ಸಮಗ್ರ ಸುದ್ದಿ

ಡಾ. ವಿದ್ಯಾಭೂಷಣ್ ನೇತೃತ್ವದ ‘ಭಜ ಮನ’ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ! ವಿದ್ಯಾಭೂಷಣ್ – ಮೇಧಾ ಅವರಿಂದ ಹೊಸ ತಲೆಮಾರಿಗೆ ದಾಸ ಸಾಹಿತ್ಯದ ಮಾರ್ಗದರ್ಶನ

Share

ಬೆಂಗಳೂರು: ‘ಪರಮ್ ಕಲ್ಚರ್’ ಸಂಸ್ಥೆಯು ‘ಹರಿವಂಶ ಗ್ರೂಪ್’ ಮತ್ತು ಜಯನಗರದ ‘ಯುವಕ ಸಂಘ’ದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಭಜ ಮನ’ ಎಂಬ ಎರಡು ದಿನಗಳ ವಿಶೇಷ ಪೂರ್ವ-ಕಛೇರಿ ಗಾಯನ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಜಯನಗರದ ಯುವಕ ಸಂಘದಲ್ಲಿ ಆಗಸ್ಟ್ 6 ಮತ್ತು 7 ರಂದು ಸಂಜೆ 6 ರಿಂದ 8 ಗಂಟೆಯವರೆಗೆ ನಡೆದ ಈ ಸಾಂಸ್ಕೃತಿಕ ತರಬೇತಿಯ ನೇತೃತ್ವವನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಿದ್ವಾಂಸ, ಹರಿದಾಸ ಸಾಹಿತ್ಯದ ಖ್ಯಾತನಾಮರಾದ ಡಾ. ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ್ ಅವರು ವಹಿಸಿ, ಭಾಗವಹಿಸಿದ ನೂರಾರು ಸಂಗೀತಾಸಕ್ತರಿಗೆ ಮಾರ್ಗದರ್ಶನ ನೀಡಿದರು. ಅಲ್ಲದೆ, ಆಗಸ್ಟ್ 8ರ ಶನಿವಾರ ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ಡಾ.ವಿದ್ಯಾಭೂಷಣ್‌ ಅವರೊಂದಿಗೆ ಶಿಬಿರಾರ್ಥಿಗಳು ವೇದಿಕೆ ಹಂಚಿಕೊಂಡು ಹಾಡಿದ್ದಾರೆ.

ದಾಸರ ಪದ ಕಲಿತ ಸಂಗೀತ ಪ್ರೇಮಿಗಳು:

ಈ ವಿಶೇಷ ಶಿರೋಮಣಿಯಲ್ಲಿ ಪಾಲ್ಗೊಂಡಿದ್ದ ಸಂಗೀತ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳಿಗೆ ನೇರವಾಗಿ ಡಾ. ವಿದ್ಯಾಭೂಷಣ್ ಅವರ ಗಾಯನ ಶೈಲಿಯಲ್ಲಿ ದಾಸರಪದಗಳು ಮತ್ತು ಭಜನೆಗಳನ್ನು ಕಲಿಯುವ ಸುವರ್ಣಾವಕಾಶ ದೊರೆಯಿತು. ಇದರೊಂದಿಗೆ ವಿದ್ವಾಂಸರ ನಾಲ್ಕು ದಶಕಗಳ ಸುದೀರ್ಘ ಸಂಗೀತ ಪಯಣ, ಭಕ್ತಿಪೂರ್ವಕ ಗಾಯನದ ತಂತ್ರಗಳು ಹಾಗೂ ಅವರ ಗಾಯನ ಪಟ್ಟುಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ವೇದಿಕೆ ಸಾಕ್ಷಿಯಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ಅಭ್ಯಾಸಿಗಳಿಗೆ ವಿಶೇಷ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿತ್ತು.

ವೇದಿಕೆ ಹಂಚಿಕೊಳ್ಳುವ ಅವಕಾಶ:

ಎರಡು ದಿನಗಳ ಕಾಲ ನಡೆದ ಈ ತರಬೇತಿ ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಭ್ಯಾಸಿಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಪ್ರವರ್ಧಮಾನ ಗಾಯಕರು ಶನಿವಾರ ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ಸಂಜೆ ನಡೆದ ಬೃಹತ್ ಸಂಗೀತ ಕಛೇರಿಯಲ್ಲಿ ಸ್ವತಃ ಡಾ. ವಿದ್ಯಾಭೂಷಣ್ ಅವರೊಂದಿಗೇ ವೇದಿಕೆ ಹಂಚಿಕೊಂಡು ಹಾಡುವ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಜಗತ್ತಿನಾದ್ಯಂತ ದಾಸರ ಪದಗಳನ್ನು ಪಸರಿಸಿ, ‘ಸಂಗೀತ ವಿದ್ಯಾ ನಿಧಿ’ ಹಾಗೂ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿರುವ ಡಾ. ವಿದ್ಯಾಭೂಷಣ್ ಅವರು, ‘ಭಜ ಮನ’ ಕಾರ್ಯಾಗಾರಗಳ ಮೂಲಕ ಹೊಸ ತಲೆಮಾರಿನ ಗಾಯಕರಿಗೆ ಭಕ್ತಿಪೂರ್ವಕ ಗಾಯನದ ಪರಂಪರೆಯನ್ನು ಯಶಸ್ವಿಯಾಗಿ ಧಾರೆ ಎರೆದಿದ್ದಾರೆ.


Share

You cannot copy content of this page