ಸಮಗ್ರ ಸುದ್ದಿ

ರೂ.2185 ಕೋಟಿ ನಬಾರ್ಡ್ ಅನುದಾನ ಕಡಿತ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ

Share

ಬೆಳಗಾವಿ: ಕೇಂದ್ರದ ನಬಾರ್ಡ್‍ನಿಂದ 2024-25ನೇ ಸಾಲಿಗೆ ಕಡಿಮೆ ಬಡ್ಡಿದರದಲ್ಲಿ ರೂ.5600 ಅನುದಾನ ಬರಬೇಕಿತ್ತು. ಆದರೆ ರೂ.3415 ಕೋಟಿ ಮಾತ್ರ ಸಂದಾಯವಾಗಿದ್ದು, ರೂ.2185 ಕೋಟಿ ಅನುದಾನ ಕಡಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ನಬಾರ್ಡ್ ಅನುದಾನದಲ್ಲಿ ಕಡಿತ ಪರಿಣಾಮವಾಗಿ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವಲ್ಲಿ ಹಲವು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ತೊಂದರೆ ಉಂಟಾಗಿದೆ ಎಂದರು.

ಮದುಗಿರಿ ಕ್ಷೇತ್ರದಲ್ಲಿ ಶೇ.26 ರಷ್ಟು, ಕುಣಿಗಲ್ ಕ್ಷೇತ್ರದಲ್ಲಿ ಶೇ.8 ರಷ್ಟು ಎಸ್.ಸಿ ಹಾಗೂ ಎಸ್.ಟಿ ಜನಸಂಖ್ಯೆಯಿದೆ. ಈ ಹಿನ್ನಲೆಯಲ್ಲಿ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿದೆ. ಮುಂಬರುವ ವರ್ಷದಲ್ಲಿ ಈ ತಾರತಮ್ಯ ನಿವಾರಿಸಿ ಕುಣಿಗಲ್ ಕ್ಷೇತ್ರಕ್ಕೆ ನಬಾರ್ಡ್ ಅನುದಾನ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರಿಗೆ ಭರವಸೆ ನೀಡಿದರು.

ಕೃಷಿ ಪತ್ತಿನ ಸಹಕಾರಿ ಸಂಘಗಳ ಗಣಕೀಕರಣ ಯೋಜನೆಯಡಿ ಕುಣಿಗಲ್ ತಾಲ್ಲೂಕಿನ ಕೃಷಿ ಪತ್ತಿನ ಸಂಘಗಳಿಗೆ ಕಂಪ್ಯೂಟರ್, ಸ್ಕ್ಯಾನರ್, ಬಯೋಮೆಟ್ರಿಕ್ ಸ್ಕ್ಯಾನರ್, ಯು.ಪಿ.ಎಸ್ ಸೇರಿದಂತೆ ನೆರ್ಟ್‍ವರ್ಕಿಂಗ್ ಉಪಕರಣಗಳನ್ನು ನೀಡಲು ಪ್ರತಿ ಸಂಘಕ್ಕೆ ರೂ.1.30 ಲಕ್ಷದಂತೆ ರಾಜ್ಯ ಸರ್ಕಾರ ರೂ.24.70 ಲಕ್ಷ ಬಿಡುಗಡೆ ಮಾಡಿದೆ.

ತುಮಕೂರು ಡಿ.ಸಿ.ಸಿ ಬ್ಯಾಂಕ್‍ನ ಕುಣಿಗಲ್ ತಾಲ್ಲೂಕಿನ ಸಂಘಗಳಿಗೆ 2024-25ರಲ್ಲಿ 14,850 ರೈತರಿಗೆ ರೂ.40.33 ಕೋಟಿ ಅಲ್ಪಾವಧಿ ಕೃಷಿ ಸಾಲ ನೀಡುವ ಗುರಿ ನಿಗದಿಪಡಿಸಲಾಗಿದ್ದು, ಈ ಪೈಕಿ 10,833 ರೈತರು ರೂ.38.40 ಕೋಟಿ ಸಾಲ ಪಡೆದಿದ್ದಾರೆ. 11 ರೈತರಿಗೆ ರೂ.1.58 ಕೋಟಿ ಮಧ್ಯಮಾಧಿ/ಧೀರ್ಘಾವಧಿ ಕೃಷಿ ಸಾಲ ನೀಡಲಾಗಿದೆ. 2025-26ನೇ ಸಾಲಿನಲ್ಲಿ ತಾಲ್ಲೂಕಿನ 13,750 ರೈತರಿಗೆ ರೂ.40 ಕೋಟಿ ಅಲ್ಪಾವಧಿ ಕೃಷಿ ಸಾಲ ನೀಡಲು ಗುರಿ ನಿಗದಿಪಡಿಸಲಾಗಿದೆ.

ನವೆಂಬರ್ ಅಂತ್ಯದವರೆಗೆ 2983 ರೈತರು ರೂ.10.50 ಕೋಟಿ ಅಲ್ಪಾವಧಿ ಸಾಲ ಪಡೆದಿದ್ದಾರೆ. 20 ರೈತರಿಗೆ 2 ಕೋಟಿ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲ ನೀಡಲು ಗುರಿ ನಿಗದಿಪಡಿಸಲಾಗಿದ್ದು, 13 ರೈತರು 1.30 ಕೋಟಿ ಮಧ್ಯಮಾವಧಿ ಹಾಗೂ ದೀರ್ಘಾವದಿ ಕೃಷಿ ಸಾಲ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


Share

You cannot copy content of this page