ಸಮಗ್ರ ಸುದ್ದಿ

ಖಾಲಿ ನಿವೇಶನ‌ ಮಾಲೀಕರು ಸ್ವತಃ ಸ್ವಚ್ಛಗೊಳಿಸದಿದ್ದರೆ 25 ರಿಂದ 1 ಲಕ್ಷ ರೂ. ದಂಡ : ಮಹೇಶ್ವರ್ ರಾವ್

Share

ಬೆಂಗಳೂರು:ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವಾಗಿರಿಸುವ ಉದ್ದೇಶದಿಂದ ಆಗಸ್ಟ್-2026 ಮಾಹೆಯಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಸದರಿ ಅಭಿಯಾನದಡಿಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಆಡಳಿತ ಹೊಂದಿರುವ ಎಲ್ಲಾ ನಗರ ಪಾಲಿಕೆಗಳು ಹಾಗೂ ಇತರೇ ಸಂಸ್ಥೆಗಳ ವತಿಯಿಂದ ನಗರದ ರಸ್ತೆಗಳಲ್ಲಿ ಕಪ್ಪುಚುಕ್ಕೆಗಳು, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ, ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಪೈಪುಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಉದ್ದೇಶಿಸಲಾಗಿದೆ.

ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ ಉಪವಿಧಿ 18(1)(ಬಿ) ರನ್ವಯ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.

ನಗರದಲ್ಲಿನ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಶೇಖರಣೆಯಾಗಿರುವ ತ್ಯಾಜ್ಯ/ಡೆಬ್ರಿಸ್ ಅನ್ನು ದಿನಾಂಕ: 15.08.2026 ರೊಳಗಾಗಿ ತಪ್ಪದೇ ಸ್ವಚ್ಚಗೊಳಿಸತಕ್ಕದ್ದು.

ಒಂದು ವೇಳೆ ದಿನಾಂಕ 15.08.2026 ರೊಳಗಾಗಿ ಸಂಬಂಧಿಸಿದ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದಲ್ಲಿ, ನಗರಪಾಲಿಕೆಯ ವತಿಯಿಂದ ತ್ಯಾಜ್ಯ/ಡೆಬಿಸ್ ಅನ್ನು ತೆರವುಗೊಳಿಸಿ, ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಹಾಗೂ ತೆರವುಗೊಳಿಸಿದ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ ಉಪವಿಧಿ 18(1)(ಡಿ) (ii) ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 285(2) ರನ್ವಯ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು.

ತೆರಿಗೆ ಬಾಕಿಯನ್ನು ಕರ್ನಾಟಕ ಭೂಕಂದಾಯ ಕಾಯ್ದೆ, 1964 ರ ಅನುಸಾರ ವಸೂಲಾತಿ ಕ್ರಮ ಜರುಗಿಸಲಾಗುವುದು. ನಂತರದ ಪ್ರಕರಣಗಳಲ್ಲಿ ಉಪವಿಧಿ 18(1)(ಡಿ) (iii) ರನ್ವಯ ಮೊದಲ ಉಲ್ಲಂಘನೆಗೆ ರೂ.25,000/- ಹಾಗೂ ನಂತರದ ಉಲ್ಲಂಘನೆಗಳಿಗೆ ರೂ.50,000/- ರಿಂದ ರೂ.1,00,000/- ವರೆಗೆ ದಂಡ ವಿಧಿಸಲಾಗುವುದು.

ಖಾಲಿ ನಿವೇಶನಗಳನ್ನು ದಿನಾಂಕ:15.08.2026 ರೊಳಗಾಗಿ ಸ್ವಚ್ಛಗೊಳಿಸದಿದ್ದಲ್ಲಿ, ಸಾರ್ವಜನಿಕರು ಅಂತಹ ನಿವೇಶನಗಳ ಛಾಯಚಿತ್ರ ಸಹಿತ GPS Co-ordinates ನೊಂದಿಗೆ ದೂರನ್ನು ವಾಟ್ಸ್ ಆಪ್ ಚಾಟ್-ಬಾಟ್ ಸಂಖ್ಯೆ: +91-9448197197 ಗೆ ಸಲ್ಲಿಸಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.

ನಿವೇಶನಗಳ ಮಾಲೀಕರು ಸ್ವಚ್ಛಗೊಳಿಸಿದ ನಿವೇಶನಗಳ ಸುತ್ತಮುತ್ತ ಬೇಲಿ/ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಂಡು, ಅನಧಿಕೃತ ತ್ಯಾಜ್ಯ ವಿಲೇವಾರಿಯಾಗದಂತೆ ವ್ಯವಸ್ಥೆ ಕಲ್ಪಿಸಿಕೊಳ್ಳುವುದು. ಸ್ವಚ್ಛ, ಸುಂದರ ಮತ್ತು ವಾಸಯೋಗ್ಯ ಬೆಂಗಳೂರು ನಿರ್ಮಾಣಕ್ಕಾಗಿ ಸಹಕರಿಸಿ, ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ತಿಳಿಸಿದ್ದಾರೆ.


Share

You cannot copy content of this page