ಮಂಡ್ಯ: ಜಿಲ್ಲೆಯಲ್ಲಿ ಕೃಷಿ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವ ರೈತರು ಆರ್ಥಿಕವಾಗಿ ಸದೃಢವಾಗಲು ಶಕ್ತಿ ತುಂಬುವ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಎನ್. ಚಲುವರಾಯಸ್ವಾಮಿ ಅವರು ಹೇಳಿದರು.
ಇಂದು ಮಂಡ್ಯ ತಾಲ್ಲೂಕು ಕೊತ್ತತ್ತಿ ಹೋಬಳಿ ತೂಬಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಎಲೆಚಾಕನಹಳ್ಳಿ, ಯಲಿಯೂರು, ಉರಮಾರ ಕಸಲಗೆರೆ, ರಾಗಿಮುದ್ದನಹಳ್ಳಿ, ಜಕ್ಕನಹಳ್ಳಿ, ಆಲುಗೂಡು ಕೆರೆಕಟ್ಟೆಗಳಿಗೆ ಲೋಕಪವಾನಿ ನದಿಯಿಂದ ನೀರು ತುಂಬಿಸಲು ಅನುವು ಮಾಡಿಕೊಟ್ಟ ನೆನಪಿಗಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರು ಆದ ಬಸವರಾಜ ಬೊಮ್ಮಾಯಿ ರವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ತಾಲ್ಲೂಕಿನ ತೂಬಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ (ಎಲೆಚಾಕನಹಳ್ಳಿ ಏತನೀರಾವರಿ ಯೋಜನೆ) ಲೋಕಪಾವನಿ ನದಿಯಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಮಹತ್ವದ ಕೆಲಸಕ್ಕೆ ನಾಂದಿಯಾಡಿದ ಕೀರ್ತಿ ಬೊಮ್ಮಾಯಿ ರವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ರೈತರಿಗೆ ಮತ್ತು ಜಾನುವಾರುಗಳಿಗೆ ನೀರು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ತೂಬಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಕೆರೆ-ಕಟ್ಟೆಗಳನ್ನು ತುಂಬಿಸಿ ಮಹತ್ವ ಪೂರ್ಣ ಯೋಜನೆಯನ್ನು ನೀಡಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯು ಸುತ್ತಲೂ ಹಸಿರು ವಾತಾವರಣದಿಂದ ಕಂಗೊಳಿಸುತ್ತದೆ. ಆದರೆ ಭೂ ಮಟ್ಟವನ್ನು ನೋಡಿದರೆ 55% ಮಾತ್ರ ನೀರಾವರಿ ಪ್ರದೇಶವನ್ನು ಹೊಂದಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ನೀರಾವರಿ ವ್ಯವಸ್ಥೆ ಕಲ್ಪಿಸಿ ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಮಂಡ್ಯ ತಾಲ್ಲೂಕು ಕೊತ್ತತ್ತಿ ಹೋಬಳಿ ತೂಬಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಎಲೆಚಾಕನಹಳ್ಳಿ, ಯಲಿಯೂರು, ಉರಮಾರ ಕಸಲಗೆರೆ, ರಾಗಿಮುದ್ದನಹಳ್ಳಿ, ಜಕ್ಕನಹಳ್ಳಿ, ಆಲುಗೂಡು ಕೆರೆಕಟ್ಟೆಗಳಿಗೆ ಲೋಕಪವಾನಿ ನದಿಯಿಂದ ನೀರು ಹರಿಸಿ ಕೆರೆಕಟ್ಟೆ ತುಂಬಿಸುವ ಯೋಜನೆ ಸಂಪೂರ್ಣವಾಗಿದೆ. ಇಷ್ಟು ವರ್ಷ ಕಳೆದ ಮೇಲೆ ಯೋಜನೆಯು ಲೋಕಾರ್ಪಣೆಯಾಗಿದೆ ಎಂದರು.
ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಎಲ್ಲಾ ಭಾಗಗಳಲ್ಲೂ ಅಭಿವೃದ್ಧಿ ಕೆಲಸ ಮಾಡುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಜನರ ಜೊತೆ ಇದ್ದು ಜನರಿಂದ ನಾಯಕ ಆಗೋದು ಬಹಳ ಮುಖ್ಯ ನಮ್ಮ ಅಭಿವೃದ್ಧಿ ಕೆಲಸಗಳು ನಮಗೆ ಸಂತಸ ತಂದಿದೆ ಎಂದರು.
ಮೈಸೂರು ಪರಮಪೂಜ್ಯ ಜಗದ್ಗುರು ಸುತ್ತೂರು ವೀರಸಿಂಹಾಸನಾಧೀಶ ಜೆ.ಎಸ್.ಎಸ್. ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಸಂಸದರಾದ ಬಸವರಾಜ ಬೊಮ್ಮಾಯಿ ರವರು ಬೂಕನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ 8 ಗ್ರಾಮಗಳಿಗೆ ಎಲೆಚಾಕನಹಳ್ಳಿ ಏತನೀರಾವರಿ ಯೋಜನೆಯಡಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮಹತ್ವದ ಕೆಲಸವನ್ನು ಮಾಡಿದ್ದರಿಂದ ರೈತರಿಗೆ ಆರ್ಥಿಕವಾಗಿ ಅಭಿವೃದ್ದಿ ಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕೃಷ್ಣರಾಜಸಾಗರ ಜಲಾಶಯದಲ್ಲಿ ಬಾಗಿಲು ಅಳವಡಿಸಿರುವುದರಿಂದ ನೀರು ಪೋಲ್ ಆಗದಂತೆ ಮಾಡಲಾಗಿದೆ. ಹಾಗೂ ರೈತರ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಯುವಕರು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದರು ಇತ್ತೀಚಿನ ದಿನಗಳಲ್ಲಿ ನೀರಿನ ಸೌಲಭ್ಯ ಇರುವುದರಿಂದ ಹೆಚ್ಚು ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ನೀರು ಬಹಳ ಮುಖ್ಯ ವಾಗಿರುವುದರಿಂದ ನೀರನ್ನು ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಆರ್ಥಿಕವಾಗಿ ಸದೃಢವಾಗಿ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ
ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರು ಆದ ಬಸವರಾಜ ಬೊಮ್ಮಾಯಿ ರವರು ನೀರಾವರಿ ಮಂತ್ರಿಯಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತೂಬಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಎಲೆಚಾಕನಹಳ್ಳಿ, ಯಲಿಯೂರು, ಉರಮಾರ ಕಸಲಗೆರೆ, ರಾಗಿಮುದ್ದನಹಳ್ಳಿ, ಜಕ್ಕನಹಳ್ಳಿ, ಆಲುಗೂಡು ಕೆರೆಕಟ್ಟೆಗಳಿಗೆ ಲೋಕಪವಾನಿ ನದಿಯಿಂದ ನೀರು ತುಂಬಿಸಲು ಅನುವು ಮಾಡಿ ರೈತರಿಗೆ ನೆರವು ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಶಾಸಕ ಎ.ಬಿ ರಮೇಶ ಬಂಡಿಸಿದ್ದೇಗೌಡ, ಶ್ರೀರಂಗಪಟ್ಟಣದ ಮಾಜಿ ಶಾಸಕರು ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಹಾಲಿ ಶಾಸಕರು ಸಿ. ಎನ್. ಅಶ್ವಥ್ ನಾರಾಯಣ್, ಕರ್ನಾಟಕ ಸಂಘದ ಅಧ್ಯಕ್ಷರು ಪ್ರೊ. ಜಯಪ್ರಕಾಶ್ ಗೌಡ ಉಪಸ್ಥಿತರಿದ್ದರು.
