ಸಮಗ್ರ ಸುದ್ದಿ

ನಾಳೆಯಿಂದ ವರ್ಷದ ಮೊದಲ ಅಧಿವೇಶನ: ಬಸವರಾಜ ಹೊರಟ್ಟಿ

Share

ಬೆಂಗಳೂರು: ಜನವರಿ 22 ರಿಂದ 31 ರ ವರೆಗೆ ಹತ್ತು ದಿನಗಳ ಕಾಲ ಜರುಗುವ ಅಧಿವೇಶನವು ವರ್ಷದ ಮೊದಲ ಅಧಿವೇಶನವಾಗಿದ್ದು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ನಾಳೆಯಿಂದ ಪ್ರಾರಂಭವಾಗಲಿರುವ ನೂರ ಐವತ್ತೆಂಟನೇ ಅಧಿವೇಶನದ ಕುರಿತು ಮಾಹಿತಿ ನೀಡಲು ಬುಧವಾರ ವಿಧಾನಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿರುವ ಬಗ್ಗೆ ಚರ್ಚಿಸಲು ಸಚಿವ ಸಂಪುಟದಲ್ಲಿ ನಿರ್ಣಯವಾಗಿ ಬಂದರೆ ಅದನ್ನೂ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದೆಂದರು.

ಇತ್ತೀಚೆಗೆ ದಕ್ಷಿಣದ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿ ಭಾಷಣ ಮಾಡದ ಬಗ್ಗೆ ಮಾಧ್ಯಮದವರು ಸಭಾಪತಿಗಳ ಪ್ರತಿಕ್ರಿಯೆಯನ್ನು ಕೇಳಿದಾಗ, ಹೊರಟ್ಟಿ ಅವರು ನಮ್ಮ ರಾಜ್ಯಪಾಲರ ಮೇಲೆ ನನಗೆ 99% ವಿಶ್ವಾಸವಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಸಂವಿಧಾನದ ನಿಮಮಾನುಸಾರ ರಾಜ್ಯಪಾಲರು ಓದುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆ ಬೇರೆಯಾಗಿದ್ದಾಗ ಇಂತಹ ಸಮಸ್ಯೆಗಳು ಬರುವುದು ಸಹಜ. ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದರೂ ಕೂಡ ರಾಜ್ಯಪಾಲರು ಭಾಷಣವನ್ನು ಓದಲೇ ಬೇಕು. ರಾಜ್ಯಪಾಲರು ಭಾಷಣದ ಕೆಲವು ವಾಕ್ಯಗಳನ್ನು ಓದದಿದ್ದಲ್ಲಿ ಸರ್ಕಾರಕ್ಕೆ ಇರುಸುಮುರುಸು ಆಗುತ್ತದೆ. ಆದರೆ ಸಂವಿಧಾನದ ಪ್ರಕಾರ ರಾಜ್ಯಪಾಲರು ಆ ರೀತಿ ಮಾಡುವಂತಿಲ್ಲ. ಆ ಸ್ಥಾನದಲ್ಲಿರುವವರು ಸಂವಿಧಾನದ ಘನತೆಯನ್ನು ಎತ್ತಿಹಿಡಿಯಬೇಕೆಂದರು.

ಅಧಿವೇಶನದಲ್ಲಿ ಸಂಪುಟ ಸಭೆಯಲ್ಲಿ ನಿರ್ಧಾರವಾದ ವಿಷಯಗಳ ಜೊತೆಗೆ ರಾಜ್ಯದ ಜನತೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸಲು ಹೆಚ್ಚಿನ ಮಹತ್ವವನ್ನು ನೀಡಲಾಗುವುದು. ನಾನು ಯಾವುದೇ ಕಾರಣಕ್ಕೂ ಕಾರ್ಯಸೂಚಿಯನ್ನು ಮುಗಿಸುವ ತನಕ ಅಧಿವೇಶನವನ್ನು ಮುಂದೂಡುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ತಡರಾತ್ರಿ 11 ಗಂಟೆಯ ತನಕ ಅಧಿವೇಶನವನ್ನು ನಡೆಸಿದ್ದೆ. ಹಾಗೆಯೇ ಈ ಬಾರಿಯ ಅಧಿವೇಶನದಲ್ಲಿ ಖಾಸಗಿ ನಿರ್ಣಯಗಳಿಗೂ ಅವಕಾಶವನ್ನು ಕಲ್ಪಿಸಲಾಗುವುದು ಎಂದರು.

ನಾಳೆ ಬೆಳಿಗ್ಗೆ 11 ಗಂಟೆಗೆ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಾಧ್ಯಮದವರು ಅಧಿವೇಶನದಲ್ಲಿ ಭಾಗವಹಿಸಿ, ಸಾರ್ವಜನಿಕರಿಗೆ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳ ಮಾಹಿತಿಯನ್ನು ಒದಗಿಸುವ ಮೂಲಕ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.


Share

You cannot copy content of this page