ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಎಸ್ಸಿಎಸ್ಪಿ/ ಟಿಎಸ್ಪಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರ್ದೇಶಕರಿಂದ ರಾಜ್ಯದ ಕಲೆ, ಸಂಸ್ಕೃತಿ, ಜಾನಪದ ಕಲೆ, ವಿಶಿಷ್ಟ ಸಾಧನೆ ಮಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳು, ಸಾಧಕರು ಮತ್ತು ಎಸ್.ಸಿ/ಎಸ್.ಟಿ ಜನರಿಗಾಗಿ ಸರ್ಕಾರ ರೂಪಿಸಿರುವ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ನಿರ್ದೇಶಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರು ನಿಗದಿತ ಅರ್ಜಿ ನಮೂನೆಯನ್ನು ದಿನಾಂಕ:29-12-2025 ರಿಂದ ದಿನಾಂಕ:12-01-2026ರ ಸಂಜೆ 4.30 ಗಂಟೆವರೆಗೆ ಛಾಯಾ ಮತ್ತು ಚಲನಚಿತ್ರ ಶಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, “ವಾರ್ತಾ ಸೌಧ”, # 17, ಭಗವಾನ ಮಹಾವೀರ ರಸ್ತೆ, ಬೆಂಗಳೂರು 560001 ಇಲ್ಲಿಂದ ಪಡೆಯಬಹುದಾಗಿದೆ.
ಅರ್ಜಿದಾರರು ನಿಗದಿತ ಅರ್ಜಿಯೊಂದಿಗೆ ಅರ್ಜಿ ಶುಲ್ಕ ರೂ.1,000/-(ಒಂದು ಸಾವಿರ ರೂ.ಗಳು ಮಾತ್ರ)ಗಳ ಮೊತ್ತವನ್ನು ಕೆ2 ಚಲನ್ ಮೂಲಕ ಹಣ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಜನವರಿ 12, 2026ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅರ್ಹ ನಿರ್ದೇಶಕರು ಈಗಾಗಲೇ ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿವರ, ಡಿವಿಡಿ ಪ್ರತಿ, ಕಾರ್ಯಾದೇಶದ ಪ್ರತಿ ಮತ್ತು ಇತ್ತೀಚೆಗೆ ಪಡೆದಿರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳನ್ನು ಉಪ ನಿರ್ದೇಶಕರು (ಛಾಯಾ ಮತ್ತು ಚಲನಚಿತ್ರ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು, ಇವರಿಂದ ಪಡೆಯಬಹುದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
