ಸಮಗ್ರ ಸುದ್ದಿ

ರಾಷ್ಟ್ರೀಯ ಲೋಕ್ ಅದಾಲತ್ : ಒಂದೇ ದಿನದಲ್ಲಿ 78.79 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ

Share

ಬೆಂಗಳೂರು : “ಸರ್ವರಿಗೂ ನ್ಯಾಯ” ಎಂಬ ಧ್ಯೇಯೋದ್ದೇಶದೊಂದಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜುಲೈ 11ರಂದು ಆಯೋಜಿಸಿದ್ದ 2026ನೇ ಸಾಲಿನ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ಐತಿಹಾಸಿಕ ಯಶಸ್ಸು ಕಂಡಿದ್ದು, ಒಂದೇ ದಿನ 78.79 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನು ಸಿವರಾಮನ್ ಹೇಳಿದರು.

ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮೊದಲನೇ ಮಹಡಿಯಲ್ಲಿರುವ ರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕರ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ತ್ವರಿತ ಹಾಗೂ ಸಕ್ಷಮ ನ್ಯಾಯ ಒದಗಿಸುವಲ್ಲಿ ಲೋಕ್ ಅದಾಲತ್‍ಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಜುಲೈ 11 ರಂದು ನಡೆದ ಅದಾಲತ್‍ನಲ್ಲಿ ರಾಜ್ಯಾದ್ಯಂತ ದಾಖಲೆ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ದಾಖಲೆಯ 977 ಪೀಠಗಳ ಸ್ಥಾಪನೆ:

ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್‍ಗಾಗಿ ರಾಜ್ಯಾದ್ಯಂತ ಒಟ್ಟು 977 ಪೀಠಗಳನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ ಬೆಂಗಳೂರು ಉಚ್ಚ ನ್ಯಾಯಾಲಯ ಪೀಠದಲ್ಲಿ 14, ಧಾರವಾಡ ಪೀಠದಲ್ಲಿ 4, ಕಲಬುರಗಿ ಪೀಠದಲ್ಲಿ 2 ಹಾಗೂ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಒಟ್ಟು 957 ಪೀಠಗಳನ್ನು ರಚಿಸಿ ಸಾರ್ವಜನಿಕರ ದೂರುಗಳ ಆಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.
 
ಲಕ್ಷಾಂತರ ಪ್ರಕರಣಗಳಿಗೆ ಮುಕ್ತಿ, ರೂ. 3,017 ಕೋಟಿ ಪರಿಹಾರ:

ಇಡೀ ರಾಜ್ಯಾದ್ಯಂತ ಒಟ್ಟು 78,79,558 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಇದರಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2,54,519 ಪ್ರಕರಣಗಳು ಸೇರಿದ್ದರೆ, 76,25,039 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಚ್ಚ ನ್ಯಾಯಾಲಯದ ಮೂರೂ ಪೀಠಗಳಿಂದಲೇ ಒಟ್ಟು 1,229 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಮಹಾ ಅದಾಲತ್ ಮೂಲಕ ಒಟ್ಟು ರೂ. 3,017 ಕೋಟಿಗಳಿಗೂ ಅಧಿಕ ಪರಿಹಾರದ ಮೊತ್ತವನ್ನು ಸಾರ್ವಜನಿಕರಿಗೆ ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.

ಸಂಚಾರಿ ಚಲನ್ ಬಾಕಿ ವಿಲೇವಾರಿಗೆ ಸಿಕ್ಕಿತು ಶೇ.50% ರಿಯಾಯಿತಿ:

1991 ರಿಂದ 2022 ರವರೆಗೆ ಸಾರಿಗೆ ಇಲಾಖೆಯಲ್ಲಿ ಬಾಕಿ ಇದ್ದ ಟ್ರಾಫಿಕ್ ಚಲನ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಶೇಕಡ 50% ವಿಶೇಷ ರಿಯಾಯಿತಿಯನ್ನು ನೀಡಿತ್ತು. ಜೂನ್ 21 ರಿಂದ ಜುಲೈ 10 ರವರೆಗಿನ 20 ದಿನಗಳ ಈ ರಿಯಾಯಿತಿ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 19,13,659 ಸಂಚಾರಿ ಚಲನ್ ಸಣ್ಣ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ಇತ್ಯರ್ಥಪಡಿಸಲಾಗಿದ್ದು, ರೂ. 55 ಕೋಟಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿದೆ ಎಂದರು.

ಲೋಕ್ ಅದಾಲತ್‍ನ ಪ್ರಮುಖ ವಿಶೇಷತೆಗಳು:

ಹಳೆಯ ಪ್ರಕರಣಗಳ ವಿಲೇವಾರಿ: 5 ವರ್ಷಕ್ಕಿಂತ ಹಳೆಯದಾದ 1,544 ಪ್ರಕರಣಗಳು, 10 ವರ್ಷ ಮೀರಿದ 330 ಪ್ರಕರಣಗಳು ಹಾಗೂ 15 ವರ್ಷಗಳಿಗೂ ಹಳೆಯದಾದ 24 ಪ್ರಕರಣಗಳು ಸೇರಿದಂತೆ ಒಟ್ಟು 1,899 ದಶಕಗಳಷ್ಟು ಹಳೆಯ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಹಾಡಲಾಗಿದೆ.

ಹಿರಿಯ ನಾಗರಿಕರಿಗೆ ಆಸರೆ: ಒಟ್ಟು 1,948 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮಗೆ ಬೇಕಾದ ಪರಿಹಾರವನ್ನು ಪಡೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಿದರು.

ಒಂದಾದ ದಂಪತಿಗಳು:

ಕೌಟುಂಬಿಕ ಕಲಹ, ವೈವಾಹಿಕ ಮುನಿಸಿನಿಂದ ದೂರಾಗಿದ್ದ ಸುಮಾರು 315 ದಂಪತಿಗಳು ಲೋಕ್ ಅದಾಲತ್‍ನ ರಾಜಿ ಸಂಧಾನದ ಮೂಲಕ ಮನಸ್ತಾಪ ಮರೆತು ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ.

ಬೃಹತ್ ಮೊತ್ತದ ಪರಿಹಾರ: ಧಾರವಾಡ ಜಿಲ್ಲೆಯ ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣವೊಂದರಲ್ಲಿ ರೂ. 2,45,00,000/- (ಎರಡು ಕೋಟಿ ನಲವತ್ತೈದು ಲಕ್ಷ) ಗಳ ಬೃಹತ್ ಪರಿಹಾರವನ್ನು ಕೊಡಿಸಲಾಗಿದೆ. ಹಾಗೆಯೇ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ಸಾಲದ ವಿವಾದವೊಂದನ್ನು ಒನ್-ಟೈಮ್ ಸೆಟಲ್ಮೆಂಟ್ ಅಡಿಯಲ್ಲಿ ಕೇವಲ ರೂ. 15,000/- ಕ್ಕೆ ಸೌಹಾರ್ದಯುತವಾಗಿ ಮುಗಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಪ್ರಾಧಿಕಾರದ ಪ್ರಧಾನ ಪೋಷಕರಾದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಆರ್. ದೇವದಾಸ್ ರವರು ಈ ಮಹತ್ತರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಯಶಸ್ಸಿಗೆ ಸಹಕರಿಸಿದ ನ್ಯಾಯಾಂಗ ಅಧಿಕಾರಿಗಳು, ವಕೀಲರು, ಬ್ಯಾಂಕ್, ವಿಮೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
 
ಮುಂಬರುವ ವಿಶೇಷ ಲೋಕ ಅದಾಲತ್‍ಗಳ ಮಾಹಿತಿ:

ಸಾರ್ವಜನಿಕರ ಹೆಚ್ಚಿನ ಅನುಕೂಲಕ್ಕಾಗಿ ಕಾನೂನು ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ವಿಶೇಷ ಅದಾಲತ್‍ಗಳನ್ನು ಆಯೋಜಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳವಂತೆ ತಿಳಿಸಿದರು.

ಚೆಕ್ ಬೌನ್ಸ್ (NI Act) ಪ್ರಕರಣಗಳ ವಿಶೇಷ ಲೋಕ ಅದಾಲತ್:

ದಿನಾಂಕ 18.07.2026 ರಂದು ನಡೆಯಲಿದ್ದು, ಇದಕ್ಕಾಗಿ ಈಗಾಗಲೇ 64,191 ಪ್ರಕರಣಗಳನ್ನು ಗುರುತಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ “ಸಮಾಧಾನ ಸಮಾರೋಹ” ವಿಶೇಷ ಲೋಕ ಅದಾಲತ್: ದಿನಾಂಕ 21 ಆಗಸ್ಟ್ 2026 ರಿಂದ 23 ಆಗಸ್ಟ್ 2026 ರವರೆಗೆ ನಡೆಯಲಿದೆ.

ಮೂರನೇ ರಾಷ್ಟ್ರೀಯ ಲೋಕ್ ಅದಾಲತ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2026ರ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜನೆಯಾಗಲಿದೆ ಎಂದು ತಿಳಿಸಿದರು.


Share

You cannot copy content of this page