ಸಮಗ್ರ ಸುದ್ದಿ

ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ: ಸಚಿವ ಕೆ.ಎಚ್.ಮುನಿಯಪ್ಪ

Share

ಬೆಂಗಳೂರು:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 2007ರ ಘೋಷಣೆಯಂತೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಪ್ರಜೆಗಳೇ ಪ್ರಭುಗಳು ಎಂಬುದನ್ನು ನೆನಪಿಸುತ್ತಾ, ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಪ್ರತಿಜ್ಞೆಯೊಂದಿಗೆ ಕರ್ನಾಟಕ ಸರ್ಕಾರದ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ನಡೆಸಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ಪ್ರಸಕ್ತ ವರ್ಷ ಪ್ರಜಾಪ್ರಭುತ್ವ ದಿನಾಚರಣೆಯೊಂದಿಗೆ ಯುವ ಸಂಸತ್ತು ಕಾರ್ಯಕ್ರಮವನ್ನು ರಾಜ್ಯದ್ಯಂತ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಬಸವಣ್ಣ ರವರ ಅನುಭವ ಮಂಟಪದ ಆದಾರದ ಮೇಲೆ ಯುವ ಸಂಸತ್ತು ಕಾರ್ಯಕ್ರಮ ನವೆಂಬರ್ 26ರಂದು ಆಯೋಜನೆ

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ
ಸೆಪ್ಟೆಂಬರ್ 15 ರಂದು ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ರವರಿಂದ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಸಭೆಗೆ ಚಾಲನೆ ನೀಡಲಾಗುತ್ತದೆ. ಅದೇ ದಿನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯುವ ಸಂಸತ್ತು ಸಭೆಯನ್ನು ಈ ಕೆಳಕಂಡಂತೆ ನಡೆಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆ: ದಿನಾಂಕ:16-09-2026 ರಿಂದ 10-10-2026 ರವರೆಗೆ ತಾಲ್ಲೂಕು ಮಟ್ಟದಲ್ಲಿ ಯುವ ಸಂಸತ್ತು ಸಭೆಯ ಕಾರ್ಯಕ್ರಮವನ್ನು ಆಯೋಜಿಸ ಲಾಗುತ್ತದೆ. ಈ ಸಭೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಯುವ ಸಂಸತ್ತು ಸಭೆಗೆ ಕಳುಹಿಸಲಾಗುತ್ತದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮ: ದಿನಾಂಕ:11-10-2026 ರಿಂದ 30-10-2026 ರವರೆಗೆ ತಾಲ್ಲೂಕುಗಳಿಂದ ಆಯ್ಕೆಯಾಗಿ ಬಂದ ವಿದ್ಯಾರ್ಥಿಗಳಿಂದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದ ಸಭೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಯುವ ಸಂಸತ್ತು ಸಭೆಗೆ ಕಳುಹಿಸಲಾಗುತ್ತದೆ.

ರಾಜ್ಯ ಮಟ್ಟದ ಸಂಸತ್ತು ಸಭೆ/ಸಂವಿಧಾನ ದಿನಾಚರಣೆ: ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವಿದ್ಯಾರ್ಥಿಯಂತೆ ಒಟ್ಟು 224 ವಿದ್ಯಾರ್ಥಿಗಳನ್ನೊಳಗೊಂಡ ರಾಜ್ಯ ಮಟ್ಟದ ಯುವ ಸಂಸತ್ತು ಕಾರ್ಯಕ್ರಮವನ್ನು ದಿನಾಂಕ:26.11.2026ರ ಸಂವಿಧಾನ ದಿನಾಚರಣೆಯ ದಿನದಂದು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತದೆ.

ತಾಲ್ಲೂಕು ಮಟ್ಟದ ಕಾರ್ಯಕ್ರಮದ ಆಯೋಜನೆಯ ಮಾರ್ಗಸೂಚಿ

ವಿದ್ಯಾರ್ಥಿಗಳ ಆಯ್ಕೆ:ತಾಲ್ಲೂಕು ಮಟ್ಟದ ಯುವ ಸಂಸತ್ತು ಸಭೆಗೆ ಅಗತ್ಯವಾಗಿರುವ ವಿದ್ಯಾರ್ಥಿಗಳನ್ನು ಸ್ಥಳೀಯ ಶಾಸಕರ ನೇತೃತ್ವದ, ಸಮಿತಿಯು ತಮ್ಮ ಹಂತದಲ್ಲಿಯೇ ಅಗತ್ಯ ಮಾನದಂಡವನ್ನು ಅನುಸರಿಸಿ ಉತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಜಿಲ್ಲಾ ಹಂತಕ್ಕೆ ವಿದ್ಯಾರ್ಥಿಗಳ ಆಯ್ಕೆ:

ಜಿಲ್ಲಾ ಮಟ್ಟದ ಸಮಿತಿಯಿಂದ ಆಯ್ಕೆಯಾಗುವ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಯುವ ಸಂಸತ್ತಿನ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾರೆ.

ಕೇಂದ್ರ ಪರಿಹಾರ ಸಮಿತಿಯ ನೂತನ ವೆಬ್ ಸೈಟ್ ಅನಾವರಣ ಗೊಳಿಸಿ ಈ ವೆಬ್ ಸೈಟ್ ಮೂಲಕ ನಿರಾಶ್ರಿತ ಪರಿಹಾರ ಕೇಂದ್ರಗಳ ಕುರಿತ ಸಮಗ್ರ ಮಾಹಿತಿಯನ್ನು ಸಾರ್ವಜನಿಕರು ಮತ್ತು ವಿವಿಧ ಹಿತಾಸಕ್ತಿದಾರರಿಗೆ ಮಾಹಿತಿಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ರಾಜ್ಯದಲ್ಲಿ ಭಿಕ್ಷಾಟನೆ ಯನ್ನು ತಡೆಯಲು ಕ್ರಮ ವಹಿಸಲಾಗುತ್ತಿದೆ ಎಂದರು.

2026-27 ನೇ ಸಾಲಿಗೆ ಎಸ್‌ ಸಿ ಎಸ್‌ ಪಿ ಹಾಗೂ ಟಿ ಎಸ್‌ ಪಿ ರಡಿ ಒದಗಿಸಿದ ಅನುದಾನಕ್ಕೆ ವಿವಿಧ ಅಭಿವೃದ್ದಿ ಇಲಾಖೆಗಳು ತಯಾರಿಸಿದ ಕ್ರಿಯಾ ಯೋಜನೆ ಕುರಿತು ದಿನಾಂಕ 07-09-2026 & 08-09-2026 ರಂದು ನೋಡಲ್‌ ಏಜೆನ್ಸಿ ಸಭೆ ನಡೆಸಲಾಗಿದೆ.

ಹೊಸದಾಗಿ ಸಚಿವ ಸಂಪುಟ ರಚನೆಯಾದ ಕಾರಣ, ನಾನು ದಿನಾಂಕ 07-09-2026 & 08-09-2026 ರಂದು ನೋಡಲ್‌ ಏಜೆನ್ಸಿ ಸಭೆ ನಡೆಸಿ ಕ್ರಿಯಾ ಯೋಜನೆ ಕುರಿತು ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನಕಾರ್ಯದರ್ಶಿಗಳು/ಕಾರ್ಯದರ್ಶಿಗಳೊಂದಿಗೆ ವಿವರವಾಗಿ ಚರ್ಚಿಸಿರುತ್ತೇನೆ.

2025-26 ನೇ ಸಾಲಿಗೆ ಸರ್ಕಾರದಿಂದ ಎಸ್‌.ಸಿ.ಎಸ್‌.ಪಿ ರಡಿ ರೂ.30,649 ಕೋಟಿ, ಟಿ.ಎಸ್‌.ಪಿ ರಡಿ ರೂ.11,854 ಕೋಟಿ ಒಟ್ಟು ರೂ.42,503 ಕೋಟಿಗಳನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಿದೆ.

ಈ ಪೈಕಿ ಎಸ್‌.ಸಿ.ಎಸ್‌.ಪಿ ರಡಿ ರೂ.28,630 ಕೋಟಿ, ಟಿ.ಎಸ್‌.ಪಿ ರಡಿ ರೂ.10,927 ಕೋಟಿ ಒಟ್ಟು ರೂ.39,557 ಕೋಟಿ ವೆಚ್ಚ ಮಾಡಲಾಗಿದೆ.

ಕೆಲವು ಇಲಾಖೆಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ ರೂ.104.56 ಕೋಟಿಗಳನ್ನು ವೆಚ್ಚ ಮಾಡಿರುವುದಿಲ್ಲ. ಬಿಡುಗಡೆ ಮಾಡಿದ ಅನುದಾನ ವನ್ನು ಅಧಿಕಾರಿಗಳು 100% ವೆಚ್ಚ ಮಾಡಬೇಕಾಗಿತ್ತು. ಕಾಯ್ದೆಯಂತೆ ಈ ಅನುದಾನ 2027-28 ನೇ ಸಾಲಿಗೆ ಮರು ಹಂಚಿಕೆ ಮಾಡಲಾಗುತ್ತದೆ.

ವಿವಿಧ ಇಲಾಖೆಗಳಲ್ಲಿ ಮುಖ್ಯವಾಗಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರೂ.2,841 ಕೋಟಿಗಳು ಬಿಡುಗಡೆಯಾಗಿರುವುದಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಬಿಡುಗಡೆಯಾದ ಹಣ ವೆಚ್ಚ ಮಾಡಿ ಹಣಬಳಕೆ ಪ್ರಮಾಣ ಪತ್ರವನ್ನು ಭಾರತ ಸರ್ಕಾರಕ್ಕೆ ಅನುದಾನವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಳ್ಳಲು ಎಲ್ಲಾ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

SCSP & TSP ಅನುದಾನವನ್ನು SC/ST ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ವೆಚ್ಚ ಮಾಡಬೇಕು ಎಂದು ಕಾಯ್ದೆಯಲ್ಲಿ ಇರುತ್ತದೆ. ಆದರಂತೆ ವೆಚ್ಚ ಮಾಡಿದ ಅನುದಾನಕ್ಕೆ SC/ST ಫಲಾನುಭವಿಗಳ ನಿಖರ ಅಂಶಗಳನ್ನು ನೀಡಲು ಸೂಚನೆ ನೀಡಲಾಗಿದೆ.

2026-27 ನೇ ಸಾಲಿನಲ್ಲಿ ಎಸ್‌.ಸಿ.ಎಸ್‌.ಪಿ ರಡಿ ರೂ.32,177 ಕೋಟಿ, ಟಿ. ಎಸ್‌.ಪಿ ರಡಿ ರೂ.13,077 ಕೋಟಿ ಒಟ್ಟು ರೂ.45,254 ಕೋಟಿಗಳನ್ನು ಹಿಂದಿನ ವರ್ಷದಂತೆ 34 ಇಲಾಖೆಗಳಿಗೆ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ಕಳೆದ ಸಾಲಿನ ಹಂಚಿಕೆಗೆ ಹೋಲಿಸಿದಲ್ಲಿ ರೂ 2751 ಕೋಟಿ ಹೆಚ್ಚಿಗೆ ಅನುದಾನ ಒದಗಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ಕಂದಾಯ, ಸಾರಿಗೆ, ಆರ್.ಡಿ.ಪಿ.ಆರ್‌, ಆಹಾರ, ಆರೋಗ್ಯ, ಶಾಲಾ ಶಿಕ್ಷಣ , ವಸತಿ, ಯೋಜನೆ ಒಟ್ಟು 10 ಇಲಾಖೆಗಳಿಗೆ ರೂ. 32,328 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಇದು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಒಟ್ಟು ಹಂಚಿಕೆಯ 75% ಹಂಚಿಕೆಯಾಗಿರುತ್ತದೆ.

ಹೆಚ್ಚಿನ ಇಲಾಖೆಗಳಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಜಾರಿಯಲ್ಲಿರುವ ಕಾರ್ಯಕ್ರಮಗಳನ್ನು ಮುಂದುವರೆಸಲಾಗುತ್ತಿದೆ. ಕೆಲವು ಇಲಾಖೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಅನುದಾನ ನೀಡಿರುವುದು ಕಂಡುಬಂದಿದೆ, ವಿವಿಧ ಇಲಾಖೆಗಳಿಗೆ ಒದಗಿಸಿದ ಅನುದಾನ ಉಳಿಕೆ ಆಗುವುದನ್ನು ಪರಿಶೀಲಿಸಿ ಬೇಡಿಕೆ ಇರುವ ಇಲಾಖೆಯ ಯೋಜನೆಗಳಿಗೆ ಹಂಚಿಕೆ ಮಾಡಲು ಆರ್ಥಿಕ ಇಲಾಖೆಗೆ ತಿಳಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ರೂ. 5430.00 ಕೋಟಿ ಹಂಚಿಕೆಯಾಗಿದ್ದು, ಪರಿಶಿಷ್ಟ ಪಂಗಡಕ್ಕೆ ರೂ. 2242.95 ಕೋಟಿ ಹಂಚಿಕೆಯಾಗಿರುತ್ತದೆ. ಇದು ಸಮಾಜ ಕಲ್ಯಾಣ ಇಲಾಖೆಗೆ & ಪರಿಶಿಷ್ಟ ಪಂಗಡ ಇಲಾಖೆಗೆ ಒಟ್ಟು ಹಂಚಿಕೆಯ 17% ಮಾತ್ರ ಆಗುತ್ತದೆ. ಈ ಹಂಚಿಕೆಯನ್ನು ಹೆಚ್ಚಿಸಲು ಆರ್ಥಿಕ ಇಲಾಖೆಗೆ ತಿಳಿಸಲಾಗಿದೆ.

SCSP/TSP ಕಾಯ್ದೆ 2013ರ ಕಲಂ 8ರ ಪ್ರಕಾರ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್‌ ಏಜೆನ್ಸಿ ಸಭೆಯ ಶಿಫಾರಸ್ಸುಗಳಂತೆ ಆರ್ಥಿಕ ಇಲಾಖೆಯು ವಿವಿಧ ಇಲಾಖೆಗಳಿಗೆ SCSP/TSP ಅನುದಾನವನ್ನು ಹಂಚಿಕೆ ಮಾಡಲು ತಿಳಿಸಲಾಗಿದೆ.

ಸಂಭಂದಿಸಿದ ಇಲಾಖಾಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಹಂಚಿಕೆಯಾದ ಅನುದಾನ ನೈಜ ಫಲಾನುಭವಿಗಳಿಗೆ ತಲುಪುತ್ತಿದೆಯೇ ಇಲ್ಲವೇ ಎನ್ನುವ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ಮಾಡಲು ಸೂಚಿಸಲಾಗಿದೆ.

ಎಲ್ಲಾ ಇಲಾಖೆಗಳು SCSP-TSP ಅನುದಾನದ ಬಳಕೆಯಿಂದ ಯಾವ ರೀತಿ ಪ.ಜಾತಿ/ಪ.ಪಂಗಡದವರ ಜೀವನ ಮಟ್ಟದಲ್ಲಿ ಸುಧಾರಣೆ ಆಗಿದೆ ಎನ್ನುವ ಬಗ್ಗೆ ಮೌಲ್ಯಮಾಪನ ಕೈಗೊಳ್ಳಬೇಕು ಮತ್ತು ಶಿಫಾರಸುಗಳಂತೆ ಅನುಷ್ಠಾನದಲ್ಲಿ ಸುಧಾರಣೆ ತರಲು ಕ್ರಮವಹಿಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾರ್ಯಕ್ರಮಗಳ ಅನುಷ್ಟಾನದ ಪರಿಣಾಮದ ಬಗ್ಗೆ ಕೈಗೊಂಡಿರುವ ಮೌಲ್ಯಮಾಪನ ಮತ್ತು ಸಾಮಾಜಿಕ ಪರಿಶೋಧನೆಯ ವಿವರ ಈ ಕೆಳಗಿನಂತಿದೆ.

ಕೈಗೊಂಡಿರುವ ಮೌಲ್ಯಮಾಪನ / ಸಾಮಾಜಿಕ ಪರಿಶೋಧನೆ – 70
ಮುಕ್ತಾಯಗೊಂಡಿರುವ ಮೌಲ್ಯಮಾಪನ / ಸಾಮಾಜಿಕ ಪರಿಶೋಧನೆ – 27
ಪ್ರಗತಿಯಲ್ಲಿರುವ ಮೌಲ್ಯಮಾಪನ / ಸಾಮಾಜಿಕ ಪರಿಶೋಧನೆ – 43

ISEÇ Public Affair Center ̧ Karnataka Evaluation Authority ̧ Agriculture University ̧ Horticulture University ̧ Christ University, IIDS Delhi ̧Social Audit Directorate ಇವರುಗಳ ಮೂಲಕ ಮೌಲ್ಯಮಾಪನ / ಸಾಮಾಜಿಕ ಪರಿಶೋಧನಾ ಕಾರ್ಯವನ್ನು ಕೈಗೊಳ್ಳಲಾಗಿದೆ.

ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೋಹನ್ ರಾಜ್, ಆಯುಕ್ತರಾದ ರಾಕೇಶ್ ಕುಮಾರ್,(ಸಿಆರ್ ಸಿ )ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಆಗಾ ಸುಲ್ತಾನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು


Share

You cannot copy content of this page