ಸಮಗ್ರ ಸುದ್ದಿ

ಕೇಂದ್ರದ ಕಾನೂನುಗಳು ಕನ್ನಡದಲ್ಲಿ ಸಿಗುವುದೇ ನಿಜವಾದ ಕನ್ನಡ ರಾಜ್ಯೋತ್ಸವ: ಸಚಿವ ಹೆಚ್.ಕೆ. ಪಾಟೀಲ್

Share

ಬೆಂಗಳೂರು:ಕೇಂದ್ರ ಸರ್ಕಾರದ ಶೇ 100 ರಷ್ಟು ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸುವುದೇ ಕನ್ನಡದ ನಿಜವಾದ ಸೇವೆ, ಆ ಕೆಲಸ ಮಾಡಿದ ದಿನವೇ ಕನ್ನಡದ ದಿನ, ಈ ನವೆಂಬರ್ 1 ರ ಒಳಗೆ ಈ ಕೆಲಸವನ್ನು ಮಾಡಿ ಅರ್ಥಗರ್ಭಿತವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸೋಣ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಕರ್ನಾಟಕ ರಾಜಭಾಷಾ ಆಯೋಗ, ಭಾಷಾಂತರ ನಿರ್ದೇಶನಾಲಯ ಸಹಯೋಗದಲ್ಲಿ ಇಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಮುಖ ಕ್ರಿಮಿನಲ್ ಕಾನೂನುಗಳ ದ್ವಿಭಾμÁ (Diglot)  ಆವೃತ್ತಿಗಳ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು

ಶೇ. 50 ರಷ್ಟು ಕೇಂದ್ರದ ಕಾನೂನುಗಳನ್ನು ಈವರೆಗೆ ಕನ್ನಡಕ್ಕೆ ಅನುವಾದಿಸಲು ಸಾಧ್ಯವಾಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾನೂನುಗಳು ಕನ್ನಡದಲ್ಲಿ ಇಲ್ಲದಿರುವುದು ದುರಂತ, ನಮ್ಮ ದೇಶದ ಕಾನೂನು ಜನಸಾಮಾನ್ಯರಿಗೆ ಅರ್ಥವಾಗಲು ಅವರ ಮಾತೃ ಭಾಷೆಯಲ್ಲಿ ಸಿಗುವಂತಾದಾಗ ಮಾತ್ರ ಅವುಗಳ ಪರಿಣಾಮಕಾರಿ ಅನುಷ್ಠಾನ ವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಕೊರತೆ ಇದ್ದಲ್ಲಿ ಖಾಸಗಿಯವರಿಂದ ಅನುವಾದಕರನ್ನು ಗುತ್ತಿಗೆ ಆದಾರದಲ್ಲಿ ತೆಗೆದುಕೊಂಡು ಕೆಲಸ ಮಾಡಿಸಿ, ಈ ಕುರಿತಂತೆ ಯೋಚಿಸುವ ಅವಶ್ಯಕತೆ ಇದೆ. ಕುಪ್ಪಂ ನಲ್ಲಿರುವ ದ್ರಾವಿಡ ವಿವಿ ಸೇರಿದಂತೆ ಇತರೆ ವಿವಿಗಳನ್ನು ಬಳಸಿಕೊಂಡು ಈ ಅನುವಾದ ಕಾರ್ಯಕ್ಕೆ ಹೆಚ್ಚಿನ ವೇಗ ನೀಡುವ ಅವಶ್ಯಕತೆ ಇದೆ ಎಂದರು.

ಭಾಷಾಂತರ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜಭಾಷಾ ಆಯೋಗ ಕೇಂದ್ರದ ಕಾನೂನುಗಳನ್ನು ಕನ್ನಡದಲ್ಲಿ ಮಾಡುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡುತ್ತಿವೆ, ಇದಕ್ಕೆ ಇಂದಿನ ಪುಸ್ತಕಗಳೆ ಸಾಕ್ಷಿ. ಖಾಸಗಿಯವರು ಸಹ ಇನ್ನೂ ಈ ಕಾರ್ಯವನ್ನು ಮಾಡಲಾಗಿಲ್ಲ, ಅದಾಗಲೇ ಸರ್ಕಾರದ ವತಿಯಿಂದ ಈ ಕಾರ್ಯವನ್ನು ಪೂರ್ಣಗೊಳಿಸಿರುವುದು ದೊಡ್ಡ ಸಾಧನೆ. ನಾವು ನಮ್ಮ ಸಮಾಜಕ್ಕೆ ಅವಶ್ಯಕವಿರುವ ಪ್ರಸ್ತುತ ಕಾನೂನುಗಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಜನರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿ ಕಾನೂನುಗಳು ತಿಳಿಯುವಂತಿರಬೇಕು. ಅನುವಾದದ ವೇಗ ಹೆಚ್ಚಿಸಲು ಸರ್ಕಾರ ಸಕಲ ಸೌಕರ್ಯಗಳನ್ನು ಒದಗಿಸಲು ಸಿದ್ದವಿದೆ ಎಂದು ಹೇಳಿದರು.

ಇಂದು ನಾಲ್ಕು ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸಿ ಪುಸ್ತಕ ರೂಪದಲ್ಲಿ ನೀಡಲಾಗಿದೆ, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸಹಾಯವಾಗುವಂತೆ ಕರ್ನಾಟಕ ತಿದ್ದುಪಡಿ ಮಾಡಲಾಗಿದೆ, ಅದಕ್ಕೆ ರಾಷ್ಟ್ರಪತಿಗಳಿಂದ ಅಂಕಿತ ಸಿಕ್ಕಿರುವುದು ಶ್ಲಾಘನೀಯ.

ಈ ಬಿಎನ್‍ಎಸ್ ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಅಧ್ಯಯನ ನಡೆದಿದ್ದು, ಸುಮಾರು 21 ತಿದ್ದುಪಡಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು, ಅದರಲ್ಲಿ ಮುಖ್ಯ ಮಂತ್ರಿಗಳ ಸಲಹೆಯಂತೆ 13 ತಿದ್ದುಪಡಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು, ನಮ್ಮ ಕಾನೂನಿನ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಒಪ್ಪದಿರುವುದು ದುರಂತ, ಈ ಮೂರು ಕಾನೂನುಗಳಲ್ಲಿರುವ ತಪ್ಪುಗಳನ್ನು ಸರಿಪಡಿಸುವ ಕೆಲಸ ರಾಜ್ಯ ಸರ್ಕಾರ ಮಾಡಲಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ ಆಡಳಿತ ಭಾಷೆ ಜನರ ಭಾಷೆಯಾಗಿದ್ದರೆ ಯೋಜನೆ ಮತ್ತು ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ. ಇಲ್ಲವಾದರೆ ಬಿಕ್ಕಟ್ಟು ಸಂಭವಿಸುತ್ತದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಭಾಷಾಂತರ ನಿರ್ದೇಶನಾಲಯವು ಹೆಚ್ಚಾಗಿ ಕಾರ್ಯನಿರ್ವಹಿಸುವ ಮೂಲಕ ಜನಸಾಮನ್ಯರಿಗೆ ಸಹಾಯವಾಗುವಂತೆ ಮಾತೃ ಭಾಷೆಯಲ್ಲಿ ಕೇಂದ್ರದ ಕಾನೂನುಗಳು ಸಿಗುವಂತೆ ಕೆಲಸ ಮಾಡಬೇಕು ಎಂದರು.

1992 ರ ನಂತರ ಭಾರತದಲ್ಲಿ ಜಾಗತೀಕರಣ ಪ್ರಾರಂಭಗೊಂಡ ನಂತರ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ, ಸರ್ವೆ ಒಂದರ ಪ್ರಕಾರ 1957 ರ ಬಳಿಕ ಭಾರತದಲ್ಲಿ 254 ಸಣ್ಣ ಭಾಷೆಗಳು ಮಾಯವಾಗಿರುವುದು ದುರಂತ, ಮುಂದಿನ ಕೆಲವು ವರ್ಷಗಳಲ್ಲಿ ಶೇ. 92 ಭಾಷೆಗಳು ಕೇವಲ ಮಾತಿಗೆ ಸೀಮಿತವಾಗಿ ಬರವಣಿಗೆಯಲ್ಲಿ ಮಾಯವಾಗುತ್ತವೆ. ಶೇಖಡ 8 ರಷ್ಟು ಭಾಷೆಗಳು ಮಾತ್ರ ಆಳ್ವಿಕೆ ಮಾಡಲಿವೆ ಅದೇ ಮಾದರಿಯಲ್ಲಿ ಸಂಪತ್ತು ಸಹ ಶೇ. 8 ರಷ್ಟು ಜನರ ಬಳಿ ಮಾತ್ರ ಶೇಖರಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಮತ್ತು ಕರ್ನಾಟಕ ರಾಜಭಾಷಾ ಆಯೋಗದ ಅಧ್ಯಕ್ಷ ಜಿ ಶ್ರೀಧರ್ ಅವರು ಮಾತನಾಡಿ ಅತಿ ಹೆಚ್ಚು ಕೇಂದ್ರ ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸಿರುವ ಹೆಮ್ಮೆ ನಮಗಿದೆ. ಕನ್ನಡ-ಇಂಗ್ಲೀಷ್ ಎರಡಲ್ಲೂ ಲಭ್ಯವಿರುವ ಈ ಪುಸ್ತಕಗಳು ಅತ್ಯಂತ ಸಹಕಾರಿಯಾಗಿದೆ, ನಮ್ಮಲ್ಲಿ ನೂರಾರು ಕಾನೂನು ಪುಸ್ತಕಗಳನ್ನು ಅನುವಾದಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ 1908 (1908ರ 5) (ಕರ್ನಾಟಕ ತಿದ್ದುಪಡಿ ಸೇರಿದಂತೆ), ಭಾರತೀಯ ನ್ಯಾಯ ಸಂಹಿತೆ 2023 (2023 ರ 45) ಬಿಎನ್‍ಎಸ್, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 (2023ರ 46) ಬಿಎನ್‍ಎಸ್‍ಎಸ್ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ, 2023 (2023ರ 47) ಬಿಎಸ್‍ಎ ಗಳ ದ್ವಿಭಾಷಾ (Diglot)  ಆವೃತ್ತಿಗಳ ಲೋಕಾರ್ಪಣೆ ಮಾಡಲಾಯಿತು.ಕಾರ್ಯಕ್ರಮದ ನಂತರ ಕಾನೂನು ಭಾಷಾಂತರದ ಸವಾಲುಗಳ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಹಾಗೂ ಶಿಕ್ಷಣ ತಜ್ಞ ಡಾ ಪಿ ವಿ ನಿರಂಜನಾರಾಧ್ಯ ಅವರು ವಿಚಾರ ಮಂಡನೆ ಮಾಡಿದರು.ಈ ಸಂದರ್ಭದಲ್ಲಿ ಆಂದ್ರ ಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯದ ಡಾ ದೊರೆಸ್ವಾಮಿ, ಡಾ ಕೆ ವಿ ಕುಮಾರ್, ಅಪರ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಕಾನೂನು ಸಚಿವಾಲಯ, ಮಹೇಶ್ ಬಾಬು ಉಪ ಕಾರ್ಯದರ್ಶಿ, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ ವೆಂಕಟೇಶ ಉಪಸ್ಥಿತರಿದ್ದರು.


Share

You cannot copy content of this page