ಬೆಂಗಳೂರು: ಬೆಂಗಳೂರಿನ ಆರೋಗ್ಯಸೌಧದ ಆವರಣದಲ್ಲಿ (‘ಆರೋಗ್ಯ ಸಂಚಾರಿ’) ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ, ಆಶಾ ಕಾರ್ಯಕರ್ತರಿಗೆ ಎಲೆಕ್ಟ್ರಿಕ್ ಬೈಕ್ ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿತರಿಸಿದರು.
ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಹೊರ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಒಂದು ಹೊಸ ಸಾಧನ ಸೇರ್ಪಡೆ ಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ “ಯುನೈಟೆಡ್ ವೇ ಆಫ್ ಬೆಂಗಳೂರು” (UWBe) ಸಂಸ್ಥೆ ಮತ್ತು “ಹೆಲ್ತಿಯಮ್ ಮೆಡ್ಟೆಕ್ ಸಂಸ್ಥೆ”ಯ ಸಹಯೋಗದೊಂದಿಗೆ ಸಿ.ಎಸ್.ಆರ್ ಯೋಜನೆಯಡಿ ಇ-ಬೈಕ್ಗಳನ್ನು ನೀಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.
ಪ್ರಸ್ತುತ ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), ಜಿಬಿಎ ಹಾಗೂ ಬೆಂಗಳೂರು ನಗರ ಜಿಲ್ಲೆಯ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೊದಲ ಹಂತದಲ್ಲಿ ಒಟ್ಟು 69 ಇ-ಬೈಕ್ ಗಳನ್ನು ನೀಡಲಾಗುತ್ತಿದೆ. ಈ ಸಂಸ್ಥೆಯವರು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇನ್ನುಳಿದ ಜಿಲ್ಲೆಗಳಿಗೆ ಇ-ಬೈಕ್ ಗಳನ್ನು ನೀಡಲು ಸಹಕರಿಸುವುದಾಗಿ ತಿಳಿಸಿದ್ದಾರೆ.
ಈ ದ್ವಿಚಕ್ರ ವಾಹನಗಳು ನಮ್ಮ ಆರೋಗ್ಯ ಸೇವೆಯನ್ನು ಜನರ ಮನೆಬಾಗಿಲಿಗೆ ತಲುಪಿಸಲು ಸಹಾಯ ಮಾಡಲಿವೆ. ಆರೋಗ್ಯ ಸೇವೆ ಎನ್ನುವುದು ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ, ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಬೇಕು ಎನ್ನುವ ನಮ್ಮ ಆಶಯಕ್ಕೆ ಪೂರಕ.
ನಮ್ಮ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಗಲಿರುಳು ಎನ್ನದೆ ಜನರಿಗೆ ಆರೋಗ್ಯ ಸೇವೆ ನೀಡಲು ಶ್ರಮಿಸುತ್ತಿದ್ದಾರೆ. ದೂರದ ಊರುಗಳಿಗೆ, ಕುಗ್ರಾಮಗಳಿಗೆ ಹೋಗಲು ಅವರಿಗೆ ಸಾರಿಗೆಯ ಸಮಸ್ಯೆ ಆಗುತ್ತಿತ್ತು. ಈಗ ನೀಡಲಾಗುತ್ತಿರುವ ಈ ಇ-ಬೈಕ್ಗಳಿಂದ ಅವರು ಸಕಾಲಕ್ಕೆ ಜನರ ಬಳಿಗೆ ಹೋಗಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಲು ಇದು ಸಹಕಾರಿ. ಬೈಕ್ ನೊಂದಿಗೆ, ಹೆಲ್ಮೆಟ್, ನೀರಿನ ಬಾಟಲ್, ರೈನಕೋಟ್ ಸಹ ನೀಡಲಾಗುತ್ತಿದೆ.
ಈ ಇಡೀ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೆ ತಂದಿರುವ “ಹೆಲ್ತಿಯಮ್ ಮೆಡ್ಟೆಕ್” ಮತ್ತು “ಯುನೈಟೆಡ್ ವೇ ಆಫ್ ಬೆಂಗಳೂರು” (UWBe) ಸಂಸ್ಥೆಯ ಕೆಲಸ ನಿಜಕ್ಕೂ ಅಭಿನಂದನೀಯ.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಗುರುದತ್ ಹೆಗಡೆ, ಎನ್.ಎಚ್.ಎಂ ಎಂಡಿ ಅವಿನಾಶ್ ಮೆನನ್, ನಿರ್ದೇಶಕ ವಸಂತ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
