ಬೆಂಗಳೂರು: ದೆಹಲಿಯಲ್ಲಿ ನಡೆದ ಎರಡು ದಿನಗಳ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ ಉನ್ನತ ಮಟ್ಟದ ನಿಯೋಗದೊಂದಿಗೆ ಪಾಲ್ಗೊಂಡಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಶುಕ್ರವಾರದಂದು ನೆದರ್ಲೆಂಡ್ಸ್ ಮೂಲದ ಎಎಸ್ಎಂಎಲ್ ಸೆಮಿಕಂಡಕ್ಟರ್ಸ್ ಮತ್ತು ನೆಕ್ಸ್ಪೀರಿಯಾ, ಅಮೆರಿಕದ 3ಡಿ ಗ್ಲಾಸ್ ಸೊಲ್ಯೂಷನ್ಸ್, ಎಟಿ&ಎಸ್, ಜಪಾನಿನ ಫ್ಯೂಜಿ ಫಿಲಂ ಮತ್ತು ಲ್ಯಾಮ್ ರೀಸರ್ಚ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ರಾಜ್ಯದಲ್ಲಿ ಹೂಡಿಕೆ ಮತ್ತು ತಯಾರಿಕಾ ಸ್ಥಾವರ ಆರಂಭಿಸುವಂತೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಉಳಿದಂತೆ ಅಪ್ಲೈಡ್ ಮೆಟೀರಿಯಲ್ಸ್, ಎಸ್ಎಫ್ಎಎಲ್, ಗೋದಾವರಿ ಕಮಾಡಿಟೀಸ್, ಟೋಕಿಯೋ ಎಲೆಕ್ಟ್ರಾನ್, ಸಿರ್ಮಾ ಎಸ್.ಜಿ.ಎಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಲ್ಯಾಮ್ ರೀಸರ್ಚ್ ಕಂಪನಿಯು ರಾಜ್ಯದಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಗೆ 10 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಸೆಮೆಕಂಡಕ್ಟರ್ ಕ್ಷೇತ್ರದ ಈ ಯೋಜನೆಯನ್ನು ಆದಷ್ಟು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಅಗತ್ಯವಿರುವ ಕ್ರಮಗಳೇನೇನು ಎನ್ನುವುದನ್ನು ಚರ್ಚಿಸಲಾಗಿದೆ. ಜತೆಗೆ ಅಪ್ಲೈಡ್ ಮೆಟೀರಿಯಲ್ಸ್ ಕಂಪನಿ ಮಾಡುತ್ತಿರುವ ಹೂಡಿಕೆಯಿಂದ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕೆ ಎರಡೂ ಸಾಕಾರಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಎಟಿ&ಎಸ್ ಕಂಪನಿ ಕಳೆದ 25 ವರ್ಷಗಳಿಂದಲೂ ನಂಜನಗೂಡಿನಲ್ಲಿ ಅತ್ಯುತ್ತಮ ಗುಣಮಟ್ಟದ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ತಯಾರಿಸುತ್ತಿದೆ. ಇಲ್ಲಿನ ಸ್ಥಾವರವನ್ನು ವಿಸ್ತರಿಸುವಂತೆ ಮತ್ತು ಹೆಚ್ಚಿನ ಹೂಡಿಕೆ ಮಾಡುವಂತೆ ಹೇಳಲಾಗಿದೆ. ಸೆಮಿಕಂಡಕ್ಟರ್, ವಿದ್ಯುನ್ಮಾನ, ಆರೋಗ್ಯ ಸೇವೆ, ಇಮೇಜಿಂಗ್ ವಲಯಗಳಲ್ಲಿ ಹೆಸರಾಗಿರುವ ಫ್ಯೂಜಿ ಫಿಲಂ ಕಂಪನಿಗೂ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸುವಂತೆ ಮತ್ತು ಬೆಂಗಳೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ನಿರ್ಮಿಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಅವರು ನುಡಿದಿದ್ದಾರೆ.
ವಿದ್ಯುನ್ಮಾನ ವಿನ್ಯಾಸ ಮತ್ತು ಪಿಸಿಬಿ ಜೋಡಣೆಗೆ ಹೆಸರಾಗಿರುವ ಸಿರ್ಮಾ ಎಸ್.ಜಿ.ಎಸ್ ಕಂಪನಿ ಇತ್ತೀಚೆಗಷ್ಟೇ ಬೊಮ್ಮಸಂದ್ರದಲ್ಲಿ ತನ್ನ ತಯಾರಿಕಾ ಘಟಕದ ಕಾರ್ಯಾರಂಭ ಮಾಡಿದೆ. ಇದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಕೋರಿದ್ದೇವೆ. ಇದೇ ರೀತಿಯಲ್ಲಿ ಉಳಿದ ಕಂಪನಿಗಳಿಗೂ ಕರ್ನಾಟಕದಲ್ಲಿ ತಯಾರಿಕಾ ಸ್ಥಾವರಗಳನ್ನು ಅಭಿವೃದ್ಧಿ ಪಡಿಸುವಂತೆ ಗನ ಸೆಳೆಯಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.
ಮಾತುಕತೆಯಲ್ಲಿ ಎಎಸ್ಎಂಲ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳಾದ ಜೂಸ್ಟ್ ಸ್ಟೀನೆನ್ ಮತ್ತು ಹರ್ಮನ್ ಬೂಮ್, ನೆಕ್ಸ್ಪೀರಿಯಾದ ಹಿರಿಯ ನಿರ್ದೇಶಕ ಹ್ಯಾನ್ಸ್ ವ್ಯಾನ್ ರೇಮ್ಡಂಕ್ ಮತ್ತು ಅಕಿಂ ಕೆಂಪ್, 3ಡಿ ಗ್ಲಾಸ್ ನ ಸಿಇಒ ಬಾಬು ಮಾಂಡವ ಮತ್ತು ನಿರ್ದೇಶಕ ಕೆ.ಕೃಷ್ಣಮೂರ್ತಿ, ಎಟಿ&ಎಸ್ ಕಂಪನಿಯ ಸೈಮನ್ ಸೆಬಾನ್ಜ್ ಮತ್ತು ಆರ್ ಎಸ್ ಸಿಂಹ, ಲ್ಯಾಮ್ ರೀಸರ್ಚ್ ಪರವಾಗಿ ಸಿಒಒ ಶೇಷ ವರದರಾಜನ್ ಮತ್ತು ರಂಗೇಶ್ ರಾಘವನ್, ಫ್ಯೂಜಿ ಫಿಲಂ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಕೋಜಿ ವಾಡ ಮತ್ತು ಅಭಿಶೇಖರ್ ಸಿಂಗ್ ಮಾತುಕತೆಯಲ್ಲಿ ಭಾಗವಹಿಸಿದ್ದರು.
ಸಚಿವರ ಜತೆಗಿನ ನಿಯೋಗದಲ್ಲಿ ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯೆಲ್ ಇದ್ದರು.
