ಸಮಗ್ರ ಸುದ್ದಿ

ಕಾವೇರಿ 5ನೇ ಹಂತದ ಕೊಳವೆ ಮಾರ್ಗದ ವಾಲ್ವ್ ಚೇಂಬರ್ ನಲ್ಲಿ ಬಾಲಕನ ಸಾವು: ಜಲಮಂಡಳಿ ಯಿಂದ ತೀವ್ರ ವಿಷಾದ; ತನಿಖೆಗೆ ಆದೇಶ | ಫೆಬ್ರವರಿ 05ರ ಒಳಗೆ ವರದಿ ನೀಡಲು ಜಲಮಂಡಳಿ ಅಧ್ಯಕ್ಷರ ಸೂಚನೆ

Share

ಬೆಂಗಳೂರು:ಸುದ್ದಿ ಮಾಧ್ಯಮಗಳಲ್ಲಿ ವರದಿಯಾದಂತೆ, ಕಾವೇರಿ 5ನೇ ಹಂತದ ನೀರಿನ ಕೊಳವೆ ಮಾರ್ಗದ “ಸ್ಕೋರ್ ವಾಲ್ವ್ ಚೇಂಬರ್” ನಲ್ಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆಗೆ ಬೆಂಗಳೂರು ಜಲಮಂಡಳಿಯು ತೀವ್ರ ವಿಷಾದ ವ್ಯಕ್ತಪಡಿಸಿದೆ.

ಈ ದುರ್ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, ಬಾಲಕನ ಸಾವಿಗೆ ಕಾರಣವಾದ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಕ್ಷಣವೇ ಜಾರಿಗೆ ಬರುವಂತೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದ್ದಾರೆ.

ಬೆಂಗಳೂರು ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತನಿಖೆ ನಡೆಸಲು ತಂಡವನ್ನು ರಚಿಸಲಾಗಿದ್ದು, ಫೆಬ್ರವರಿ 5 ರ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಹಿರಿಯ ಅಧಿಕಾರಿಗಳಾದ ಪ್ರಧಾನ ಮುಖ್ಯ ಅಭಿಯಂತರರಾದ ಬಿ.ಎಸ್. ದಲಾಯತ್, ಕಾವೇರಿ ನೀರು ಮುಖ್ಯ ಅಭಿಯಂತರರಾದ ಎ. ರಾಜಶೇಖರ್ ಮತ್ತು ಕಾರ್ಯಪಾಲನೆ ಮುಖ್ಯ ಅಭಿಯಂತರರಾದ ಮಹೇಶ್ ಕೆ.ಎನ್ ಅವರನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಘಟನೆಯ ಬಗ್ಗೆ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಲು ಸೂಚಿಸಿದೆ.

ಈ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಬೇಕು ಹಾಗೂ ಜಲಮಂಡಳಿ ಕಡೆಯಿಂದ ಲೋಪವಾಗಿದೆಯೇ ಎಂಬುದನ್ನು ಪತ್ತೆಹಚ್ಚಿ, ಇದೇ ತಿಂಗಳ ಫೆಬ್ರವರಿ 5 ರೊಳಗಾಗಿ ವರದಿಯನ್ನು ಸಲ್ಲಿಸುವಂತೆ ಮಂಡಳಿಯ ಅಧ್ಯಕ್ಷರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ವರದಿ ಬಂದ ನಂತರ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಅಧ್ಯಕ್ಷರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page