ಬೆಂಗಳೂರು: ನಾಗರಹೊಳೆ ಕಾಡಿನ ಮೇಟಿಕುಪ್ಪೆ ವಲಯದ ಅರಣ್ಯದ ಗಡಿಯಿಂದ 300 ಮೀಟರ್ ದೂರದ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ 3 ವರ್ಷದ ಹುಲಿ ಬಲಿಯಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ದುಃಖ ವ್ಯಕ್ತಪಡಿಸಿದ್ದಾರೆ.
ಈ ದುರ್ಘಟನೆಯ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ಮಾಡಿಸಿ, ಸಿಬ್ಬಂದಿ ಗಸ್ತು ಕಾರ್ಯದಲ್ಲಿ ಲೋಪ ಎಸಗಿದಗದಲ್ಲಿ ಕ್ರಮ ಕೈಗೊಳ್ಳಲು ಮತ್ತು ಉರುಳು ಹಾಕಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಾಡಿನಂಚಿನ ಜಮೀನುಗಳಲ್ಲಿ ಉರುಳು ತೆರವಿಗೆ ಕ್ರಮ ವಹಿಸಲು ಸೂಚಿಸಿದ್ದಾರೆ.
ಉರುಳು ತೆರವಿಗೆ ಸರ್ಕಾರ ಪದೆ ಪದೆ ಸೂಚಿಸಿದ್ದರೂ ಅಧಿಕಾರಿ ಸಿಬ್ಬಂದಿಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ತಿಳಿಸಿರುವ ಅವರು ಸಿಬ್ಬಂದಿಯ ಗಸ್ತು ಲೋಪದ ಬಗ್ಗೆಯೂ ತನಿಖೆಗೆ ಆದೇಶ ನೀಡಿದ್ದಾರೆ.
