ಸಮಗ್ರ ಸುದ್ದಿ

ಬರ ಕುರಿತ ಉಪ ಸಮಿತಿಯಲ್ಲಿ ಕೇಂದ್ರಕ್ಕೆ ಪತ್ರ ಬರೆಯಲು ಈಶ್ಖರ್ ಖಂಡ್ರೆ ಸಲಹೆ | ಬರ ನಿರ್ವಹಣೆ ಕೈಪಿಡಿಯ ನಿಯಮಾವಳಿಯೇ ಅಸಮರ್ಪಕ

Share

ಬೆಂಗಳೂರು: ಬರ ಪೀಡಿತ ಪ್ರದೇಶ ಘೋಷಣೆಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಬರ ನಿರ್ವಹಣೆ ಕೈಪಿಡಿಯ ನಿಯಮಾವಳಿಗಳೇ ಅಸಮರ್ಪಕವಾಗಿದ್ದು, ಇದನ್ನು ಬದಲಾಯಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರ ನೈಸರ್ಗಿಕ ವಿಕೋಪ ಪರಿಸ್ಥಿತಿಗಳ ಪರಾಮರ್ಶೆ ಮತ್ತು ಸಮರ್ಥವಾಗಿ ನಿಭಾಯಿಲು ನೀತಿ ನಿರೂಪಣೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸುವ ಕುರಿತಂತೆ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಅವರು ಈ ಸಲಹೆ ನೀಡಿದರು.

ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದ್ದಾಗ್ಯೂ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಅಂಶವಾರು ಬದಲಾವಣೆಗೆ ಪತ್ರಬರೆದು ಒತ್ತಾಯಿಸಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿಯ ನಿಯಮಾವಳಿಗಳ ಪ್ರಕಾರ, ರಾಜ್ಯದ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ಕೇವಲ ಮಳೆ ಕೊರತೆಯಷ್ಟೇ ಅಲ್ಲದೆ ಉಪಗ್ರಹ ಆಧಾರಿತ ಸೂಚ್ಯಂಕಗಳನ್ನು ಕಡ್ಡಾಯವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಪ ಮಳೆಯಾಗಿ ಬೆಳೆ ಕಾಳುಕಚ್ಚದಿದ್ದರೂ ಬಿತ್ತನೆ ಆಧಾರದಲ್ಲಿ ನಿರಾಕರಿಸಲಾಗುತ್ತದೆ ಇದು ಸರಿಯಲ್ಲ ಎಂದರು.
ಕರ್ನಾಟಕದಲ್ಲಿ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು ಮತ್ತು ಅಧಿಕೃತವಾಗಿ ಬರ ಘೋಷಣೆ ಮಾಡಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ.) ಮತ್ತು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶ (ಡಿಸಾಸ್ಟರ್ ಮ್ಯಾನೇಜ್ಮೆಂಟ್ ಸೆಲ್) ವರದಿ ನೀಡಬೇಕಾಗುತ್ತದೆ.

ವಾಡಿಕೆಗಿಂತ ಶೇ.60ರಷ್ಟು ಮಳೆ ಕಡಿಮೆ ಆಗಿದ್ದರೆ, ವಾಡಿಕೆಗಿಂತ ಶೇ.50ಕ್ಕಿಂತ ಹೆಚ್ಚು ಬಿತ್ತನೆ ಮಾಡದಿದ್ದರೆ ಮತ್ತು ಸತತ 3 ವಾರಗಳ ಕಾಲ ಶುಷ್ಕ ವಾತಾವರಣ ಅಂದರೆ 3 ವಾರ ಮಳೆ ಆಗದೆ ಭೂಮಿಯಲ್ಲಿ ತೇವಾಂಶ ಇಲ್ಲದಿದ್ದರೆ ಮಾತ್ರ ಬರಪೀಡಿತ ತಾಲೂಕು ಎಂದು ಗ್ರೌಂಡ್ ಟ್ರೂಥಿಂಗ್ ಮಾಡಿ ನಿರ್ಣಯಿಸಲಾಗುತ್ತದೆ. ಅಲ್ಪ ತುಂತುರು ಮಳೆಯಾಗಿ ತೇವಾಂಶವಿದ್ದರೂ ಈ ಕೈಪಿಡಿ ನಿಯಮಾವಳಿಗಳೇ ಮಾರಕವಾಗುತ್ತವೆ ಎಂದರು.

ಉಪ ಸಮಿತಿ ಸಭೆಯಲ್ಲಿ ಸಚಿವರುಗಳಾದ ಲಕ್ಷ್ಮಣ ಸವದಿ, ಪುಟ್ಟರಂಗಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page