ಬೆಂಗಳೂರು: ಭಾರತ ಚುನಾವಣಾ ಆಯೋಗವು 2026ರ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳನ್ನು ನಡೆಸಲು ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯದ 4 ಪ್ರಮುಖ ಸ್ಥಾನಗಳು ಸೇರಿದಂತೆ ವಿವಿಧ ರಾಜ್ಯಗಳ ನಿವೃತ್ತಿ ಹೊಂದಲಿರುವ ಸದಸ್ಯರ ಖಾಲಿ ಸ್ಥಾನಗಳಿಗೆ ಈ ಕೆಳಗಿನಂತೆ ಚುನಾವಣಾ ಪ್ರಕ್ರಿಯೆಗಳು ಜರುಗಲಿವೆ.
ಚುನಾವಣಾ ವೇಳಾಪಟ್ಟಿಯಂತೆ ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ 01 ಜೂನ್ 2026 (ಸೋಮವಾರ), ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 08 ಜೂನ್ (ಸೋಮವಾರ) ನಾಮಪತ್ರಗಳ ಪರಿಶೀಲನೆ 09 ಜೂನ್ (ಮಂಗಳವಾರ), ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ 11 ಜೂನ್ (ಗುರುವಾರ), ಮತದಾನದ ದಿನಾಂಕ 18 ಜೂನ್ (ಗುರುವಾರ), ಮತದಾನದ ಸಮಯ ಬೆಳಿಗ್ಗೆ 09:00 ಗಂಟೆಯಿಂದ ಸಾಯಂಕಾಲ 04:00 ಗಂಟೆಯವರೆಗೆ ಮತಗಳ ಎಣಿಕೆ ಕಾರ್ಯ 18 ಜೂನ್ (ಗುರುವಾರ) ಸಾಯಂಕಾಲ 05:00 ಗಂಟೆಗೆ, ಚುನಾವಣಾ ಪ್ರಕ್ರಿಯೆ 20 ಜೂನ್ (ಶನಿವಾರ) ಪೂರ್ಣಗೊಳ್ಳಲಿದೆ.
ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಒಟ್ಟು 24 ರಾಜ್ಯಸಭಾ ಸದಸ್ಯರು ಬರುವ 2026ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿವೃತ್ತಿ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕದ ನಾಲ್ಕು ಪ್ರಮುಖ ನಾಯಕರು ಸೇರಿದಂತೆ ವಿವಿಧ ರಾಜ್ಯಗಳ ನಿವೃತ್ತಿ ಹೊಂದಲಿರುವ ಸದಸ್ಯರ ಅಧಿಕೃತ ವಿವರಗಳು ಈ ಕೆಳಗಿನಂತಿವೆ:
ಕರ್ನಾಟಕ ರಾಜ್ಯದಿಂದ ಒಟ್ಟು 4 ಸದಸ್ಯರು 2026 ರ ಜೂನ್ 25 ರಂದು ನಿವೃತ್ತಿ ಹೊಂದಲಿದ್ದು, ಆ ಸ್ಥಾನಗಳಿಗೂ ಈ ಚುನಾವಣಾ ವೇಳಾಪಟ್ಟಿಯಂತೆ ಮತದಾನ ನಡೆಯಲಿದೆ. ರಾಜ್ಯಸಭೆ ಸದಸ್ಯರಾದ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ, ಹೆಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರು ನಿವೃತ್ತಿ ಹೊಂದಲಿದ್ದಾರೆ.
ಆಂಧ್ರಪ್ರದೇಶದ ಅಯೋಧ್ಯ ರಾಮಿ ರೆಡ್ಡಿ ಅಲ್ಲಾ, ನತ್ವಾಮಿ ಪರಿಮಳ್, ಪಿಲ್ಲಿ ಸುಭಾಷ್ ಚಂದ್ರ ಬೋಸ್, ಸನಾ ಸತೀಶ್ ಬಾಬು, ಗುಜರಾತ್ನ ರಾಮ್ಭಾಯ್ ಹರ್ಜಿಭಾಯ್ ಮೊಕರಿಯಾ, ಅಮಿನ್ ನರಹರಿ ಹೀರಾಭಾಯ್, ಗೋಹಿಲ್ ಶಕ್ತಿಸಿನ್ಹಜಿ ಹರಿಚಂದ್ರಸಿನ್ಹಜಿ, ರಮಿಲಾ ಬೆಚರಭಾಯ್ ಬಾರಾ, ರಾಜಸ್ಥಾನದ ನೀರಜ್ ಡಾಂಗಿ, ರಾಜೇಂದ್ರ ಗೆಹ್ಲೋಟ್, ರವನೀತ್ ಸಿಂಗ್, ಮಧ್ಯಪ್ರದೇಶದ ಜಾರ್ಜ್ ಕುರಿಯನ್, ದಿಗ್ವಿಜಯ್ ಸಿಂಗ್, ಸುಮೇರ್ ಸಿಂಗ್ ಸೋಲಂಕಿ, ಜಾಖರ್ಂಡ್ ನ ದೀಪಕ್ ಪ್ರಕಾಶ್ ಮತ್ತು ಶಿಬು ಸೊರೇನ್ (ಶಿಬು ಸೊರೇನ್ ಅವರ ಸ್ಥಾನವು 04.08.2025 ರಿಂದಲೇ ತೆರವಾಗಿದೆ).
ಮಣಿಪುರದ ಮಹಾರಾಜ ಸನಾಜಾವೊಬಾ ಲೀಶೆಂಬಾ ಹಾಗೂ ಮೇಘಾಲಯದ ವಾನ್ವೈರಾಯ್ ಖರ್ಲುಖಿ ಅವರು 2026 ರ ಜೂನ್ 21 ರಂದು ನಿವೃತ್ತಿ ಹೊಂದಲಿದ್ದಾರೆ.
ಅರುಣಾಚಲ ಪ್ರದೇಶದ ನಬಮ್ ರೆಬಿಯಾ 2026 ರ ಜೂನ್ 23 ರಂದು ಹಾಗೂ ಮಿಜೋರಾಂನ ಕೆ. ವನ್ಲಾಲ್ವೇನಾ 2026 ರ ಜುಲೈ 19 ರಂದು ನಿವೃತ್ತಿ ಹೊಂದಲಿದ್ದಾರೆ.
ಬ್ಯಾಲೆಟ್ ಪತ್ರಿಕೆಯಲ್ಲಿ ಆದ್ಯತೆಗಳನ್ನು ಗುರುತಿಸಲು ಚುನಾವಣಾಧಿಕಾರಿಗಳು ಒದಗಿಸುವ ನಿಗದಿತ ವಿಶೇಷ ಸಂಯೋಜಿತ ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಮಾತ್ರ ಬಳಸಬೇಕಾಗಿರುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಪೆನ್ ಬಳಸುವಂತಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅಗತ್ಯ ವೀಕ್ಷಕರನ್ನು ನೇಮಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
