುಸ್ಥಿರತೆಯ ಮೇಲೆ ಪ್ರಗತಿಯ ಪಾಲುದಾರರು, ಪ್ರವಾಸೋದ್ಯಮ ಕ್ಷೇತ್ರದ ಎಲ್ಲಾ ವಿಭಾಗದ ಅಧಿಕಾರಿಗಳು, ನೌಕರರು, ವಿವಿಧ ಪ್ರವಾಸಿ ಪ್ರಿಯರು ಗಮನ ಹರಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.

ರೆಸಿಡೆನ್ಸಿ ರಸ್ತೆಯ ಮೈಸೂರು ಹಾಲ್ ನಲ್ಲಿ ಆಯೋಜಿಸಿದ್ದ `ಕನೆಕ್ಟ್-೨೦೨೬’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವಲಯದ ಬೆಳವಣಿಗೆಯ ಪ್ರಯೋಜನಗಳು ಬೆಂಗಳೂರಿನ ಜನನಿಬಿಡ ಬೀದಿಗಳಿಂದ ಹಿಡಿದು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಶಾಂತ ಹಳ್ಳಿಗಳವರೆಗೆ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.

ಕರ್ನಾಟಕವನ್ನು ಶಾಂತಿ, ಕಲಿಕೆ ಮತ್ತು ಸಮೃದ್ಧಿಯ ದಾರಿದೀಪವನ್ನಾಗಿಸಬೇಕು. ಇಂದು ಪ್ರವಾಸಿಗರೆಂದರೆ ದೊಡ್ಡ ದೊಡ್ಡ ರೆಸಾರ್ಟ್ ಗಳಿಗೆ ತೆರಳುವ ಪ್ರವಾಸಿಗರಷ್ಟೇ ಅಲ್ಲ. ಅಂಕಿ ಅಂಶಗಳ ಪ್ರಕಾರ 80 ರಿಂದ 85 ರಷ್ಟು ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ತೆರಳುತ್ತಿದ್ದು, ಅವರುಗಳಿಗೆ ಉತ್ತಮ ಗುಣಮಟ್ಟದ ಹೋಟೆಲ್ ಸೌಲಭ್ಯ, ಹೋಂ ಸ್ಟೇ, ಕಮ್ಯೂನಿಟಿ ಸ್ಟೇ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಕಡೆ ಈ ಉದ್ಯಮ ಯೋಜನೆ ರೂಪಿಸಬೇಕಿದೆ. ಒಬ್ಬ ದೇಶೀಯ ಪ್ರವಾಸಿಗ ರೂ 6,178ಗಳನ್ನು ಮತ್ತು ಒಬ್ಬ ವಿದೇಶಿ ಪ್ರವಾಸಿಗ ರೂ 2,87,261ಗಳನ್ನು ವೆಚ್ಚ ಮಾಡುತ್ತಿದ್ದು, ಈ ವೆಚ್ಚದ ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಮೂಲಕ ಅಭಿವೃದ್ಧಿ ಮಾಡುವ ಕಡೆ ಯೋಜನೆ ರೂಪಿಸಬೇಕಿದೆ ಎಂದರು.

ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಸದುಪಯೋಗ ಪಡಿಸಿಕೊಂಡು ಶೇ 50% ರಷ್ಟು ಇರುವ ಮಹಿಳೆಯರಿಗೆ ಈ ಸೇವೆಯನ್ನು ನೀಡುವ ಮೂಲಕ ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸಬೇಕು. ರಾಜ್ಯವನ್ನು ಹೆಚ್ಚಾಗಿ “ಒಂದು ರಾಜ್ಯ, ಹಲವು ಜಗತ್ತು” ಎಂದು ಬಣ್ಣಿಸಲಾಗುತ್ತದೆ. ವಾಸ್ತುಶಿಲ್ಪದ ಅದ್ಭುತಗಳಾದ ಬೇಲೂರು ಹಳೇಬೀಡು, ಹಂಪಿ, ಲಕ್ಕುಂಡಿ, ಬಾದಾಮಿ, ಐಹೊಳೆ, ಪಟ್ಟದಕಲ್ಲಿನಿಂದ ಹಿಡಿದು, ಮಂಜಿನ ಬೆಟ್ಟಗಳು ಮತ್ತು ೩೪೩ ಕಿಲೋಮೀಟರ್ ಉದ್ದದ ಸುಂದರ ಕರಾವಳಿಯವರೆಗೆ – ಈ ನುಡಿಗಟ್ಟು ನಮ್ಮ ನಾಡಿನ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-25ಅನ್ನು ಜಾರಿಗೆ ತಂದಿದ್ದು ನಾವು ಉಲ್ಲೇಖಿಸಿರುವಂತೆ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದ್ದು ಕೇವಲ ಒಂದು ವಲಯವನ್ನು ನಿರ್ಮಿಸುತ್ತಿಲ್ಲ; ಬದಲಾಗಿ ಅಂತರ್ಗತ ಬೆಳವಣಿಗೆ, ಶಾಂತಿ ಮತ್ತು ಜ್ಞಾನೋದಯದ ಇಂಜಿನ್ ಅನ್ನು ನಿರ್ಮಿಸುತ್ತಿದ್ದೇವೆ. ನಮ್ಮ ರಾಜ್ಯವನ್ನು ಒಂದು `ಟ್ರಿಲಿಯನ್ ಡಾಲರ್’ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಗಣನೀಯ ಕೊಡುಗೆ ನೀಡುವ ಮೂಲಕ, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವುದು ನಮ್ಮ ಗುರಿಯಾಗಿದೆ.

ಈಗ ನಡೆಯುತ್ತಿರುವ ಎಐ ಸಮ್ಮಿಟ್ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲೂ ಹಲವಾರು ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯಬೇಕು. ಬೆಂಗಳೂರು ಟೆಕ್ ಸಮ್ಮಿಟ್, ಇನ್ವೆಸ್ಟರ್ಸ್ ಮೀಟ್, ಹಾಗೂ ನಮ್ಮ ಕೆಐಟಿಇ ಸಮಾವೇಶದ ಯಶಸ್ಸಿನ ನಂತರ, ಐಐಟಿಎಂ, ಟಿಟಿಎಫ್ ಕಾರ್ಯಕ್ರಮಗಳ ನಂತರ ಇತರೆ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯೋನ್ಮುಖರಾಗಿ ಹೆಚ್ಚೆಚ್ಚು ಇವೆಂಟ್ ಗಳನ್ನು ಆಯೋಜಿಸಬೇಕು. ಬ್ರ್ಯಾಂಡ್ ಬೆಂಗಳೂರು ಅಷ್ಟೇ ಅಲ್ಲದೇ ಬಿಯಾಂಡ್ ಬೆಂಗಳೂರಿಗೂ ಹೆಚ್ಚಿನ ಒತ್ತನ್ನು ಮತ್ತು ಸಮಯವನ್ನು ನಾವೆಲ್ಲರೂ ನೀಡಬೇಕಾಗಿದೆ. ಹೆಚ್ಚೆಚ್ಚು ಕನೆಕ್ಟ್ ಕಾರ್ಯಕ್ರಮಗಳನ್ನು ರಾಜ್ಯದೆಲ್ಲಡೆ ಆಯೋಜಿಸಬೇಕು ಎಂದರು.

ಕಠಿಣ ಸಮಯದಲ್ಲಿ ನಿಮ್ಮೊಂದಿಗೆ:

ಕನ್ವೆಷನಲ್ ಟೂರಿಸ್ಟ್ ಪ್ರಾಜೆಕ್ಟ್ ಗಳಷ್ಟೇ ಅಲ್ಲದೇ ಪಿಪಿಪಿ ಮಾದರಿಯಲ್ಲಿ ಎಂಐಸಿಐ ಟೂರಿಸಂ, ಇವೆಂಟ್ ಟೂರಿಸಂ ಮೆಡಿಕಲ್ ಟೂರಿಸಂ, ಗಾಲ್ಫ್ ಟೂರಿಸಂ ಪ್ರಾಡಕ್ಟ್ ಮುಂತಾದ ನೂತನ ಪ್ರಾಡಕ್ಟ್ ಗಳನ್ನು ಸಹಾ ಬೆಳೆಸಬೇಕು. ಸ್ಮಾರಕ ಯೋಜನೆಯ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅವಶ್ಯಕತೆ ಇದೆ ಎಂದರು.

ಪ್ರವಾಸೋದ್ಯಮ ನಿರ್ವಾಹಕರು, ಹೋಟೆಲ್ ಮಾಲೀಕರು ಮತ್ತು ಹೋಂ ಸ್ಟೇ ಮಾಲೀಕರು ಈ ಉದ್ಯಮದ ಜೀವಾಳ. ಎಲ್ಲರ ಸಹಕಾರ, ಪ್ರೋತ್ಸಾಹವಿಲ್ಲದಿದ್ದರೆ ಪ್ರವಾಸೋದ್ಯಮ ವಲಯ ಸ್ಥಬ್ದವಾಗುತ್ತದೆ. ಗಟ್ಟಿದನಿಯಲ್ಲಿ ತ್ರಿಕರಣಪೂರ್ವಕವಾಗಿ ಈ ವಲಯವನ್ನು ಪ್ರೋತ್ಸಾಹಿಸಬೇಕು. ಎಂತಹ ಕಠಿಣ ಸಂದರ್ಭದಲ್ಲೂ ಸಹಾ ನಿಮ್ಮ ಬೆಂಬಲಕ್ಕೆ ನಮ್ಮ ಸರ್ಕಾರವು ನಿಲ್ಲುತ್ತದೆ. ನಮ್ಮ ವಲಯದಲ್ಲಿ ಎಐ ಯುಗದಲ್ಲಿ ಮುಖ್ಯವಾಗಿ ವರ್ತನೆಯ ಮತ್ತು ಆ್ಯಟಿಟ್ಯೂಡಿನಲ್ ಬದಲಾವಣೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ರಾಜ್ಯದ ಪ್ರವಾಸೋದ್ಯಮ ವಲಯದ ಭವಿಷ್ಯವನ್ನು ನಾವೆಲ್ಲರೂ ಸೇರಿ ಬದಲಾಯಿಸುವ ಸಮಯ ಬಂದಿದೆ ಎಂದು ಪ್ರವಾಸೋದ್ಯಮ ಸಚಿವರು ಹೇಳಿದರು.

ಧನಾತ್ಮಕ ಬದಲಾವಣೆ ತನ್ನಿ:

ನೀವೆಲ್ಲರೂ ನಮ್ಮ ರಾಜ್ಯದ ರಾಯಭಾರಿಗಳಾಗಿ ಪ್ರತಿನಿಧಿಸಿ, ಈ ವಲಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವಂತಹ ಪ್ರಯತ್ನಗಳನ್ನು ಮಾಡಬೇಕಿದೆ. ನಿಮ್ಮ ಬೆಳವಣಿಗೆಯನ್ನು ಬೆಂಬಲಿಸಲು, ಪ್ರವಾಸೋದ್ಯಮ ಇಲಾಖೆಯು ಪ್ರೋತ್ಸಾಹಕಗಳು ಮತ್ತು ಸಬ್ಸಿಡಿಗಳ ಬಲವಾದ ಚೌಕಟ್ಟನ್ನು ನೀಡಿ ನಿಮ್ಮಗಳ ಮೂಲಕ ಪ್ರವಾಸೋದ್ಯಮ ವಲಯಕ್ಕೆ ಶಕ್ತಿ ನೀಡುವ ಸಾಧನವಾಗಿದೆ.

ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿಯವರೆಗೂ ರೂ.2091.46 ಕೋಟಿ ಮೊತ್ತದ 122 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ 11,200 ನೇರ ಉದ್ಯೋಗ ಸೃಷ್ಟಿಯಾಗಲಿದ್ದು, ಇದೊಂದು ರಾಜ್ಯ ಪ್ರವಾಸೋದ್ಯಮ ವಲಯದಲ್ಲಿ ಹೊಸ ಮೈಲಿಗಲ್ಲಾಗಿದೆ. ನಮ್ಮ 343 ಕಿಲೋಮೀಟರ್ ಉದ್ದದ ಸುಂದರ ಕರಾವಳಿಯ ಸಂಪೂರ್ಣ ಲಾಭ ನಮ್ಮ ವಲಯಕ್ಕೆ ತಲುಪಿಸಲು ಈಗಾಗಲೇ ಮಂಗಳೂರಿನಲ್ಲಿ ಕರಾವಳಿ ಭಾಗಿದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿ, ನಮ್ಮ ಸರ್ಕಾರವು ಈ ವಲಯದ ಅಭಿವೃದ್ದಿಗೆ ವೇಗ ನೀಡುವ ಸಂದೇಶವನ್ನು ನೀಡಲಾಗಿದೆ.

ಕಳೆದ ವರ್ಷ ನಿಮ್ಮೆಲ್ಲರ ಸಹಕಾರದಿಂದ ದಕ್ಷಿಣ ಭಾರತ ರಾಜ್ಯಗಳ ಹೂಡಿಕೆ ಸಮಾವೇಶ ನಡೆದು ರೂ.3000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಪ್ಪಂದ ನಡೆದಿದ್ದು, ಇಲ್ಲಿಯವರೆಗೂ ಒಂದು ಯೋಜನೆಯು ಸಾಕಾರಗೊಳ್ಳದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದ ಅವರು, ನೀವುಗಳು ಮುಂದೆ ಬಂದು ಬಂಡವಾಳ ಹೂಡಿಕೆ ಮಾಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದಷ್ಟೇ ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಇತರೆ ಬಂಡವಾಳ ಹೂಡಿಕೆದಾರರನ್ನು ಕರೆತರಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಪಿಎಸ್ ಅಧ್ಯಕ್ಷರಾದ ಶಾಮರಾಜು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರಾ, ಜೆ ಎಲ್ ಆರ್ ವ್ಯವಸ್ಥಾಪಕ ನಿರ್ದೇಶಕರಾದ ಮನು ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು, ಹೂಡಿಕೆದಾರರು, ಹೋಂ ಸ್ಟೇ ಮತ್ತು ಪ್ರವಾಸಿ ರೆಸಾರ್ಟ್ ಗಳ ಉದ್ಯಮಿಗಳು ಮತ್ತು ಪ್ರವಾಸಿಗರು ಉಪಸ್ಥಿತರಿದ್ದರು.


Share

You cannot copy content of this page