ಹಾವೇರಿ: ಅಮೇರಿಕಾ ಇರಾನ್ ಯುದ್ದದ ಪರಿಣಾಮವಾಗಿ ದುಬೈ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ದುಬೈನಲ್ಲಿರುವ ಕನ್ನಡಿಗರು ಹಾಗೂ ಅಲ್ಲಿನ ರಾಯಭಾರಿ ಕಚೇರಿ ಮುಖಾಂತರ ತಾತ್ಕಾಲಿಕವಾಗಿ ಊಟ, ವಸತಿ ವ್ಯವಸ್ಥೆ ಮಾಡಿ ಕೂಡಲೆ ವಾಪಸ್ ಕರೆ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಭಾರತ ಸರ್ಕಾರದ ಜೊತೆ ಕೈ ಜೋಡಿಸಿ ಕನ್ನಡಿಗರನ್ನು, ಭಾರತೀಯರನ್ನು ತಾಯಿ ನಾಡಿಗೆ ಕರೆ ತರುವುದು ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೇರಿಕ ಮತ್ತು ಇರಾನ್ ನಡುವಿನ ಯುದ್ದ ಬಹಳಷ್ಟು ಆತಂಕಕಾರಿಯಾಗಿದೆ. ಇದರ ಪರಿಣಾಮ ಭಾರತದ ಮೇಲೂ ಆಗಲಿದೆ. ಇಲ್ಲಿಯ ಪೆಟ್ರೋಲಿಯಂ ವಲಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಆರ್ಥಿಕತೆಯ ಮೇಲೂ ದೊಡ್ಡ ಪ್ರಭಾವ ಬೀರಲಿದೆ. ಮತ್ತು ವಿಶ್ವಾದ್ಯಂತ ಇದರ ಪರಿಣಾಮ ಎಲ್ಲರೂ ಎದುರಿಸಬೇಕಾದ ಪರಿಸ್ಥಿತಿ ಇದೆ.
ಇನ್ನಷ್ಟು ಜನರ ಸಾವುಗಳು ಆಗುವ ಮುಂಚೆ ಮಾತುಕತೆಯ ಮುಖಾಂತರ ಇದನ್ನು ಬಗೆ ಹರಿಸುವುದು ಸೂಕ್ತ ಅಂತ ಅನಿಸುತ್ತಿದೆ ಎಂದು ಹೇಳಿದರು.
ಬಹಳಷ್ಟು ಮಧ್ಯ ಪ್ರಾಚ್ಯ ರಾಷ್ಟ್ರಗಳು ಈ ಯುದ್ದಕ್ಕೆ ತುತ್ತಾಗಿವೆ. ಮಧ್ಯ ಪ್ರಾಚ್ಯದಲ್ಲಿರುವ ಭಾರತೀಯರು ವಿಶೇಷವಾಗಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ದೋಹಾ, ದುಬೈ, ಕುವೈತ್ ಸೇರಿದಂತೆ ಅನೇಕ ಕಡೆಗಳಲ್ಲಿ ನಮ್ಮ ಕನ್ನಡಿಗರು ಕೆಲಸಕ್ಕೆ ಹೋಗಿದ್ದಾರೆ. ಯುರೋಪಿನಿಂದ ಬರುವಾಗ ದುಬೈ, ದೋಹಾ ಮೂಲಕ ಬರುವುದು ವಾಡಿಕೆ ಇದೆ. ಅಲ್ಲೂ ಕೂಡ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಈಗಾಗಲೇ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
ಸುರಕ್ಷಿತವಾಗಿ ಕರೆದುಕೊಂಡು ಬರಲು ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಹಿಂದೆ ಇದೇ ಥರ ಸಿರಿಯಾ, ಇರಾಕ್ ನಲ್ಲಿ ಯುದ್ದ ನಡೆದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ಭಾರತಿಯರನ್ನು ಸುರಕ್ಷಿತವಾಗಿ ಕರೆತಂದಿರುವ ಉದಾಹರಣೆ ಇದೆ. ಭಾರತೀಯರು ವಿಶೇಷವಾಗಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಅಲ್ಲಿಗೆ ಹೋಗಿರುವ ಬಹಳಷ್ಟು ಜನರಿಗೆ ಹಣ, ಆಹಾರ ಇಲ್ಲದೆ ತೊಂದರೆ ಆಗುತ್ತಿದೆ ಎಂದು ಹೇಳಿದರು.
ದುಬೈನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಜನರಿದ್ದಾರೆ. ಅವರ ಮುಖಾಂತರ ಅಲ್ಲಿಯ ರಾಯಭಾರಿ ಕಚೇರಿ ಮುಖಾಂತರ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಊಟ ವಸತಿ ವ್ಯವಸ್ಥೆ ಮಾಡಬೇಕು. ಮತ್ತು ಕೂಡಲೆ ವಾಪಸ್ ಕರೆ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಭಾರತ ಸರ್ಕಾರದ ಜೊತೆ ಕೈ ಜೋಡಿಸಿ ಕನ್ನಡಿಗರನ್ನು ಭಾರತಿಯರನ್ನು ತಾಯಿ ನಾಡಿಗೆ ಕರೆ ತರುವುದು ನಮ್ಮೆಲ್ಲ ಕರ್ತವ್ಯ ಎಂದು ಹೇಳಿದರು.
