ಬೆಂಗಳೂರು:ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಹೆಗ್ಗನಹಳ್ಳಿ ವಿಭಾಗದ (ದಾಸರಹಳ್ಳಿ ವಿಧಾನಸಭಾ ಕ್ಷೇತ್ರ) ಪೀಣ್ಯ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ಇಂದು ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಬಿಎಂಟಿಸಿ ಬಸ್ ನಿಲ್ದಾಣದಿಂದ ಸುಮಾರು 300 ಮೀಟರ್ ಉದ್ದಕ್ಕೆ ರಸ್ತೆ ಇಕ್ಕೆಲಗಳಲ್ಲಿ ಫುಟ್ಪಾತ್ ಮೇಲಿದ್ದ ಅಂಗಡಿ-ಮುಂಗಟ್ಟು, ಕಟ್ಟಡ ಭಗ್ನಾವಶೇಷಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕಟ್ಟಡ ಕಾರ್ಮಿಕರ ತಾತ್ಕಾಲಿಕ ಶೌಚಾಲಯಗಳು, ಶಿಥಿಲ ವಿದ್ಯುತ್ ಕಂಬಗಳು ಇತ್ಯಾದಿ ಎಲ್ಲ ವಿಧದ ಒತ್ತುವರಿ ತೆರವುಗೊಳಿಸಿ, ಅಸಮರ್ಪಕ ಸ್ಥಿತಿಯಲ್ಲಿದ್ದ ಸ್ಲ್ಯಾಬ್, ಚಪ್ಪಡಿ ಸರಿಪಡಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸುಮಾರು 6 ಪೆಟ್ಟಿಗೆ ಅಂಗಡಿಗಳು, ಶಿಥಿಲಗೊಂಡ ಸುಮಾರು 10 ವಿದ್ಯುತ್ ಕಂಬಗಳು, ಸುಮಾರು 10 ಟ್ರ್ಯಾಕ್ಟರ್ ನಷ್ಟು ಕಟ್ಟಡ ನಿರ್ಮಾಣ ಸಾಮಗ್ರಿ (ಎಂ ಸ್ಯಾಂಡ್ ಇತ್ಯಾದಿ), 1 ಅಂಗಡಿ, 2 ಅನಾಥ ವಾಹನಗಳು ಅಲ್ಲದೆ, ಫುಟ್ಪಾತ್ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಮುರಿದ ವಿದ್ಯುತ್ ಕಂಬಗಳನ್ನು ಬಳಸಿ ತಯಾರಿಸಿದ ತಾತ್ಕಾಲಿಕ ಆಸನ ವ್ಯವಸ್ಥೆ ಇತ್ಯಾದಿಗಳನ್ನು ಕ್ರೇನ್, ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ಅಲ್ಲದೆ, ಫುಟ್ಪಾತ್ ಮೇಲಿದ್ದ 20 ಕಿ.ವ್ಯಾ. ಸಾಮರ್ಥ್ಯ ಮೇಲ್ಪಟ್ಟ ಕೇಬಲ್ (1-1/2 ಇಂಚು ದಪ್ಪ) ಒಂದನ್ನು ತೆರವುಗೊಳಿಸಲು (ಗುಂಡಿ ಅಗೆದು ಸೂಕ್ತ ವ್ಯವಸ್ಥೆ ಮಾಡಲು) ಬೆಸ್ಕಾಂ ಸಿಬ್ಬಂದಿಗೆ ಸೂಚಿಸಲಾಯಿತು.
ಒತ್ತುವರಿ ತೆರವು ಅಂಕಿ- ಅಂಶ
ರಸ್ತೆ ಉದ್ದ- ಸುಮಾರು 300 ಮೀ, ಪೆಟ್ಟಿಗೆ ಅಂಗಡಿ – 6,
ಶಿಥಿಲ ವಿದ್ಯುತ್ ಕಂಬ- 10, ಕಟ್ಟಡ ನಿರ್ಮಾಣ ಸಾಮಗ್ರಿ- 10 ಟ್ರ್ಯಾಕ್ಟರ್, ಅಂಗಡಿ- 1 ಹಾಗೂ 2 ಅನಾಥ ವಾಹನ ಗಳನ್ನು ತೆರವುಗೊಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರರು ಶ್ರೀರಂಗರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಜೆಎಚ್ಐ, ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರು ಪಾಲ್ಗೊಂಡಿದ್ದರು.
