ಸಮಗ್ರ ಸುದ್ದಿ

ಪಿಎಂ ಸೇತು ಯೋಜನೆಯಲ್ಲಿ ಉದ್ಯಮಗಳ ಸಹಭಾಗಿತ್ವ ಮುಖ್ಯ: ಎಂ ಬಿ ಪಾಟೀಲ | ಬೆಂಗಳೂರು ನಗರ, ಕಲಬುರಗಿ ಹಬ್ ನ ತಲಾ 4 ಐಟಿಐ ಆಯ್ಕೆ

Share

ಬೆಂಗಳೂರು: ರಾಜ್ಯದ 48 ಐಟಿಐ ಸಂಸ್ಥೆಗಳನ್ನು ಉನ್ನತೀಕರಿಸುವ ಗುರಿ ಹೊಂದಿರುವ ‘ಪಿಎಂ ಸೇತು’ ಯೋಜನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಜತೆ ಸಹಯೋಗದ ಮೂಲಕ ಕೈಗಾರಿಕೆಗಳು ತಮಗೆ ಬೇಕಾದ ಮಾನವ ಸಂಪನ್ಮೂಲವನ್ನು ಸೃಷ್ಟಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಪಿಎಂ ಸೇತು ಯೋಜನೆಯ ಪರಿಣಾಮಕಾರಿ ಅನುಷ್ಢಾನಕ್ಕೆ ಅಗತ್ಯವಿರುವ ಕೈಗಾರಿಕಾ ಸಹಭಾಗಿತ್ವ ಕುರಿತು ಚರ್ಚಿಸಲು ಅವರು ಶುಕ್ರವಾರ ಇಲ್ಲಿನ ಕರ್ನಾಟಕ ಉದ್ಯೋಗ ಮಿತ್ರದ ಸಭಾಂಗಣದಲ್ಲಿ ಗಣ್ಯ ಉದ್ಯಮಿಗಳ ಜತೆ ಸಭೆ ನಡೆಸಿದರು. ಜತೆಯಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಇದ್ದರು.

ಸಭೆಯ ಬಗ್ಗೆ ಮಾತನಾಡಿದ ಪಾಟೀಲ ಅವರು, ಪಿಎಂ ಸೇತು ಯೋಜನೆಯು ಹಬ್ & ಸ್ಪೋಕ್ ಸ್ವರೂಪ ಹೊಂದಿದೆ. ಇದರಲ್ಲಿ ಒಂದು ಹಬ್ ಅಡಿಯಲ್ಲಿ 4 ಐಟಿಐ ಬರುತ್ತವೆ. ಇದರಲ್ಲಿ ರಾಜ್ಯದಲ್ಲಿ 12 ಹಬ್ ಇದ್ದು, 48 ಐಟಿಐ ಇವೆ. ಈಗ ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಒಂದೊಂದು ಹಬ್ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಆಯಾ ಭಾಗಗಳ ಉದ್ಯಮಿಗಳು ಸಕ್ರಿಯವಾಗಿ ತೊಡಗಿಸಿ‌ಕೊಳ್ಳಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಯೋಜನೆಯ ಅನುಷ್ಠಾನಕ್ಕೆ ವಿಶೇಷ ಘಟಕ ಯೋಜನೆ (ಎಸ್.ಪಿ.ವಿ) ಇರಲಿದ್ದು, ಇದರಲ್ಲಿ ತಲಾ 6 ಮಂದಿ ಉದ್ಯಮಿಗಳೇ ಇರಲಿದ್ದಾರೆ. ಕಂಪನಿಗಳ ಸಿಎಸ್ಆರ್ ವಿಭಾಗ, ಪ್ರತಿಷ್ಠಾನ ಇತ್ಯಾದಿಗಳು ಪಿಎಂ ಸೇತು ಯೋಜನೆಯ ಭಾಗವಾಗಲು ಅವಕಾಶವಿದೆ. ವರ್ಷಕ್ಕೆ ಕನಿಷ್ಠ 500 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಮತ್ತು 1,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಇದರಲ್ಲಿ ಭಾಗವಹಿಸ ಬಹುದು ಎಂದು ಅವರು ಹೇಳಿದ್ದಾರೆ.

ಈ ಸಹಯೋಗದ ಮೂಲಕ ಕಂಪನಿಗಳು ತಮಗೆ ಅಗತ್ಯವಿರುವ ಪಠ್ಯಕ್ರಮ, ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಯ ಸ್ವರೂಪವನ್ನು ರೂಪಿಸುವ ಅವಕಾಶ ಪಡೆಯಲಿವೆ ಎಂದು ಅವರು ನುಡಿದಿದ್ದಾರೆ

ಬೆಂಗಳೂರು ನಗರದಲ್ಲಿ ಪೀಣ್ಯ ಐಟಿಐ ಹಬ್ ಸಂಸ್ಥೆಯಾಗಿದ್ದು, ಇದರ ವ್ಯಾಪ್ತಿಯಲ್ಲಿ ತುಮಕೂರು ರಸ್ತೆ, ದೊಮ್ಮಲೂರು, ಹೊಸೂರು ರಸ್ತೆ ಮತ್ತು ದೇವನಹಳ್ಳಿ ಐಟಿಐಗಳು ಸ್ಪೋಕ್ ಸಂಸ್ಥೆಗಳಾಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕಲಬುರಗಿ ಬಾಲಕರ ಐಟಿಐ ಹಬ್ ಆಗಿದ್ದು, ಇಲ್ಲಿ ಸೇಡಂ, ಅಫಜಲಪುರ, ಜೇವರ್ಗಿ ಮತ್ತು ಕಲಬುರಗಿ ಮಹಿಳಾ ಐಟಿಐ ಸ್ಪೈಕ್ ಸಂಸ್ಥೆಗಳಾಗಿವೆ ಎಂದು ಅವರು ವಿವರಿಸಿದ್ದಾರೆ.

ಈ ಯೋಜನೆಗೆ ಕೇಂದ್ರ ಸರಕಾರ 112 ಕೋಟಿ, ರಾಜ್ಯ ಸರಕಾರ 98 ಕೋಟಿ ಮತ್ತು ಕೈಗಾರಿಕಾ ವಲಯವು 31 ಕೋಟಿ ರೂಪಾಯಿ ವಿನಿಯೋಗಿಸುತ್ತಿವೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶರಣ ಪ್ರಕಾಶ ಪಾಟೀಲ ಅವರು, ರಾಜ್ಯದಲ್ಲಿ 270 ಸರ್ಕಾರಿ ಐಟಿಐಗಳು ಇವೆ. ಉದ್ಯಮಿಗಳು ಈ ಐಟಿಐಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದರೆ ಅದಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಬೋಯಿಂಗ್, ಬಯೋಕಾನ್, ಜಿಂದಾಲ್, ಟೊಯೋಟಾ, ಲೆನ್ಸ್ ಕಾರ್ಟ್, ಆಟೊ ಲೈವ್, ಸೆಂಟಮ್, ಎನ್ ಟಿಟಿಎಫ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅ.ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸುಬೋದ್ ಯಾದವ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯೆಲ್, ಕೈಗಾರಿಕಾ ತರಬೇತಿ ಇಲಾಖೆಯ ಆಯುಕ್ತೆ ಶಿಲ್ಪಾ ಉಪಸ್ಥಿತರಿದ್ದರು.


Share

You cannot copy content of this page