ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲ್ ಪುರ ತಾಲೂಕಿನ ಪ್ರಸಿದ್ದ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯ ಅಭಿವೃದ್ದಿ ಪಡಿಸಲು ರೂಪರೇಷಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವರು ಸುಮಾರು 500 ವರ್ಷಗಳ ಪರಂಪರೆ ಹೊಂದಿರುವ ಶ್ರೀ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಭೀಮಾ ಮತ್ತು ಅಮರ್ಜಾ ನದಿಯ ಸಂಗಮವು ಇಲ್ಲಿನ ಧಾರ್ಮಿಕ ಶ್ರೇಷ್ಠತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ಈ ಎರಡೂ ಧಾರ್ಮಿಕ ಶ್ರದ್ದಾ ಕೇಂದ್ರಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಫಜಲಪುರ ಕ್ಷೇತ್ರದ ಶಾಸಕರಾದ ಎಂ.ವೈ ಪಾಟೀಲ್ ಅವರೊಂದಿಗೆ ಸಭೆ ನಡೆಸಿ, ತಜ್ಞರು ರೂಪಿಸಿರುವ ನೀಲನಕ್ಷೆಯನ್ನು ಸಚಿವರು ಅವಲೋಕಿಸಿದರು.
