ಬೆಂಗಳೂರು: ರಾಜ್ಯದಲ್ಲಿ ಸೋಯಾಬೀನ್, ಶೇಂಗಾ, ಹೆಸರುಕಾಳು, ಉದ್ದು ಹಾಗೂ ಸೂರ್ಯಕಾಂತಿ ಬೆಳೆಗಳ ಖರೀದಿ ಅವಧಿ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸಿ ಕೇಂದ್ರ ಕೃಷಿ ಇಲಾಖೆಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿ ನಿನ್ನೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ರವರು ಸಚಿವ ಚಲುವರಾಯಸ್ವಾಮಿಯವರಿಗೆ ದೂರವಾಣಿ ಕರೆ ಮಾಡಿ ತಮ್ಮ ಮನವಿಯನ್ನು ಪುರಸ್ಕರಿಸಿರುವುದಾಗಿ ತಿಳಿಸಿದರು.
ಅಲ್ಲದೇ ಕರ್ನಾಟಕ ರಾಜ್ಯ ಕೃಷಿ ಇಲಾಖೆಯೂ ಕೃಷಿ ಸಚಿವ ಚಲುವರಾಯಸ್ವಾಮಿಯವರ ನೇತೃತ್ವದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ರಾಜ್ಯ ಕೃಷಿ ಇಲಾಖೆಯ ಪ್ರಸ್ತಾವನೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆಯನ್ನು ಇದೇ ವೇಳೆ ಕೇಂದ್ರ ಕೃಷಿ ಸಚಿವರು ನೀಡಿದರು.
2025-26 ಮುಂಗಾರು ಅವಧಿಗೆ ಕರ್ನಾಟಕ ರಾಜ್ಯದಲ್ಲಿ ಫ್ರೈಸ್ ಸಪೋರ್ಟ್ ಸ್ಕೀಮ್ (PSS) ಅಡಿಯಲ್ಲಿ ಸೋಯಾಬೀನ್ ಮತ್ತು ಶೇಂಗಾ ಖರೀದಿ ಅವಧಿಯನ್ನು ದಿನಾಂಕ 26.01.2026 ರವರೆಗೆ ಹಾಗೂ ಹೆಸರು ಕಾಳು (ಮೂಂಗ್), ಉದ್ದು ಮತ್ತು ಸೂರ್ಯಕಾಂತಿ ಖರೀದಿ ಅವಧಿಯನ್ನು ದಿನಾಂಕ 22.01.2026 ರವರೆಗೆ ಖರೀದಿ ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿದೆ.
ಪೂರ್ವ ನೋಂದಾಯಿತ ರೈತರಿಂದ ಮಾತ್ರ ಖರೀದಿ ನಡೆಸುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡು,
ವಿಸ್ತರಿಸಿದ ಅವಧಿಯೊಳಗೆ ಖರೀದಿ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಆದೇಶ ನೀಡಲಾಗಿದೆ.
