ಬೆಂಗಳೂರು: ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಶಸ್ವಿಯಾಗಿ ಸೈಕ್ಲಿಂಗ್ ನಡೆಸುವ ಮೂಲಕ ಅಪರೂಪದ ಸಾಧನೆಗೈದಿರುವ ಪ್ರಸಿದ್ಧ ಉದ್ಯಮಿ ಸತ್ವೀರ್ ರೊಟ್ಟಿ ಹಾಗೂ ಅವರ ಮಕ್ಕಳಾದ ವಿನಯ್ ರೊಟ್ಟಿ ಮತ್ತು ಸುಮಂತ್ ರೊಟ್ಟಿ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಅನುಚೇತ್ ಅವರು ಸನ್ಮಾನಿಸಿ, ಅಭಿನಂದಿಸಿದರು.
ದೇಶದ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೆ ಸೈಕಲ್ ಚಲಾಯಿಸುವ ಮೂಲಕ ದೈಹಿಕ ಸಾಮರ್ಥ್ಯ, ಮನೋಬಲ ಮತ್ತು ಶಿಸ್ತನ್ನು ಪ್ರದರ್ಶಿಸಿದ ರೊಟ್ಟಿ ಕುಟುಂಬದ ಸಾಹಸಯಾತ್ರೆಯನ್ನು ಆಯುಕ್ತರು ಮುಕ್ತಕಂಠದಿಂದ ಪ್ರಶಂಸಿಸಿದರು. ಈ ರೀತಿಯ ಸಾಹಸಿಕ ಪ್ರಯತ್ನಗಳು ಯುವಜನತೆಗೆ ದೈಹಿಕ ಫಿಟ್ನೆಸ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತಳೆಯಲು ದೊಡ್ಡ ಮಟ್ಟದ ಪ್ರೇರಣೆಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕರಾದ ಜಿತೇಂದ್ರ ಶೆಟ್ಟಿ ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಗಿರೀಶ್ ಎಲ್.ಪಿ. ಉಪಸ್ಥಿತರಿದ್ದರು.
