ಸಮಗ್ರ ಸುದ್ದಿ

ಸಾಂಸ್ಕೃತಿಕ ಸೊಗಡು ಹಾಗೂ ಇತಿಹಾಸ ಪ್ರಸಿದ್ದಿ ಬಿಟ್ಟುಕೊಡದ ನಾಡು: ಬಸವರಾಜ ಬೊಮ್ಮಾಯಿ

Share

​ಗದಗ: ಈ ನಾಡು ಎಷ್ಟೇ ಬೆಳೆದರೂ ತನ್ನ ಸಾಂಸ್ಕೃತಿಕ ಸೊಗಡನ್ನು ಮತ್ತು ಇತಿಹಾಸದ ಪ್ರಸಿದ್ಧಿಯನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.

ಇಂದು ಗದಗ ನಗರದಲ್ಲಿ ನಮ್ಮೂರ ದೇವಿ ಜಾತ್ರೆ, ದುರ್ಗಾದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.”ಶ್ರೀ ದುರ್ಗಾದೇವಿಯ ಆಶೀರ್ವಾದದೊಂದಿಗೆ ಈ ಒಂದು ಭವ್ಯ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರುಗುತ್ತಿದೆ. ದೇವಿಯ ಕೃಪಾ ಕಟಾಕ್ಷವು ಸದಾ ನಿಮ್ಮ ಮೇಲಿರಲಿ, ನಿಮ್ಮೆಲ್ಲರ ಬದುಕು ಬಂಗಾರವಾಗಲಿ ಹಾಗೂ ಹಸನಾಗಲಿ ಎಂದು ಹಾರೈಸಿದರು.

ದುರ್ಗಾದೇವಿ ಜಾತ್ರೆಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಇಡೀ ಊರಿನ ಜನತೆ, ಅದರಲ್ಲೂ ವಿಶೇಷವಾಗಿ ತಾಯಂದಿರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಬಾರಿ ಜಾತ್ರಾ ಮಹೋತ್ಸವವು ಅತ್ಯಂತ ವಿಶೇಷವಾಗಿ ಮೂಡಿಬಂದಿದ್ದು, ದೇವಸ್ಥಾನಕ್ಕೆ ಒಂದು ಭವ್ಯವಾದ ತೇರನ್ನು ಕಾಣಿಕೆಯಾಗಿ ನೀಡಲಾಗಿದೆ. ಈ ತೇರಿನ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದರು.

​ಗದಗ ತಾಲೂಕಿನ ಈ ಭಾಗವು ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಾಗೂ ಐತಿಹಾಸಿಕ ದೇವಸ್ಥಾನಗಳನ್ನು ಹೊಂದಿದೆ. ಈ ನಾಡು ಎಷ್ಟೇ ಬೆಳೆದರೂ ತನ್ನ ಸಾಂಸ್ಕೃತಿಕ ಸೊಗಡನ್ನು ಮತ್ತು ಇತಿಹಾಸದ ಪ್ರಸಿದ್ಧಿಯನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ದುರ್ಗಾದೇವಿ ಜಾತ್ರೆಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಪ್ರತಿ ವರ್ಷವೂ ಈ ಜಾತ್ರೆಯ ಸಂಭ್ರಮವು ಇಡೀ ಕರ್ನಾಟಕದಲ್ಲಿಯೇ ಒಂದು ವಿಶಿಷ್ಟ ಆಕರ್ಷಣೆಯಾಗಿದೆ ಎಂದು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅವರು ಶ್ಲಾಘಿಸಿದರು.

​ಇದೇ ಸಂದರ್ಭದಲ್ಲಿ, ದೇವಸ್ಥಾನದ ಅಭಿವೃದ್ಧಿ ಹಾಗೂ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಸ್ಥಳೀಯ ಮುಖಂಡರು, ಸಂಘಟಕರು ಮತ್ತು ದೇವಸ್ಥಾನದ ಸಮಿತಿಯ ಕಾರ್ಯವನ್ನು ಮೆಚ್ಚಿದ ಅವರು, ಮುಂಬರುವ ದಿನಗಳಲ್ಲೂ ದೇವಿಯ ಆಶೀರ್ವಾದದೊಂದಿಗೆ ಈ ಭಾಗದಲ್ಲಿ ಮತ್ತಷ್ಟು ಸತ್ಕಾರ್ಯಗಳು ನಡೆಯಲಿ ಎಂದು ಆಶಿಸಿದರು.


Share

You cannot copy content of this page