ಸಮಗ್ರ ಸುದ್ದಿ

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಾಚರಣೆ | 6.1 ಕೀ. ಮಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಸ್ವಚ್ಛತೆ – ರಾಜೇಂದ್ರ ಚೋಳನ್

Share

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ವಿವಿಧ ಪ್ರದೇಶಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಹಾಗೂ ಬ್ಲ್ಯಾಕ್ ಸ್ಪಾಟ್ ತೆರವು, ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ನಗರದ ಸ್ವಚ್ಛತೆ, ಸುಂದರತೆ ಮತ್ತು ಸಾರ್ವಜನಿಕರಿಗೆ ಆರೋಗ್ಯಕರ ಹಾಗೂ ಸುಗಮ ವಾತಾವರಣ ಕಲ್ಪಿಸುವ ಉದ್ದೇಶದಿಂದ, ದೈನಂದಿನ ಸ್ವಚ್ಛತಾ ಚಟುವಟಿಕೆಗಳ ಜೊತೆಗೆ ಕಸ ಸಂಗ್ರಹಣೆ ಹೆಚ್ಚಿರುವ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಸಾಮೂಹಿಕ ಸ್ವಚ್ಛತಾ ಕಾರ್ಯಗಳ ವಿವರ:

ಚಾಮರಾಜಪೇಟೆ ಕ್ಷೇತ್ರ:
ಡಾ.ಟಿ.ಸಿ.ಎಂ ರಾಯನ್ ರಸ್ತೆ (ಗೂಡ್ಸ್ ಶೆಡ್ ರಸ್ತೆ) & ಮೈಸೂರು ರಸ್ತೆ ಮೀಡಿಯನ್, ಎನ್.ಟಿ.ಪೇಟೆ ಇಂದ ಸಿರ್ಸಿ ಸರ್ಕಲ್ ವರೆಗೆ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.

ಚಿಕ್ಕಪೇಟೆ ಕ್ಷೇತ್ರ:
ವಾರ್ಡ್ ಸಂಖ್ಯೆ: 142 & 143ರ ಕೆ.ಆರ್ ರಸ್ತೆ ಮತ್ತು ವಾಣಿ ವಿಲಾಸ್ ಸುತ್ತ ಮುತ್ತಲಿನ ಕೂಡು ಪ್ರದೇಶದ ರಸ್ತೆಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.

ಗಾಂಧಿನಗರ ಕ್ಷೇತ್ರ:
ಪ್ಯಾಲೇಸ್ ಗುಟ್ಟಳ್ಳಿ ರಸ್ತೆ, ಪೈಪ್ ಲೈನ್ ರಸ್ತೆ ಮತ್ತು ಕೊನಟ್ ಅವೆನ್ಯೂ ರಸ್ತೆಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.

ಶಾಂತಿನಗರ ಕ್ಷೇತ್ರ:
ವಾರ್ಡ್ ಸಂಖ್ಯೆ: 117, ಶಾಂತಿನಗರ ವ್ಯಾಪ್ತಿಯಲ್ಲಿ ಬರುವ ಬರ್ಲಿ ಸ್ಟ್ರೀಟ್ ಆಡ್ವ ರಸ್ತೆ (ಸ್ಮಶಾನ ರಸ್ತೆ) ಮತ್ತು ಸುತ್ತಾಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಶಿವಾಜಿನಗರ ಕ್ಷೇತ್ರ:
ವಾರ್ಡ್ ಸಂಖ್ಯೆ: 90, ಸೋಮೇಶ್ವರ ಟೆಂಪಲ್ ಸುತ್ತಮುತ್ತಲಿನ ಪ್ರದೇಶ ಹಾಗೂ ವಾರ್ಡ್ ಸಂಖ್ಯೆ: 110, ಕೆ.ಆರ್ ಸರ್ಕಲ್ ನಿಂದ ಅಂಬೇಡ್ಕರ್ ವೀದಿ ಹಾಗೂ ಬಾಲೇಕುಂದಿ ಸರ್ಕಲ್ ವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಸಿ.ವಿ. ರಾಮನ್ ನಗರ ಕ್ಷೇತ್ರ:
ವಾರ್ಡ್ ನಂ:113-ಜೀವನ್ ಭೀಮನಗರ, ಸಿ.ಎಂ. ಹೆಚ್ ರಸ್ತೆ, ಡಬಲ್ ರಸ್ತೆಯ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ದಲ್ಜಿತ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಇಂದು ಒಟ್ಟು 6.1 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, 06 ಜೆಸಿಬಿ ಮತ್ತು 38 ಟ್ರಾಕ್ಟರ್ ಗಳ ಸಹಾಯದಿಂದ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ 52 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಜೊತೆಗೆ 19 ಬ್ಲ್ಯಾಕ್ ಸ್ಪಾಟ್ ಗಳನ್ನು ನಿವಾರಣೆ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ 218 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

ಸಾಮೂಹಿಕ ಸ್ವಚ್ಛತಾ ಹಾಗೂ ಪಾದಚಾರಿ ಒತ್ತುವರಿ ತೆರವು ಕಾರ್ಯದಲ್ಲಿ ಸಂಬಂಧಿತ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಡಿಜಿಎಂಗಳು, ಎ.ಜಿ.ಎಂಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಅರಣ್ಯ ಹಾಗೂ ತೋಟಗಾರಿಕೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.


Share

You cannot copy content of this page