ಸಮಗ್ರ ಸುದ್ದಿ

ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್

Share

ಬೆಂಗಳೂರು:ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿ ಹಾಗೂ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರ ನಿಮ್ಮ ಜೊತೆಗೆ ನಿಲ್ಲಲಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.

ಮರ್ಕಝಿ ಮಿಲಾದ್ ಒ ಸೀರತ್ ಕಮಿಟಿ ಸುನ್ನಿ ಜಮಾಯತ್ ಆಲ್ ಕರ್ನಾಟಕ ವತಿಯಿಂದ ಬೆಂಗಳೂರಿನ ವೈಎಂಸಿಎ ಮೈದಾನದಲ್ಲಿ ಬುಧವಾರ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಯಾವ ಜಾತಿ, ಧರ್ಮದಲ್ಲಿ ಹುಟ್ಟುತ್ತೇವೆ ಎಂದು ಅರ್ಜಿ ಹಾಕುವುದಿಲ್ಲ. ಯಾವುದೇ ಧರ್ಮ ಬೇರೆಯವರಿಗೆ ತೊಂದರೆ ಮಾಡು ಎಂದು ಹೇಳುವುದಿಲ್ಲ. ಶಾಂತಿ ನೆಲೆಸಿ, ದೇಶದಲ್ಲಿ ಐಕ್ಯತೆ, ಸಮಗ್ರತೆ ಇರಬೇಕು ಎಂದು ಎಲ್ಲಾ ಧರ್ಮಗುರುಗಳು ಸಾರಿದ್ದಾರೆ” ಎಂದು ತಿಳಿಸಿದರು.

“ಪ್ರವಾದಿ ಮಹಮ್ಮದ್ ಅವರ ಜನ್ಮದಿನದಂದು ಅವರ ಸಂದೇಶ ಸ್ಮರಿಸುತ್ತಿದ್ದೇವೆ. ನಾನು ದೆಹಲಿ ಪ್ರವಾಸ ಕೈಗೊಳ್ಳಬೇಕಿತ್ತು. ನಿಮ್ಮ ಮೇಲಿನ ಅಭಿಮಾನ ಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನೀವು ಶಾಂತಿ ಕಾಪಾಡುವ ಜನ. ನಿಮಗೆ ಶುಭಕೋರಲು ಬಂದಿದ್ದೇನೆ” ಎಂದರು.

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲರನ್ನು ಸಮಾಣತೆಯಿಂದ ನೋಡುತ್ತಿದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ. ಸಾಮಾಜಿಕ ನ್ಯಾಯ ಹಾಗೂ ಶಾಂತಿ ಕಾಪಾಡಲು ಬದ್ಧವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಣ ಮೀಸಲಿಟ್ಟು ಕಾರ್ಯಕ್ರಮ ರೂಪಿಸಲಾಗಿದೆ. ನಿಮ್ಮ ಸಹಕಾರದಲ್ಲಿ ಬಲಿಷ್ಠ ಸರ್ಕಾರ ಬಂದಿದೆ. ನಮ್ಮ ಸರ್ಕಾರ ಕೂಡ ಮೊದಲ ಬಾರಿಗೆ ಈ ಸಮುದಾಯಕ್ಕೆ ಪರಿಷತ್ ಸಭಾಪತಿ ಸ್ಥಾನ, 3 ಸಚಿವ ಹಾಗೂ ಹತ್ತಾರು ನಿಗಮ ಅಧ್ಯಕ್ಷ ಸ್ಥಾನ ನೀಡಿದೆ” ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಯು ಟಿ ಖಾದರ್, ಎಸ್ ಎಸ್ ಮಲ್ಲಿಕಾರ್ಜುನ್, ರಿಜ್ವಾನ್ ಅರ್ಷದ್, ಬಿಡಿಎ ಅಧ್ಯಕ್ಷರಾದ ಎನ್ ಎ ಹ್ಯಾರಿಸ್, ಸಿಎಂ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page