ಸಮಗ್ರ ಸುದ್ದಿ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

Share

ಬೆಂಗಳೂರು: ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ರೂಫ್‌ಟಾಪ್ ಫೋಟೋವೋಲ್ಟಾಯಿಕ್ ವ್ಯವಸ್ಥೆಗಳನ್ನು ಅಳವಡಿಸುವ ಕಾರ್ಯವನ್ನು ರಾಜ್ಯ ಸರ್ಕಾರ ತ್ವರಿತಗೊಳಿಸಲಿದೆ.

ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಸರ್ಕಾರಿ ಕಟ್ಟಡಗಳ ಸೌರೀಕರಣ, ಪಾವತಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

“ಸರ್ಕಾರಿ ಕಟ್ಟಡಗಳ ಸಮೀಕ್ಷೆ ನಡೆಸಲು ಲೋಕೋಪಯೋಗಿ ಇಲಾಖೆಯನ್ನು ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್‌ ರೂಫ್‌ ಟಾಪ್‌ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವನ್ನು ನೋಡಲ್ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ. ಸೌರಫಲಕ ಅಳವಡಿಸಲು ಅನುಕೂಲಕರವಾದ ಮೇಲ್ಛಾವಣಿ ಸ್ಥಳಾವಕಾಶ ಹೊಂದಿರುವ ಜಿಲ್ಲಾಧಿಕಾರಿಗಳ ಕಚೇರಿಗಳು ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಒತ್ತು ನೀಡಲು ಆದ್ಯತೆ ನೀಡಲಾಗುವುದು,” ಎಂದು ಸಭೆಯಲ್ಲಿ ಗೌರವ್ ಗುಪ್ತ ತಿಳಿಸಿದರು.

ಯೋಜನೆ ಅನುಷ್ಠಾನಕ್ಕೆ ರೆಸ್ಕೋ ಮತ್ತು ಕ್ಯಾಪೆಕ್ಸ್‌ ಮಾದರಿಗಳನ್ನು ವಿವರಿಸಿದ ಗೌರವ್‌ ಗುಪ್ತ, “ನವೀಕರಿಸಬಹುದಾದ ಇಂಧನ ಸೇವಾ ಸಂಸ್ಥೆ (ರೆಸ್ಕೋ) ಮಾದರಿಯಲ್ಲಿ ಸರ್ಕಾರಿ ಇಲಾಖೆಗಳು ಯಾವುದೇ ಆರಂಭಿಕ ಬಂಡವಾಳ ಹೂಡಿಕೆ ಮಾಡುವ ಅಗತ್ಯವಿರುವುದಿಲ್ಲ. ಯೋಜನೆಯ ಸಂಪೂರ್ಣ ವೆಚ್ಚವನ್ನು ಡೆವಲಪರ್‌ಗಳು ಭರಿಸಲಿದ್ದಾರೆ. ಒಪ್ಪಂದದ ಅವಧಿಯಲ್ಲಿ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ, ಉಪಕರಣಗಳ ಬದಲಾವಣೆ ಹಾಗೂ ಕಾರ್ಯಕ್ಷಮತೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಡೆವಲಪರ್‌ಗಳೇ ನಿರ್ವಹಿಸಲಿದ್ದಾರೆ. ಇದರಿಂದ ಸರ್ಕಾರಿ ಇಲಾಖೆಗಳ ವಿದ್ಯುತ್ ವೆಚ್ಚ ಕಡಿಮೆಯಾಗಲಿದ್ದು, ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.

“ಕ್ಯಾಪೆಕ್ಸ್‌ (ಕಟ್ಟಡಗಳು, ಯಂತ್ರೋಪಕರಣಗಳದಂತಹ ಸ್ವತ್ತು ಖರೀದಿಗೆ ಮಾಡುವ ಖರ್ಚು-ಬಂಡವಾಳ ವೆಚ್ಚ) ಮಾದರಿಯಲ್ಲಿ ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಯು ತನ್ನ ಸ್ವಂತ ನಿಧಿಯನ್ನು ಬಳಸಿಕೊಂಡು ಅಥವಾ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಮೇಲ್ಛಾವಣಿ ಸೌರ ಯೋಜನೆಯ ಮಾಲೀಕತ್ವವನ್ನು ಹೊಂದಲಿದೆ. ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಇಪಿಸಿ ಡೆವಲಪರ್‌ ಆಯ್ಕೆ ಮಾಡಲಾಗುವುದು. ನಿರ್ಮಾಣ, ಕಾರ್ಯಾರಂಭ ಹಾಗೂ ನಿಗದಿತ ಅವಧಿಯವರೆಗೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಇಪಿಸಿ ಡೆವಲಪರ್ ವಹಿಸಲಿದ್ದು, ನಂತರ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗುವುದು,” ಎಂದು ಅವರು ವಿವರಿಸಿದರು.

“ಉತ್ಪಾದನೆಯಾಗುವ ವಿದ್ಯುತ್ ಅನ್ನು ಮೊದಲು ಕಟ್ಟಡದ ಸ್ವಂತ ವಿದ್ಯುತ್ ಬಳಕೆಗೆ ವಿನಿಯೋಗಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ರವಾನಿಸಲಾಗುವುದು. ಗ್ರಿಡ್‌ನಿಂದ ಬಳಸಲಾದ ವಿದ್ಯುತ್ ಆಧರಿಸಿ ವಿದ್ಯುತ್‌ ವಿತರಣಾ ಕಂಪನಿಗಳು ಮಾಸಿಕ ವಿದ್ಯುತ್ ಬಿಲ್‌ಗಳನ್ನು ನೀಡಲಿದ್ದು, ಮೇಲ್ಛಾವಣಿ ಸೌರ ವ್ಯವಸ್ಥೆಯಿಂದ ಗ್ರಿಡ್‌ಗೆ ರಫ್ತು ಮಾಡಲಾದ ಹೆಚ್ಚುವರಿ ವಿದ್ಯುತ್‌ಗೆ ಪ್ರೋತ್ಸಾಹಧನವನ್ನೂ ಒದಗಿಸಲಿವೆ,” ಎಂದು ಅವರು ಹೇಳಿದರು.

“ಮೇಲ್ಛಾವಣಿ ಸೌರ ಯೋಜನೆಗಳಿಗೆ ಅಗತ್ಯವಿರುವ ಗ್ರಿಡ್ ಸಂಪರ್ಕ, ಮೀಟರಿಂಗ್ ಹಾಗೂ ನಿಯಂತ್ರಣಾತ್ಮಕ ನಿಯಮಗಳ ಪಾಲನೆಗೆ ಬೆಸ್ಕಾಂ ಮತ್ತು ಇತರ ಎಸ್ಕಾಂಗಳು ಅಗತ್ಯ ಸಹಕಾರ ನೀಡಲಿವೆ. ಈ ಸಮನ್ವಯವು ಸೌರ ವ್ಯವಸ್ಥೆಗಳನ್ನು ವಿದ್ಯುತ್ ಗ್ರಿಡ್‌ನೊಂದಿಗೆ ಸುಗಮವಾಗಿ ಸಂಯೋಜಿಸಲು ನೆರವಾಗಲಿದೆ,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಹೇಳಿದರು.

ಸಭೆಯಲ್ಲಿ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾತ್ ಮನೋಹರ್, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು, ಜೆ.ಆರ್‌.ಜೆ. ಹಾಗೂ ಇಂಧನ ಇಲಾಖೆ ಹಾಗೂ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

“ನವೀಕರಿಸಬಹುದಾದದ ಇಂಧನ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಸರ್ಕಾರಿ ಕಟ್ಟಡಗಳ ಸೌರೀಕರಣವು ಸಾಂಪ್ರದಾಯಿಕ ವಿದ್ಯುತ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ನವೀಕರಿಸಬಹುದಾದದ ಇಂಧನದ ಬಳಕೆಯನ್ನು ಸರ್ಕಾರ ಉತ್ತೇಜಿಸಲಿದೆ. ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವಲ್ಲಿ ನೆರವಾಗಲಿರುವ ಈ ಉಪಕ್ರಮವು, ಸರ್ಕಾರಿ ಕಟ್ಟಡಗಳಲ್ಲಿ ಇಂಧನ ಸುಸ್ಥಿರತೆಯನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ನೆರವಾಗಲಿದೆ.
ಕೆ.ಜೆ. ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವರು


Share

You cannot copy content of this page