ಬೆಂಗಳೂರು: 2026ನೇ ಸಾಲಿನ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್.ಸಿ.ಸಿ. ಕ್ರೆಡೆಟ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ಇಂದು ವಿಧಾನಸೌಧ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾದ “ಗ್ರೂಪ್ ಫೋಟೋ ಶೂಟ್”ನಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್.ಸಿ.ಸಿ. ಕೆಡೆಟ್ ಗಳು ಪ್ರತಿವರ್ಷ ನವದೆಹಲಿಯಲ್ಲಿ ಜನವರಿ 26 ರಂದು ಜರುಗುವ ಗಣರಾಜ್ಯೋತ್ಸವ ಕವಾಯತಿನಲ್ಲಿ ಭಾಗವಹಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಪದಕಗಳನ್ನು ಪಡೆಯುತ್ತಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ವರ್ಷವೂ ಸಹ ಪದಕ ಗಳಿಸಿ ಹ್ಯಾಟ್ರಿಕ್ ಸಾಧಿಸಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆ.ಜಿ.ಜಗದೀಶ್, ಕರ್ನಾಟಕ ಮತ್ತು ಗೋವಾ ಡೆಪ್ಯುಟಿ ಡೈರೆಕ್ಟರ್ ಜನರಲ್ ವಿಂಗ್ ಕಮಾಂಡರ್ ಎಸ್.ಬಿ.ಅರುಣ್ಕುಮಾರ್, ಎನ್.ಸಿ.ಸಿ ಗ್ರೂಪ್ ಕಮಾಂಡರ್ ಎಸ್.ಎಸ್.ಕಾಳಿಯಾ, ಪಿ.ಆರ್.ಪೊನ್ನಪ್ಪ ಸೇರಿದಂತೆ ಎನ್.ಸಿ.ಸಿಯ ಹಿರಿಯ ಅಧಿಕಾರಿಗಳು, ಎನ್.ಸಿ.ಸಿ ಕೆಡೆಟ್ಗಳು ಉಪಸ್ಥಿತರಿದ್ದರು.
