ಬೆಂಗಳೂರು: ಪೋಡಿ ದುರಸ್ಥಿ, ಫೌತಿಖಾತೆ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಎಲ್ಲಾ ಕಂದಾಯ ಸೇವೆಗಳನ್ನೂ ಆನ್ಲೈನ್ ಡಿಜಿಟಲೀಕರಣ ಮಾಡಿದ್ದು ಆ ಮೂಲಕ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನಗಳ ಆಡಳಿತದ ಸಾಧನೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಮಂಗಳವಾರ ವಿಕಾಸಸೌಧದಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದ ಆಗದ ಕೆಲಸಗಳು ಕೇವಲ ಕಳೆದ ಸಾವಿರ ದಿನಗಳಲ್ಲಿ ಆಗಿದೆ. ಈ ಮಾತು ಜನರ ಬಾಯಿಂದಲೇ ಬರುತ್ತಿರುವುದು ವಿಶೇಷ. ನಾವು ಮಾಡುತ್ತಿರುವ ಕೆಲಸ ಜನರಿಗೆ ಅನುಕೂಲವಾಗುತ್ತಿದೆ. ಈ ಹಿಂದೆ ಇಲಾಖೆಯ ಬಗ್ಗೆ ಜನರ ಮನಸ್ಸಲ್ಲಿದ್ದ ಭಾವನೆ ಈಗ ಬದಲಾಗಿದೆ. ಸಾವಿರ ದಿನಗಳ ನಮ್ಮೆಲ್ಲರ ಒಗ್ಗಟ್ಟಿನ ಕೆಲಸದ ಪರಿಣಾಮ ಇಲಾಖೆಯನ್ನು ಗೌರವದಿಂದ ನೋಡುತ್ತಿದ್ದಾರೆ. ಕಂದಾಯ ಸೇವೆಗಳನ್ನು ಆನ್ಲೈನ್ ಮಾಡಿದ್ದು, ಜನರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನದ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನ್ನ ಭೂಮಿ:
ಈ ಹಿಂದೆ ಜಮೀನು ಮಂಜೂರು ಮಾಡಿದ್ದ ಸರ್ಕಾರಗಳು ಕೇವಲ ಆರ್ಟಿಸಿ ಮಾತ್ರ ಮಾಡಿಕೊಟ್ಟು ರೈತರ ಜುಟ್ಟನ್ನು ತಮ್ಮ ಕೈನಲ್ಲೇ ಇಟ್ಟುಕೊಂಡಿದ್ದವು. ಹೀಗಾಗಿ ಪಕ್ಕಾ ದಾಖಲೆ ಇಲ್ಲದೆ ರೈತರ ಬದುಕು ಅತಂತ್ರ ಸ್ಥಿತಿಯಲ್ಲೇ ಇತ್ತು. ನಾನು ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ವಿಚಾರವನ್ನು ಮನಗಂಡು ಬಡವರಿಗೆ ಪಕ್ಕಾ ದಾಖಲೆ ಮಾಡಿಕೊಡಲು ಸಂಕಲ್ಪ ಮಾಡಿದ್ದೆ. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಈ ಕೆಲಸವನ್ನು ಮಾಡೋಕೆ ಸಾಧ್ಯವೇ ಇಲ್ಲ ಎಂದು ಸವಾಲು ಹಾಕಿದ್ದರು. ಹೀಗಾಗಿ ನಾವೂ ಸಹ ಈ ವಿಚಾರವನ್ನು ಸವಾಲಾಗಿ ಸ್ವೀಕರಿಸಿದ್ದೆವು.
ಪರಿಣಾಮ ಸರ್ಕಾರದಿಂದ ಮಂಜೂರಾದ ಜಮೀನುಗಳಿಗೆ ಧರಖಾಸ್ತು ಪೋಡಿ ದುರಸ್ತು ಮಾಡಿಕೊಡುವ ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನ ಕಳೆದ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ನಡೆದಿದೆ. ಸರ್ಕಾರಿ ಕಚೇರಿಗೆ ಅಲೆದು ಮಧ್ಯವರ್ತಿಗಳಿಗೆ ಲಕ್ಷಾಂತರ ಹಣ ನೀಡಿದ್ದರೂ ಈ ಹಿಂದೆ ಪೋಡಿ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ. ಈ ಹಿಂದಿನ 5 ವರ್ಷಗಳ ಅವಧಿಯಲ್ಲಿ ಒಟ್ಟಾರೆಯಾಗಿ 8,500 ಮಂಜೂರಿ ಜಮೀನುಗಳಿಗೆ ಮಾತ್ರ ಪೋಡಿ ದುರಸ್ತು ಮಾಡಲಾಗಿತ್ತು. ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಪೋಡಿ ದುರಸ್ತಿ ಮಾಡಲಾಗಿತ್ತು.
ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರು ಅರ್ಜಿ ಸಲ್ಲಿಸುವುದಕ್ಕೆ ಬದಲಾಗಿ, ಅಧಿಕಾರಿಗಳೇ ಮಂಜೂರಾಗಿರುವ ಎಲ್ಲಾ ರೈತರ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿ ಕಡತಗಳನ್ನು ಆನ್ಲೈನ್ನಲ್ಲಿ ತಯಾರಿಸಿ, ರೈತರ ಜಮೀನಿಗೆ ತೆರಳಿ ಮಂಜೂರಾದ ಜಮೀನುಗಳಿಗೆ ಸರ್ವೆ ಮಾಡಿ, ಸ್ಕೇಚ್ ತಯಾರಿಸಿ, ಆರ್.ಟಿ.ಸಿ., ಇಂಡೀಕರಣ ಮಾಡಿ ಸಂಪೂರ್ಣ ಪಕ್ಕಾ ದಾಖಲೆಗಳನ್ನು ರೈತರಿಗೆ ನೀಡಿ ಮಾಲೀಕತ್ವದ ಭೂಗ್ಯಾರಂಟಿ ನೀಡುವ ಅಭಿಯಾನವನ್ನು ಕಳೆದ ಒಂದು ವರ್ಷದಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಒಂದು ವರ್ಷದಲ್ಲಿ 2,05,757 ರೈತರ ಜಮೀನುಗಳ ಸರ್ವೆ ಕೈಗೆತ್ತಿಕೊಳ್ಳಲಾಗಿದೆ. ಬರುವ ಮೂರು ತಿಂಗಳುಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಸರ್ವೆಗೆ ಕೈಗೆತ್ತಿಕೊಳ್ಳಬೇಕು. ಇದಲ್ಲದೆ, 1,07,217 ರೈತರ ಕಡತಗಳು ಮಿಸ್ಸಿಂಗ್ ರೇಕಾರ್ಡ್ ಕಮಿಟಿಗೆ ಕಳುಹಿಸಲಾಗಿದೆ. ಇವುಗಳಲ್ಲಿಯೂ ಸಹ ಈಗಾಗಲೇ 3,662 ರೈತರ ಕಡತಗಳನ್ನು ವಿಲೇ ಮಾಡಲಾಗಿದೆ. ಮುಂದುವರೆದು, 50,000 ಕಡತಗಳನ್ನು 3 ತಿಂಗಳುಗಳಲ್ಲಿ ವಿಲೇಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.
ಇದಲ್ಲದೇ 1,06,000 ರೈತರ ದಾಖಲೆಗಳು ಮಂಜೂರು ವಿಸ್ತೀರ್ಣ ಲಭ್ಯ ಜಮೀನಿಗಿಂತ ಹೆಚ್ಚು ಇದ್ದು ಇವುಗಳನ್ನು ಕೂಡಲೇ ವಾಸ್ತವ ಅನುಭವವನ್ನು ಸ್ಥಳದಲ್ಲಿಯೇ ಸರ್ವೆ ಮಾಡಿ ಇತ್ಯರ್ಥ ಮಾಡಬೇಕು. ಇನ್ನೂ 3,50,000 ರೈತರ ಮಂಜೂರು ಕಡತಗಳನ್ನು ತಯಾರಿಸಲು ಬಾಕಿ ಇದ್ದು ಅವುಗಳನ್ನು ಒಂದು ತಿಂಗಳೊಳಗೆ ತಯಾರಿಸಬೇಕು. ಹೀಗೆ 20-50 ವರ್ಷಗಳ ಹಿಂದೆ ಮಂಜೂರಾಗಿದ್ದ ಸುಮಾರು 11,74,226 ರೈತರ ದಾಖಲೆಗಳನ್ನು ತಯಾರಿಸಿ, ಅರ್ಹ ರೈತರಿಗೆ ಪಕ್ಕ ದಾಖಲೆಗಳನ್ನು ಒದಗಿಸುವ ಅಭಿಯಾನಕ್ಕೆ ವೇಗ ನೀಡಬೇಕು” ಎಂದು ಸೂಚಿಸಿದರು.
ಫೌತಿ ಖಾತೆ ಅಭಿಯಾನ:
ರಾಜ್ಯದಲ್ಲಿ ಸುಮಾರು 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿರುವುದರಿಂದ ಅವರ ವಾರಸುದಾರರಿಗೆ ಕ್ರಯ, ಸಾಲ, ವಿಭಾಗ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಭೂದಾಖಲೆಗಳು ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಆಗದೇ, ದಾಖಲೆ ನಿರ್ವಹಣೆ ಅಸರ್ಮಪಕವಾಗಿರುವುದನ್ನು ನಿವಾರಿಸಿ, ಖಾತೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡಿ, ದಾಖಲೆಗಳನ್ನು ಸಮರ್ಪಕ ಮತ್ತು ಪಕ್ಕಾಗೊಳಿಸುವ ಇ-ಪೌತಿ ಖಾತಾ ಅಭಿಯಾನವನ್ನು ಕಂದಾಯ ಇಲಾಖೆ ಜರುಗಿಸುತ್ತಿದೆ.
ರೈತರ ಅರ್ಜಿಗಳಿಗೂ ಕಾಯದೆ. ಇಲಾಖೆಯೇ ರೈತರ ಮನೆ ಬಾಗಿಲಿಗೆ ಹೋಗಿ ಈ ಹಿಂದೆ ಹತ್ತಾರು ವರ್ಷಗಳಿಂದ ಬಾಕಿ ಇದ್ದ ಪೌತಿ ಖಾತೆಗಳನ್ನು ವಾರಸುದಾರರಿಗೆ ಸ್ವಯಂಪ್ರೇರಣೆಯಿಂದ ಖಾತೆ ಮಾಡಿಕೊಡುವ ಕೆಲಸ ಈಗ ನಡೆಯುತ್ತಿದೆ. ಈಗಾಗಲೇ 13 ಲಕ್ಷ ಜಮೀನುಗಳನ್ನು ವಾರಸುದಾರರ ಮನೆ ಬಾಗಿಲಿಗೆ ಹೋಗಿ ಖಾತೆ ಮಾಡಿಕೊಡಲಾಗಿದೆ.
ಕುಟುಂಬಗಳಲ್ಲಿ ವ್ಯಾಜ್ಯವಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಜಮೀನುಗಳನ್ನು ಪೌತಿ ಖಾತೆ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಫೌತಿಖಾತೆ ಅಭಿಯಾನದ ಅಡಿ ಅತಿ ಹೆಚ್ಚು ಪೌತಿ ಖಾತೆ ಮಾಡಿರುವ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರುಗಳಿಗೆ ರೂ. 5.00 ಕೋಟಿ ಪ್ರೋತ್ಸಾಹಧನ ಸರ್ಕಾರದಿಂದ ನೀಡುವುದಾಗಿಯೂ ಘೋಷಿಸಿದರು.
ಭೂ ಸುರಕ್ಷಾ ಅಭಿಯಾನ:
ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಈ ವರ್ಷದ ಏಪ್ರಿಲ್ ಕೊನೆಯ ಒಳಗೆ ಈ ಕೆಲಸವನ್ನು ಮುಗಿಸಬೇಕು. ಈಗಾಗಲೇ ಜನ ಸಾಮಾನ್ಯರಿಗೆ 52,70 ಲಕ್ಷ ಪುಟಗಳನ್ನು ಆನ್ಲೈನ್ ಮೂಲಕ ವಿತರಿಸಲಾಗಿದ್ದು, ಶೀಘ್ರದಲ್ಲಿ ಎಲ್ಲಾ ಭೂ ದಾಖಲೆಗಳೂ ಆನ್ಲೈನ್ ಮೂಲಕ ವಿತರಿಸುವಂತಾಗಬೇಕು ಎಂದು ತಾಕೀತು ಮಾಡಿದರು.
ಕೆಲವರಿಗೆ ದಾಖಲೆ ಕಳೆದುಹೋಗಿದೆ ಎಂದು ಬರೆದುಕೊಡುವ ಚಾಲಿ ಇದೆ. ಅಲ್ಲದೆ, ದಾಖಲೆಗಳನ್ನು ತಿದ್ದುವ ಕೆಲಸಗಳೂ ಈ ಹಿಂದೆ ಎಗ್ಗಿಲ್ಲದೆ ನಡೆದಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಂತಹ ಪ್ರವೃತ್ತಿಗೆ ತಡೆಯೊಡ್ಡಬೇಕು, ಮೂಲ ದಾಖಲೆಗಳು ಕಳೆದು ಹೋಗದಂತೆ ಹಾಗೂ ನಶಿಸಿ ಹೋಗದಂತೆ ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದ್ದು, ರೈತರು ತಮಗೆ ಯಾವ ದಾಖಲೆ ಬೇಕಿದ್ದರೂ ಆನ್ಲೈನ್ನಲ್ಲಿ ಸರ್ಚ್ ಮಾಡಿ ಅವರೇ ವೆರಿಫೈ ದಾಖಲೆ ಪಡೆಯುವಂತಾದರೆ ನಮ್ಮ ಉದ್ದೇಶ ಈಡೇರುತ್ತದೆ ಎಂದರು.
ಸರ್ವೇ ಇಲಾಖೆಗೂ ಸರ್ಜರಿ:
ಸರ್ವೇ ಇಲಾಖೆಗೂ ಚಿಕಿತ್ಸಕ ಬದಲಾವಣೆ ನೀಡುವ ಉದ್ದೇಶದಿಂದ ಇಡೀ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಸಂಬಂಧ ನೂತನ ಕಾರ್ಯ ಯೋಜನೆಯನ್ನು ಇಂದಿನ ಸಭೆಯಲ್ಲಿ ಸರ್ವೇ ಇಲಾಖೆ ನೂತನ ಆಯುಕ್ತರಾದ ವೆಂಕಟರಾಜು ಅವರು ಪ್ರಸ್ತುತಪಡಿಸಿದರು.
ಪ್ರಸ್ತುತಿ ನಂತರ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡರು, ರೋವರ್ ಮೂಲಕ ಸರ್ವೇ ಪೂರ್ಣಗೊಳಿಸಿದರೆ ಸ್ಕೆಚ್, ಟಿಪ್ಪಣಿ, ಆಖಾರ್ ಬಂದ್ , ಕೈಬರಹ ಸೇರಿ ಪ್ರತಿಯೊಂದೂ ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ಈ ವರ್ಷಾಂತ್ಯದಲ್ಲಿ ಇಡೀ ಇಲಾಖೆಯನ್ನು ಸಂಪೂರ್ಣ ಕಾಗದ ರಹಿತಗೊಳಿಸಬೇಕು, ಎಂಡ್ ಟು ಎಂಡ್ ಡಿಜಿಟಲೀಕರಣಗೊಳಿಸಬೇಕು ಎಂದು ಸೂಚಿಸಿದರು.
ಸಾವಿರ ದಿನಗಳ ಸವಾಲಿನ ಹಾದಿ…!:
ಕಳೆದ ಸಾವಿರ ದಿನಗಳಲ್ಲಿ ಪೋಡಿ ದುರಸ್ತಿ, ಭೂ ಸುರಕ್ಷಾ, ಫೌತಿ ಖಾತೆ ಅಭಿಯಾನ, ಇ-ಆಫೀಸ್ ಸೇರಿದಂತೆ ಅನೇಕ ಗಮನೀಯ ಕೆಲಸಗಳಾಗಿವೆ. ಆದರೆ, ಈ ಯಾವ ಕೆಲಸವೂ ಸಲೀಸಾಗಿ ಆಗಿಲ್ಲ. ಸಾಕಷ್ಟು ಪರಿಶ್ರಮದ ಫಲವಾಗಿ ನಾವು ಇಷ್ಟು ದೂರ ಕ್ರಮಿಸಿದ್ದೇವೆ. ಇಲಾಖೆಯಲ್ಲಿ ಬದಲಾವಣೆ ಪರಿವರ್ತನೆ ಆರಂಭ ಮಾಡಿದ್ದಾಗ ಏನೇನು ಕೆಲಸ ಬಾಕಿ ಉಳಿದಿದೆ ಎಂಬ ಮಾಹಿತಿಯೇ ಇರಲಿಲ್ಲ. ಅಲ್ಲಿಂದ ಆರಂಭವಾಗಿ ಈಗ ಸಾಕಷ್ಟು ಆನ್ಲೈನ್ ಟ್ರಾಕಿಂಗ್ ಡಿವೈಸ್ ಅನ್ನು ಅಭಿವೃದ್ಧಿ ಮಾಡಿದ್ದೇವೆ. ಆ ಮೂಲಕ ಎಷ್ಟು ಜನರ ಕೆಲಸ ಬಾಕಿ ಇದೆ? ಎಷ್ಟು ಅರ್ಜಿ ಬಾಕಿ ಇದೆ? ಎಷ್ಟು ಕೇಸ್ ಗಳು ಬಾಕಿ ಇವೆ? ಆರ್ಆರ್ಟಿ ಕರೆಕ್ಷನ್ ಎಷ್ಟು ಬಾಕಿ ಇದೆ? ಫೌತಿಖಾತೆ ಎಷ್ಟು ಬಾಕಿ ಇದೆ? ಹೀಗೆ ಎಲ್ಲಾ ಮಾಹಿತಿಯೂ ಈಗ ಬೆರಳ ತುದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಿಂದೆ ಯಾವ ಅಧಿಕಾರಿಯ ಬಳಿ ಎಷ್ಟು ಫೈಲ್ ಬಾಕಿ ಇದೆ ಎಂಬ ಮಾಹಿತಿಯೂ ನಮ್ಮಲ್ಲಿ ಇರಲಿಲ್ಲ. ಅಂತಹ ಪರಿಸ್ಥಿತಿಯಿಂದ ಕೇವಲ ಸಾವಿರ ದಿನದಲ್ಲಿ ಎಲ್ಲಾ ಕೆಲಸವನ್ನೂ ಆನ್ಲೈನ್ ಗೆ ತರಲಾಗಿದೆ. ಈಗ ಎಲ್ಲವೂ ಆನ್ಲೈನ್ ಆಗಿದೆ. ಇದನ್ನು ಸಾಧ್ಯವಾಗಿಸಲು ಎಲ್ಲಾ ಅಧಿಕಾರಿಗಳ ಪರಿಶ್ರಮವೂ ಗಮನೀಯ. ಆರಂಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಟಪಾಲು ವಿಭಾಗದಲ್ಲಿ ಸ್ವೀಕರಿಸುವ ಅರ್ಜಿಗಳೇ ಇ-ಆಫೀಸ್ ಮೂಲಕ ದಾಖಲಾಗಲಿ ಎಂದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದರು. ಈಗ ವಿಎ ಯಿಂದ ಸರ್ವೇಯರ್ ವರೆಗೆ ಎಲ್ಲವೂ ಇ-ಆಫೀಸ್ ನಲ್ಲೇ ಆಡಳಿತ ನಡೆಯುತ್ತಿದೆ. ಅಲ್ಲಿಂದ ಇಲ್ಲಿಯವರೆಗಿನ ಪ್ರಯಾಣದಲ್ಲಿ ತುಂಬಾ ಅಧಿಕಾರಿಗಳ ಪರಿಶ್ರಮ ಇದೆ. ತುಂಬಾ ಜಿಲ್ಲಾಧಿಕಾರಿಗಳು ಪರಿಶ್ರಮಪಟ್ಟಿದ್ದಾರೆ. ಆ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು ಎಂದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತರಾದ ವೆಂಕಟರಾಜು ಉಪಸ್ಥಿತರಿದ್ದರು.
