ಸಮಗ್ರ ಸುದ್ದಿ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ -ಪಂಕಜ್ ಕುಮಾರ್ ಪಾಂಡೆ

Share

ಬೆಂಗಳೂರು: ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, ಮೇ 16ರಂದು ಬೆಂಗಳೂರಿನಲ್ಲಿ “ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ
“ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಲಾಗಿದೆ ಎಂದು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ತಿಳಿಸಿದ್ದಾರೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಇಂದು ಭಾರತದ ತಂತ್ರಜ್ಞಾನ ಮಹತ್ವಾಕಾಂಕ್ಷೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ದೇಶದ ಪ್ರಮುಖ ಜಿಡಿಪಿ ಕೊಡುಗೆ ನೀಡುವ ನಗರಗಳಲ್ಲಿ ಬೆಂಗಳೂರು ಒಂದಾಗಿದ್ದು, ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಪ್ರಮುಖ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ ಎಂದರು.

ಸ್ಟಾರ್ಟ್‌ಅಪ್‌ಗಳ ನಿಧಿ ಸಂಗ್ರಹ ಹಾಗೂ ನವೀನ ಚಟುವಟಿಕೆಗಳಲ್ಲಿ ಮಹತ್ತರ ಪಾತ್ರವಹಿಸಿರುವುದು, ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವದ ಅತಿ ದೊಡ್ಡ ಪ್ರತಿಭಾ ಸಂಪನ್ಮೂಲಗಳಲ್ಲಿ ಒಂದನ್ನು ಹೊಂದಿರುವುದು—ಈ ಎಲ್ಲ ಕಾರಣಗಳಿಂದ ಬೆಂಗಳೂರು “ಪೂರ್ವದ ಸಿಲಿಕಾನ್ ವ್ಯಾಲಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ವಲಯ ಮತ್ತು ತಾಂತ್ರಿಕ ಕಂಪನಿಗಳ ಮೂಲಕ ಏರೋಸ್ಪೇಸ್, ರಕ್ಷಣಾ ಹಾಗೂ ಮೂಲ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕವು ಬಲವಾದ ನೆಲೆ ನಿರ್ಮಿಸಿತು. ಬಳಿಕ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಮತ್ತು ವಿಪ್ರೋ ಮುಂತಾದ ಐಟಿ ದಿಗ್ಗಜಗಳ ಉದಯದೊಂದಿಗೆ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ವಿವರಿಸಿದರು.

ಪ್ರಸ್ತುತ ದೇಶವು ಡೀಪ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ವೈಜ್ಞಾನಿಕ ನವೀನತೆಯ ಹಂತಕ್ಕೆ ಸಾಗುತ್ತಿದೆ. ಈ ಹಂತದಲ್ಲಿ ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರಗಳ ನಡುವಿನ ಗಟ್ಟಿಯಾದ ಸಹಕಾರ ಅತ್ಯವಶ್ಯಕವಾಗಿದೆ. ತಂತ್ರಜ್ಞಾನ ಸ್ವಾಯತ್ತತೆಯನ್ನು ಸಾಧಿಸಲು ಇದು ಪ್ರಮುಖ ಹಂತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ರೂಪುಗೊಂಡಿದೆ ಎಂದು ತಿಳಿಸಿದರು.

ಪ್ಯಾನ್ ಐಐಟಿ ಅಧ್ಯಕ್ಷರಾದ ಪ್ರಭಾತ್ ಕುಮಾರ್ (ಐ.ಆರ್.ಎಸ್) ಅವರು ಮಾತನಾಡಿ, ಸಮಿಟ್‌ನಲ್ಲಿ ಉನ್ನತ ಮಟ್ಟದ ಪ್ಲೀನರಿ ಸೆಷನ್‌ಗಳು, ಆಳವಾದ ಪ್ಯಾನೆಲ್ ಚರ್ಚೆಗಳು ಹಾಗೂ ಎಐ, ರಕ್ಷಣಾ, ಸೆಮಿಕಂಡಕ್ಟರ್, ಇಂಧನ, ಮೊಬೈಲಿಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಾಂತರ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.

ಆಯ್ದ ಪಿಚ್-ಹ್ಯಾಕಥಾನ್ ಮೂಲಕ ಹೆಚ್ಚಿನ ಸಾಧ್ಯತೆ ಹೊಂದಿರುವ ಸ್ಟಾರ್ಟ್‌ಅಪ್‌ಗಳನ್ನು 200ಕ್ಕೂ ಹೆಚ್ಚು ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ಸಂಪರ್ಕಿಸಲಾಗುವುದು. ಜೊತೆಗೆ, 10,000 ಮಂದಿ ಭಾಗವಹಿಸುವ ಹ್ಯಾಕಥಾನ್‌ನಲ್ಲಿ ಕರ್ನಾಟಕ ಸರ್ಕಾರ ನೀಡಿದ ನೈಜ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲಾಗುವುದು ಎಂದರು.

ಭಾರತವು ಜಾಗತಿಕ ತಂತ್ರಜ್ಞಾನ ಸ್ಪರ್ಧೆಯಲ್ಲಿ ಮುನ್ನಡೆಯಲು ಆಳವಾದ ವಿಜ್ಞಾನ ಮತ್ತು ಮೂಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ. ಪ್ಯಾನ್ ಐಐಟಿ ಸಮುದಾಯವು ಅಪಾರ ಬೌದ್ಧಿಕ ಸಂಪತ್ತು ಮತ್ತು ಜಾಗತಿಕ ಪ್ರಭಾವ ಹೊಂದಿರುವುದರಿಂದ, ಈ ಸಮಿಟ್ ರಾಷ್ಟ್ರೀಯ ಆದ್ಯತೆಗಳನ್ನು ಜಾಗತಿಕ ಆಶಯಗಳೊಂದಿಗೆ ಹೊಂದಿಸಲು ವೇದಿಕೆಯಾಗಲಿದೆ ಎಂದು ಅವರು ಹೇಳಿದರು.

23 ಐಐಟಿಗಳ 5 ಲಕ್ಷಕ್ಕೂ ಹೆಚ್ಚು ಅಲುಮ್ನಿಗಳ ಸಂಯುಕ್ತ ಚಿಂತನೆಯ ಫಲವಾಗಿರುವ ಈ ಸಮಿಟ್, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವ್ಯವಹಾರ ಮತ್ತು ನೀತಿ ರೂಪಣೆಯಲ್ಲಿ ಸಕ್ರಿಯ ಸಮುದಾಯವನ್ನು ಒಂದೇ ವೇದಿಕೆಗೆ ತರಲಿದೆ. ನವೀನತೆ, ಉದ್ಯಮಶೀಲತೆ ಮತ್ತು ರಾಷ್ಟ್ರ ನಿರ್ಮಾಣದ ಮುಂದಿನ ಹಂತವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ದಿನಪೂರ್ತಿ ನಡೆಯುವ ಈ ಸಮಿಟ್‌ನಲ್ಲಿ ಮುಖ್ಯ ಭಾಷಣಗಳು, ಪ್ಯಾನೆಲ್ ಚರ್ಚೆಗಳು, ಸಿಎಕ್ಸ್ಓ ರೌಂಡ್‌ಟೇಬಲ್, ಅಗ್ರಗಣ್ಯ ಸ್ಟಾರ್ಟ್‌ಅಪ್‌ಗಳ ಪ್ರದರ್ಶನ, ಹ್ಯಾಕಥಾನ್ ಹಾಗೂ ಇನೋವೇಶನ್ ಪ್ರದರ್ಶನಗಳು ನಡೆಯಲಿವೆ.

ಈ ಸಮಿಟ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿ ಶಂಕರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್, ಎಎನ್‌ಆರ್‌ಎಫ್ ಸಿಇಒ ಶಿವಕುಮಾರ್ ಕಲ್ಯಾಣರಾಮನ್, ಇಂಡಿಯಾ ಎಐ ಮಿಷನ್‌ನ ಮಾಜಿ ಸಿಇಒ ಅಭಿಷೇಕ್ ಸಿಂಗ್, ತೇಜಸ್ ವಿಮಾನದ ಮುಖ್ಯ ವಿನ್ಯಾಸಕರಾದ ಡಾ. ಕೋಟಾ ಹರಿನಾರಾಯಣ, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇಂಧನ) ಗೌರವ್ ಗುಪ್ತಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಮತ್ತು ಗೃಹ) ತುಷಾರ್ ಗಿರಿ ನಾಥ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಟ್ಯಾಲಿ ಸೊಲ್ಯೂಶನ್ಸ್ ಸಂಸ್ಥಾಪಕರಾದ ಭಾರತ್ ಗೋಯಂಕಾ, ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟ್ ಪದ್ಮನಾಭನ್, ಮೀಶೋ ಸಹ ಸಂಸ್ಥಾಪಕ ಹಾಗೂ ಸಿಇಒ ವಿಧಿತ್ ಆತ್ರೇಯ್, ಗ್ರೋವ್ ಸಹ ಸಂಸ್ಥಾಪಕ ಹಾಗೂ ಸಿಒಒ ಹರ್ಷ್ ಜೈನ್, ಅಥರ್ ಎನರ್ಜಿ ಸಹ ಸಂಸ್ಥಾಪಕ ಹಾಗೂ ಸಿಇಒ ತರುಣ್ ಮೆಹ್ತಾ, ಸ್ವಿಗ್ಗಿ ಸಹ ಸಂಸ್ಥಾಪಕ ಫಣಿ ಕಿಶನ್ ಅಡ್ಡೆಪಳ್ಳಿ, ಪಿಡಬ್ಲ್ಯೂಸಿ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ ಮುಖ್ಯಸ್ಥ ರಾಜೇಶ್ ಓಜಾ ಹಾಗೂ ಎಸ್ಎಪಿ ಗ್ಲೋಬಲ್ ಡೆಲಿವರಿ ಮುಖ್ಯಸ್ಥ ರಜನೀಶ್ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


Share

You cannot copy content of this page