ಸಮಗ್ರ ಸುದ್ದಿ

ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ, ಕಂದಾಯ ಭೂಮಿಯಿದ್ದರೆ ಜಂಟಿ ಸರ್ವೆ| ಅರಣ್ಯಭೂಮಿ ಮಂಜೂರು ಸಾಧ್ಯವೇ ಇಲ್ಲ: ಈಶ್ವರ ಖಂಡ್ರೆ

Share

ಬೆಂಗಳೂರು: ಮೀಸಲು ಅರಣ್ಯ, ಪರಿಭಾವಿತ ಅರಣ್ಯ, ಸೆಕ್ಷನ್ 4 ಅಧಿಸೂಚನೆಯ ನಂತರ ಯಾವುದೇ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ, ಕಿಶೋರ್ ಕುಮಾರ್ ಪುತ್ತೂರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಅಕ್ರಮ ಸಕ್ರಮದಡಿ ನಮೂನೆ 50, 53, 57ರಲ್ಲಿ ಜಮೀನು ಮಂಜೂರಾತಿ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ಕಂದಾಯ ಭೂಮಿ ಮಂಜೂರು ಮಾಡಲು ಬರುತ್ತದೆಯೇ ಹೊರತು ಅರಣ್ಯ ಭೂಮಿಯನ್ನು ಅಲ್ಲ ಎಂದು ತಿಳಿಸಿದರು.

ಒಂದೇ ಸರ್ವೇ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಕಡೆ ಜಂಟಿ ಸರ್ವೆ ಮಾಡುವಂತೆ ಕಂದಾಯ ಸಚಿವರು ಹಾಗೂ ತಾವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೋಜಿಣಿ ಕಾರ್ಯಕ್ಕೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ, ಕಾಲಮಿತಿಯಲ್ಲಿ ಗಡಿ ಗುರುತಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 1,20,491 ಪ್ರಕರಣಗಳಲ್ಲಿ 2,21,263 ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವು ಮಾಡಲು ಬಾಕಿ ಇದೆ, ಒತ್ತುವರಿದಾರರ ವಿರುದ್ಧ ಅರಣ್ಯ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ಅತಿಕ್ರಮಣ ಪತ್ತೆ ಹಚ್ಚಲು ಉಪಗ್ರಹ ಕಣ್ಗಾವಲು ವ್ಯವಸ್ಥೆ (ಫಾರೆಸ್ಟ್ ಕವರ್ ಚೇಂಜ್ ಅಲರ್ಟ್ ಸಿಸ್ಟಮ್) ಎಂಬ ತಾಂತ್ರಿಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ಅರಣ್ಯ ಒತ್ತುವರಿಯ ತಾಂತ್ರಿಕ ಸಾಕ್ಷ್ಯ ಒದಗಿಸುತ್ತದೆ, ಸಂಬಂಧಿತ ವಲಯಕ್ಕೆ ಎಚ್ಚರಿಕೆ ರವಾನಿಸುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.


Share

You cannot copy content of this page