ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಒತ್ತುವರಿ ತೆರವು ಕಾರ್ಯಾಚರಣೆಯ ಪ್ರಮುಖ ವಿವರಗಳು ಹಾಗೂ ಸರ್ಕಾರದ ಮುಂದಿನ ನಡೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಸಭೆಯ ಪ್ರಮುಖ ಮುಖ್ಯಾಂಶಗಳು:
ಬಡವರ ಪರ ಸರ್ಕಾರ – ಸುಗಮ ಸಂಚಾರಕ್ಕೆ ಆದ್ಯತೆ:
ಸರ್ಕಾರ ಯಾವಾಗಲೂ ಬಡವರ ಪರವಾಗಿರುತ್ತದೆ. ಬೀದಿ ಬದಿ ವ್ಯಾಪಾರಿಗಳ ಜೀವನ ಸಾಗಬೇಕೆನ್ನುವುದು ನಮ್ಮ ಆಶಯವೂ ಆಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದನ್ವಯ ಸಾರ್ವಜನಿಕರ ಸುಗಮ ಓಡಾಟಕ್ಕಾಗಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗುತ್ತಿದ್ದು, ಇದರಲ್ಲಿ ಯಾವುದೇ ರಾಜಿ ಇಲ್ಲ.
ವಾರ್ಡ್ ರಸ್ತೆಗಳಲ್ಲಿ ವ್ಯಾಪಾರಕ್ಕೆ ಮುಕ್ತ ಅವಕಾಶ:
ನಗರದ ಪ್ರಮುಖ 1,500 ಕಿ.ಮೀ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಆದರೆ, ಉಳಿದ ಶೇ. 80 ರಿಂದ 90 ರಷ್ಟು ವಾರ್ಡ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡಿಕೊಳ್ಳಲು ಸಂಪೂರ್ಣ ಅವಕಾಶವಿದ್ದು, ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪೂರ್ಣ ಸಹಕಾರ ನೀಡಲಿದೆ.
430 ಕಿ.ಮೀ ಒತ್ತುವರಿ ತೆರವು ಪೂರ್ಣ:
ನಗರದಲ್ಲಿ ಇದುವರೆಗೆ ಸುಮಾರು 430 ಕಿ.ಮೀ ನಷ್ಟು ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದ್ದು, ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ.
ವ್ಯಾಪಾರಿಗಳಷ್ಟೇ ಅಲ್ಲ, ಎಲ್ಲಾ ಒತ್ತುವರಿಗಳಿಗೂ ಮುಕ್ತಿ:
ಪಾದಚಾರಿ ಮಾರ್ಗಗಳಲ್ಲಿ ಕೇವಲ ಬೀದಿ ಬದಿ ವ್ಯಾಪಾರಿಗಳನ್ನಷ್ಟೇ ಅಲ್ಲದೆ, ನಿಯಮ ಬಾಹಿರವಾಗಿ ನಿರ್ಮಿಸಲಾಗಿರುವ ಅಂಗಡಿಗಳು, ಪೆಟ್ಟಿ ಅಂಗಡಿಗಳು, ತಳ್ಳುವ ಗಾಡಿಗಳು, ಮೇಲ್ಚಾವಣಿ/ಕೆನೋಪಿಗಳು, ಅನಧಿಕೃತ ಮೆಟ್ಟಿಲುಗಳು, ರ್ಯಾಂಪ್ಗಳು, ತಡೆಗೋಡೆಗಳು, ಜಾಹೀರಾತು ಫಲಕಗಳು ಹಾಗೂ ತಾತ್ಕಾಲಿಕ/ಶಾಶ್ವತ ಶೆಡ್ಗಳನ್ನು ಸಹ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿರುವ ಪಾರ್ಕಿಂಗ್ ಹಾಗೂ ಗಾರ್ಡನ್ ಅಡೆತಡೆಗಳನ್ನೂ ಹಂತ-ಹಂತವಾಗಿ ತೆರವು ಮಾಡಲಾಗುವುದು.
ಹೊಸ ಗುರುತಿನ ಚೀಟಿ (ID Card) ವಿತರಣೆ:
ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಬೀದಿ ಬದಿ ವ್ಯಾಪಾರಿಗಳ ಕಾಯ್ದೆಯನ್ವಯ ಅರ್ಹ ವ್ಯಾಪಾರಿಗಳಿಗೆ ತ್ವರಿತವಾಗಿ ಹೊಸ ಗುರುತಿನ ಚೀಟಿಗಳನ್ನು (ID Cards) ವಿತರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಪ್ರಮುಖ ಸಭೆಯಲ್ಲಿ ಮಾಜಿ ರಾಜ್ಯಸಭಾ ಸಂಸದರಾದ ರಾಜೀವ್ ಗೌಡ, ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಕಾನೂನು ಕೋಶ ವಿಭಾಗದ ಮುಖ್ಯಸ್ಥರಾದ ಚಂದ್ರ ಶೇಖರ್ ಪಾಟೀಲ್, ಸಹಾಯಕ ಆಯುಕ್ತರಾದ ಮುರಳಿ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಮಾಲೋಚನೆ ನಡೆಸಿದರು.
