ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಪ್ರತಿಭಾವಂತ ಛಾಯಾಗ್ರಾಹಕ ತುಮಕೂರು ಜಿಲ್ಲೆ ಸೀಗೆಬಾಗಿಯ ವರದನಾಯಕ ಟಿ.ಪಿ.ಅವರ ಇತ್ತೀಚಿನ ಕಲಾಕೃತಿಗಳ ಏಕವ್ಯಕ್ತಿ ಕಲಾಪ್ರದರ್ಶನವನ್ನು ಜೂನ್ 27 ಹಾಗೂ 28 ರಂದು ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದೆ.
ಜೂನ್ 27 ರಂದು ಬೆಳಿಗ್ಗೆ 11.30 ಕ್ಕೆ ಏಕವ್ಯಕ್ತಿ ಕಲಾಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು, ದಂತ ಶಸ್ತ್ರಚಿಕಿತ್ಸಕ ಡಾ.ಆನಂದಕುಮಾರ್ ಪಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಕೃತಿಯ ರಮ್ಯ ಹಾಗೂ ರೋಚಕ ದೃಶ್ಯಗಳು, ಐತಿಹಾಸಿಕ ಸ್ಮಾರಕಗಳು,ವಿಶಿಷ್ಟ ಜನಪದೀಯ ಆಚರಣೆಗಳು, ಕ್ರೀಡೆಗಳು, ಗ್ರಾಮೀಣ ಪರಿಸರ ಮುಂತಾದ ಅಪರೂಪದ ಛಾಯಾಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಆಸಕ್ತರು ಜೂನ್ 27 ಹಾಗೂ 28 ರಂದು ಎರಡು ದಿನಗಳ ಅವಧಿಯಲ್ಲಿ ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
