ಬೆಂಗಳೂರು: ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪಿ. ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ಚಿಂತನೆಯ ತಿರುಳು, ಪ್ರಗತಿಪರ ವಿಚಾರಗಳನ್ನು ಪಠ್ಯಗಳಲ್ಲಿ ಒಳಗೊಂಡ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ,” ಎಂದರು.
“ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮೀಸಲಾದ ಸೊತ್ತಲ್ಲ, ಸಾಮಾನ್ಯರ ಸೊತ್ತು. ಈಗಿನ ಯುವ ಪೀಳಿಗೆಗೆ ಅಂಬೇಡ್ಕರ್ ಪ್ರಿಯರಾಗುತ್ತಿದ್ದಾರೆ. ಇತ್ತೀಚೆಗೆ ಅಂಬೇಡ್ಕರ್ ಅವರ ಹೆಸರಿನಲ್ಲಿ ಬೀದಿಗಿಳಿದು ಹೋರಾಡಿದ ಜೆನ್ಝಿ ಆಂದೋಲನ ಇದಕ್ಕೆ ಉದಾಹರಣೆ,” ಎಂದು ಹೇಳಿದರು.
ಅಂಬೇಡ್ಕರ್ ಜಯಂತಿ ಅಂಗವಾಗಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ನಿಗಮದ ಪರಿಶಿಷ್ಟ ಜಾತಿ ಮತ್ತು ವರ್ಗದ ಸಿಬ್ಬಂದಿಯ 35 ಮಕ್ಕಳಿಗೆ ಮೂರು ಗ್ರಾಂನ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ನೀಡಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ನಿರ್ದೇಶಕಿ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗ ಪ್ರಧಾನ ಪ್ರಬಂಧಕಿ ಡಾ.ಆಶಾ ಎಸ್., ಕೆಪಿಸಿಎಲ್ ನೌಕರರ ಸಂಘಧ ಅಧ್ಯಕ್ಷರೂ ಆದ ಆಡಳಿತ ಮಂಡಳಿ ನಿರ್ದೇಶಕ ವೀರೇಂದ್ರ ಕೆ., ನಿಗಮದ ಪ.ಜಾತಿ ಮತ್ತು ವರ್ಗದ ನೌಕರಕರ ಸಂಘದ ಅಧ್ಯಕ್ಷ ಭೀಮಯ್ಯ ನಾಯ್ಕ್, ಪ್ರಧಾನ ಕಾರ್ಯದರ್ಶಿ ಮಿರ್ಜಾ ಕುಮಾರ್, ಪ.ಜಾತಿ ಮತ್ತು ವರ್ಗದ ನೌಕರರ ಸಂಘದ ಬೆಂಗಳೂರು ಘಟಕದ ಅಧ್ಯಕ್ಷೆ ಶಿಲ್ಪ ಡಿ ರಾಜ್, ಪ್ರಧಾನ ಕಾರ್ಯರ್ಶಿ ವೀರಪ್ಪ ಬಾಬು ಮತ್ತಿತರು ಪಾಲ್ಗೊಂಡಿದ್ದರು.
