ದಾವಣಗೆರೆ: ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ 2 ಕಿ.ಮೀ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ ಚಿರತೆ ಸಾವಿಗೀಡಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಅವರು, ಇಂದು ಬೆಳಗ್ಗೆ ಎರಡು ವರ್ಷ ವಯಸ್ಸಿನ ಹೆಣ್ಣು ಚಿರತೆಯೊಂದು ಗುಂಡೇಟಿನಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ವನ್ಯಜೀವಿ ಅಂಗಾಂಗಕ್ಕಾಗಿ ಕಳ್ಳಬೇಟೆ ಇನ್ನೂ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಆದರ್ಶ್, ಚಿರತೆಯ ದೇಹದೊಳಗೆ ಮೂರು ಗುಂಡುಗಳು ಪತ್ತೆಯಾಗಿವೆ ಎಂದು ವರದಿ ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ವನ್ಯಜೀವಿ ಕಳ್ಳಬೇಟೆಗಾರರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಶಿಕ್ಷೆ ಕೊಡಿಸಲು ಮತ್ತು ಈ ವಲಯದಲ್ಲಿ ಗಸ್ತು ವೈಫಲ್ಯವಾಗಿದ್ದಲ್ಲಿ ಸಂಬಂಧಿತ ಗಸ್ತು ಸಿಬ್ಬಂದಿಯ ಮೇಲೆ ಶಿಸ್ತುಕ್ರಮ ಜರುಗಿಸಲು ಹಾಗೂ ಅರಣ್ಯ ಅಪರಾಧ ನಿಯಂತ್ರಣ ಕೋಶವನ್ನು ಹೆಚ್ಚು ಸಕ್ರಿಯಗೊಳಿಸಲು ಸೂಚನೆ ನೀಡಿದ್ದಾರೆ.
