ಸಮಗ್ರ ಸುದ್ದಿ

ಬನಶಂಕರಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಿನಾದ: ‘ಪರಮ್ ವಿಹಾರ’ ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ |ಸುಚಿತ್ರಾ ಸಿನೆಮಾ ಅಕಾಡೆಮಿಯಲ್ಲಿ ಸಾಂಸ್ಕೃತಿಕ ಸೌರಭ

Share

ಬೆಂಗಳೂರು: ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಬನಶಂಕರಿಯ ‘ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ’ಯಲ್ಲಿ ಮತ್ತೊಂದು ಆಕರ್ಷಕ ಕಲಾ ಸಂಜೆ ಅನಾವರಣಗೊಳ್ಳಲು ಸಿದ್ಧವಾಗಿದೆ. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗುತ್ತಿರುವ ‘ಪರಮ್ ವಿಹಾರ’ ಸಾಂಸ್ಕೃತಿಕ ಸರಣಿ ಕಾರ್ಯಕ್ರಮವು ಇದೇ ಜೂನ್ 28ರ ಭಾನುವಾರ ಸಂಜೆ 6 ಗಂಟೆಯಿಂದ ಜರುಗಲಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಅಪರೂಪದ ಗಾನ-ನೃತ್ಯ ಜುಗಲ್ಬಂದಿಗೆ ಬೆಂಗಳೂರಿನ ಕಲಾಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.

ಸುಶ್ರಾವ್ಯ ಕಂಠದಲ್ಲಿ ಮೂಡಲಿರುವ ಸುಗಮ ಸಂಗೀತ ಲಹರಿ

ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ನಿಕಿತಾ ಭಾರದ್ವಾಜ್ ಅವರ ಸುಗಮ ಸಂಗೀತ ಗಾಯನ ಪ್ರಸ್ತುತಿ ನಡೆಯಲಿದೆ. ಹಿತವಾದ ಸಾಹಿತ್ಯ ಮತ್ತು ಮಧುರ ನಾದದ ಮೂಲಕ ಶ್ರೋತೃಗಳನ್ನು ರಂಜಿಸಲಿರುವ ಈ ಕಛೇರಿಗೆ ತಬಲಾದಲ್ಲಿ ಪ್ರಮೋದ್ ಗಬ್ಬೂರ್ ಹಾಗೂ ಕೀಬೋರ್ಡ್‌ನಲ್ಲಿ ರಮೇಶ್ ಟಿ.ಎಸ್. ಸಾಥ್ ನೀಡಲಿದ್ದಾರೆ.

ನಯನಮನೋಹರ ಭರತನಾಟ್ಯ ವೈಭವ

ಗಾಯನದ ನಾದಲಹರಿಯ ನಂತರ ಶಾಸ್ತ್ರೀಯ ನೃತ್ಯದ ಅದ್ಭುತ ಪ್ರದರ್ಶನಗಳು ಸಭಿಕರನ್ನು ಕಣ್ಮನ ಸೆಳೆಯಲಿವೆ. ಮೊದಲಿಗೆ ‘ಸಂಗೀತ ನಾಟ್ಯ ಕಲಾಲಯ’ ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ಸಂಗೀತ ದೀಪಕ್ ಅವರ ಶಿಷ್ಯವೃಂದದಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ಮೂಡಿಬರಲಿದೆ. ಇದರ ಬೆನ್ನಲ್ಲೇ ‘ಈಷಾ ನಾಟ್ಯಶಾಲಾ’ ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ಮೋನಿಷಾ ಕಾಂತರಾಜು ಅವರ ಶಿಷ್ಯರಿಂದ ಭರತನಾಟ್ಯ ಶೈಲಿಯಲ್ಲಿ ಸಮೂಹ ನೃತ್ಯ ಪ್ರದರ್ಶನಗಳು ರಂಗದ ಮೇಲೆ ಅನಾವರಣಗೊಳ್ಳಲಿವೆ.

ಹೊಸ ತಲೆಮಾರಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಪರಮ್ ಫೌಂಡೇಶನ್‌ನ ಈ ಅಪರೂಪದ ಸಾಂಸ್ಕೃತಿಕ ಸಂಜೆಗೆ ಬೆಂಗಳೂರಿನ ಸಂಗೀತ ಮತ್ತು ನೃತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಹುರಿದುಂಬಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.


Share

You cannot copy content of this page