ಸಮಗ್ರ ಸುದ್ದಿ

ಅಂಬೇಡ್ಕರ್ ಜೊತೆ ಭಾರತದ ಬದುಕನ್ನು ತೆರೆದಿಡುವ ಕೃತಿ ದಲಿತ ಸೂರ್ಯ – ಎಲ್ ಹನುಮಂತಯ್ಯ

Share

ಕೋಲಾರ: ಭಾರತದ ಧಾರ್ಮಿಕ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ತೆರೆದಿಡುತ್ತಲೇ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನವನ್ನು ಹೇಳುವ ದಲಿತ ಸೂರ್ಯ ಕೃತಿ ವಾಸ್ತವವಾಗಿ ಭಾರತದ ಬದುಕಿನ ದರ್ಶನ ಮಾಡಿಸುತ್ತದೆ ಎಂದು ಖ್ಯಾತ ಕವಿ, ಮಾಜಿ ರಾಜ್ಯಸಭಾ ಸದಸ್ಯರಾದ ಡಾ ಎಲ್ ಹನುಮಂತಯ್ಯ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ,ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ತಾಮಕ ದಲ್ಲಿರುವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಭಂಗಣದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಯ ಅಂಗವಾಗಿ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಪ್ರೊ.ಹೆಚ್ ಜೆ ಲಕ್ಕಪ್ಪ ಗೌಡ ಅವರ ದಲಿತ ಸೂರ್ಯ ಕೃತಿ ಕುರಿತಂತೆ ಮಾತನಾಡುತ್ತಿದ್ದರು.

ಅಂಬೇಡ್ಕರ್ ಅವರ ಜೀವನದ ಕಥೆಯನ್ನು ಹೇಳುತ್ತಲೇ ದಲಿತ ಸೂರ್ಯ ಭಾರತದ ವರ್ಣಾಶ್ರಮ ಪದ್ಧತಿ ಕುರಿತು ಅದ್ಭುತವಾದ ಚಿತ್ರವನ್ನು ಕಟ್ಟಿಕೊಡುತ್ತದೆ ಅಂದಿನ ಸಾಮಾಜಿಕ ಸಂದರ್ಭದಲ್ಲಿ ಇದ್ದಂತಹ ಅಸಮಾನತೆ ಅಸ್ಪೃಶ್ಯತೆಯಂತಹ ಕ್ರೂರ ಪದ್ಧತಿಗಳ ಕುರಿತು ಅಸಾಧಾರಣ ವರ್ಣನೆಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ ಎಂದು ಅವರು ಹೇಳಿದರು.

ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಒಳಿತಿಗಾಗಿ ಬಾಲ್ಯ ವಿವಾಹ ವಿರೋಧಿಸಿದ ಅಂಬೇಡ್ಕರ್ ಚಿಂತನೆಗಳನ್ನು ಈ ಕೃತಿ ಸಮರ್ಥವಾಗಿ ಮಂಡಿಸುತ್ತದೆ ಎಂದು ಅವರು ಹೇಳಿದರು. ಅಂಬೇಡ್ಕರ್ ಅವರನ್ನು ಕುರಿತು ಅನೇಕ ಸುಳ್ಳುಗಳು ಪ್ರಚಲಿತದಲ್ಲಿದೆ ಅವುಗಳನ್ನು ನಂಬಬೇಡಿ ಅಂಬೇಡ್ಕರ್ ಅವರ ಕುಟುಂಬದ ಬೇಡಿಕೆಯಂತೆ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಮಹಾರಾಷ್ಟ್ರದಲ್ಲಿ ನೆರವೇರಿಸಲಾಯಿತು ಎಂದು ಅವರು ತಿಳಿಸಿದರು.

ನಿಜವಾದ ಚರಿತ್ರೆಯ ಅರಿವಾಗಬೇಕಾದರೆ ಇಂತಹ ಕೃತಿಗಳನ್ನು ಓದಿ ತಿಳಿದುಕೊಳ್ಳಬೇಕು, ಅಸಮಾನತೆ ಮತ್ತು ಅಸ್ಪೃಶ್ಯತೆ ಎಂತಹ ಕ್ರೂರ ಎಂಬುದು ಅರಿವಾಗಬೇಕೆಂದರೆ ಆ ಕಾಲಘಟ್ಟದ ಸಮರ್ಥ ಚಿತ್ರಣ ತೆಗೆದಿರುವ ಚರಿತ್ರೆಯನ್ನು ಓದಬೇಕು ಎಂದು ಅವರು ಕಿವಿಮಾತು ಹೇಳಿದರು. ರಾಮಾನುಜಾಚಾರ್ಯರು , ದಯಾನಂದ ಸರಸ್ವತಿ, ರಾಜಾರಾಮ್ ಮೋಹನ್ ರಾಯ್ , ಬಸವಣ್ಣನವರು ಹೀಗೆ ಅನೇಕ ಮಹಾನ್ ವ್ಯಕ್ತಿಗಳು ಈ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅವರವರ ಕಾಲಘಟ್ಟಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಅವುಗಳ ಅರಿವು ಇಂದಿನ ಪೀಡಿಕೆಗೆ ಆಗಬೇಕು ಎಂದು ಹನುಮಂತಯ್ಯ ಅವರು ತಿಳಿಸಿದರು.

ಇಂದಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಈ ಜೀವನದ ಕಥೆ ಸ್ಪೂರ್ತಿಯಾಗಿಟ್ಟುಕೊಂಡು ಪ್ರತಿಕೂಲ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಹೇಗೆ ಮುನ್ನುಗ್ಗಬೇಕು ಎಂಬ ಆದರ್ಶವನ್ನು ಗ್ರಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಬಿ.ಕೆ. ರವಿ ಅವರು ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ಅತ್ಯಂತ ಒಳ್ಳೆಯ ಕೆಲಸ ಮಾಡುತ್ತಿದೆ ಇಂದಿನ ಆಧುನಿಕ ತಂತ್ರಜ್ಞಾನ ಪುಸ್ತಕದ ಓದನ್ನು ಕಡಿಮೆ ಮಾಡಿದೆ .ಯುವ ಪೀಳಿಗೆ ತಂತ್ರಜ್ಞಾನದ ಬಳಕೆಯನ್ನು ಎಷ್ಟು, ಹೇಗೆ ,ಯಾವಾಗ ಮಾಡಬೇಕು ಎಂಬುದನ್ನು ತಿಳಿದುಕೊಂಡಲ್ಲಿ ತಂತ್ರಜ್ಞಾನ ಬದುಕಿಗೆ ಸಹಕಾರಿಯಾಗುತ್ತದೆ, ಅದನ್ನು ಹೊರತುಪಡಿಸಿ ಅತಿಯಾಗಿ ಅದನ್ನು ಅವಲಂಬಿಸಿದರೆ ಜೀವನ ನರಕವಾಗುತ್ತದೆ ಎಂದರು.

ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಪುಸ್ತಕಗಳೇ ಸಹಕಾರಿ ಸಾಹಿತ್ಯ ಕೊಡುವ ಮನೋಸ್ಥೈರ್ಯ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ , ಆದುದರಿಂದ ಓದಿನ ಕಡೆ ಹೆಚ್ಚಿನ ಗಮನ ಕೊಡಿ ಮೊಬೈಲ್ ,ಲ್ಯಾಪ್ಟಾಪ್ ಬಳಕೆ ಕಡಿಮೆ ಮಾಡಿ ಎಂದು ಅವರು ಹೇಳಿದರು.

ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಹಾನಂದ ಅವರು ಕನ್ನಡ ಪುಸ್ತಕ ಪ್ರಾಧಿಕಾರ ತುಂಬಾ ಮಹತ್ವಾಕಾಂಕ್ಷೆಯಿಂದ ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆ ರೂಪಿಸಿದೆ ,ಜನರಿರುವ ಕಡೆಗೆ ಪುಸ್ತಕ ಕೊಂಡೊಯ್ಯುವ ನಮ್ಮ ಪರಿಕಲ್ಪನೆ ಸಾಕಷ್ಟು ಜನರ ಗಮನ ಸೆಳೆದಿದೆ ಇದಕ್ಕೆ ಉತ್ತಮ ಸ್ಪಂದನೆಯು ಸಿಗುತ್ತಿದೆ, ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಂಡು ಪುಸ್ತಕಗಳ ಪ್ರೀತಿ ಬೆಳೆಸಿಕೊಂಡಲ್ಲಿ ನಮ್ಮ ಕಾರ್ಯಕ್ರಮ ಸಫಲವಾಗುತ್ತದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಡಿ. ಕುಮುದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಸ್ವಾಗತಿಸಿದರು.


Share

You cannot copy content of this page