ಬೆಳಗಾವಿ ಸುವರ್ಣ ವಿಧಾನಸೌಧ: ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಪೌರಾಡಳಿತ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿವಿಧ ಯೋಜನೆಗಳಡಿಯಲ್ಲಿ 2023 ಸಾಲಿನಿಂದ ಇಲ್ಲಿಯವರೆಗೆ ರೂ.150.08 ಕೋಟಿ ಬಿಡುಗಡೆಯಾಗಿದ್ದು, ರೂ.142.32 ಕೋಟಿ ವೆಚ್ಚವಾಗಿರುತ್ತದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹಿಂ ಖಾನ್ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಸದಸ್ಯ ಕೆ.ವಿವೇಕಾನಂದ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3.3 ಕಿ.ಮೀ ರಸ್ತೆಗಳು ಅಧಿಕ ಮಳೆಯಿಂದ ಹಾಳಾಗಿದ್ದು, ಈ ರಸ್ತೆಗಳನ್ನು ದುರಸ್ಥಿಪಡಿಸಲು ರೂ.330.00 ಲಕ್ಷಗಳ ಮೊತ್ತಕ್ಕೆ ಅಂದಾಜು ಸಿದ್ಧಪಡಿಸಲಾಗಿರುತ್ತದೆ. 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಅನುದಾನದಲ್ಲಿ ಸದರಿ ರಸ್ತೆಗಳನ್ನು ದುರಸ್ಥಿಪಡಿಸಲಾಗುತ್ತಿದೆ.
ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ 13 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿಯನ್ನು 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಒಟ್ಟು ಮೊತ್ತ ರೂ.277.50 ಲಕ್ಷಗಳಲ್ಲಿ ಕೈಗೊಳ್ಳಲಾಗುತ್ತಿದೆ.
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 9 ಕಿ.ಮೀ ರಸ್ತೆ, ದುರಸ್ತಿ ಕಾಮಗಾರಿಯನ್ನು ಸ್ಥಳೀಯ ಸಂಸ್ಥೆ ನಿಧಿಯಡಿ ಲಭ್ಯವಿರುವ ರೂ. 50 ಲಕ್ಷಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
