ಬೆಳಗಾವಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ನೆಲೆಸಿರುವ 1382 ಕುಟುಂಬಗಳ ಪೈಕಿ 670 ಕುಟುಂಬಗಳು ಸ್ವಯಂ ಇಚ್ಛೆಯಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿದ್ದು, ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ.
ಆರಗ ಜ್ಞಾನೇಂದ್ರ ಅವರು ನಿಯಮ 73ರಡಿ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಕುದುರೇಮುಖ ಅರಣ್ಯದ 356 ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು, ಉಳಿದ 314 ಕುಟುಂಬಗಳ ಪೈಕಿ 76 ಕುಟುಂಬಗಳ ಜಮೀನಿನ ಮೌಲ್ಯಮಾಪನ ಈಗಾಗಲೇ ಪೂರ್ಣಗೊಂಡಿದೆ ಎಂದು ವಿವರಿಸಿದರು.
ಪುನರ್ವಸತಿ ಬಯಸಿ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಪರಿಹಾರ ಕಲ್ಪಿಸುವಾಗ ಮನೆ ಹಾಗೂ ಜಮೀನುಗಳ ಮೌಲ್ಯ ಮಾಪನವನ್ನು 18.04.2005ರ ಕಂದಾಯ ಇಲಾಖೆಯ ಅಧಿಸೂಚನೆಯ ಮಾನದಂಡದಂತೆ ಮನೆ, ಜಮೀನು, ಬೆಳೆಗೆ ಆಯಾ ಇಲಾಖೆಯಿಂದ ಗರಿಷ್ಠ ಪರಿಹಾರ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ. ಬಳಿಕ ಜಿಲ್ಲಾಧಿಕಾರಿಗಳ ಮಟ್ಟದ ಪುನರ್ವಸತಿ ಕುರಿತ ಜಿಲ್ಲಾ ಮಟ್ಟದ ಸಮಿತಿ ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಪರಿಹಾರ ವಿತರಿಸುತ್ತದೆ ಎಂದು ಮಾಹಿತಿ ನೀಡಿದರು.
