ಬೆಂಗಳೂರು: ಇ-ಸ್ವತ್ತು ಹೊಸ ನಿಯಮಗಳು ಜಾರಿಗೊಳ್ಳುವ ಮುನ್ನ ಸೃಜನೆಯಾಗಿರುವ ಕಟ್ಟಡಗಳು ಹಾಗೂ ನಿವೇಶನಗಳನ್ನು ಗ್ರಾಮ ಪಂಚಾಯತಿಗಳು ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟಿದ್ದು, ಇದರಿಂದ ತೊಂದರೆ ಗೊಳಗಾಗಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ರನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 (ದಿನಾಂಕ: 07-04-2025) ಜಾರಿಗೆ ಬಂದ ದಿನಾಂಕಕ್ಕೆ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳನ್ನು ಗ್ರಾಮ ಪಂಚಾಯತಿಗಳು ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟಿದ್ದರಿಂದ ಬಾಧಿತರಾದ ವ್ಯಕ್ತಿಗಳು / ಸಂಸ್ಥೆಗಳು ಹಾಗೂ ಉಪಬಂಧಗಳನ್ನು ಜಾರಿಗೆ ತರುವಾಗ ಗ್ರಾಮ ಪಂಚಾಯತಿಯ ತೀರ್ಮಾನದಿಂದ ಬಾಧಿತರಾದ ವ್ಯಕ್ತಿಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸಲಾಗಿದೆ. ಈ ನಿಯಮಗಳನ್ವಯ, ಈ ಹಿಂದೆ ಜಾರಿಯಲ್ಲಿದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಪರಿಷ್ಕರಿಸಿ, ದಿನಾಂಕ 01-12-2025 ರಂದು ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನಿಡಲಾಗಿತ್ತು.
ಅದರಂತೆ, ದಿನಾಂಕ 07-04-2025 ಕ್ಕಿಂತ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳಿಗೆ, ಹಾಗೂ ಅಂತಹ ಆಸ್ತಿಗಳು ಪಂಚತಂತ್ರ ತಂತ್ರಾಂಶದಲ್ಲಿ ದಾಖಲೆಯಾಗಿರದಿದ್ದಲ್ಲಿ, 2- ಖಾತಾ ಪಡೆಯುವ ಉದ್ದೇಶದಿಂದ ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ ಫೇಸ್ (Citizen Interface) ಮೂಲಕ ಹೊಸ ನಮೂನೆ-11ಬಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ ಫೇಸ್ (Citizen Interface) ಮೂಲಕ ಇದುವರೆಗೆ 27,000 ಕ್ಕಿಂತಲೂ ಹೆಚ್ಚು ಹೊಸ ನಮೂನೆ-11ಬಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 26,000 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿವರಿಸಿದ್ದಾರೆ.
ಹೊಸ ನಿಯಮಗಳನ್ವಯ, ಸದರಿ ಕಟ್ಟಡಗಳು ಮತ್ತು ನಿವೇಶನಗಳು ದಿನಾಂಕ 07-04-2025 ಕ್ಕಿಂತ ಮುಂಚಿತವಾಗಿ ಸೃಜನೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಇಂತಹ ಅರ್ಜಿಗಳನ್ನು ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳ ಮೂಲಕ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅನುಮೋದನೆಗಾಗಿ ಕಳುಹಿಸಲಾಗುತ್ತಿದೆ.
ನಮೂನೆ-11ಬಿ ಇ-ಖಾತಾಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನಾ ಪ್ರಕ್ರಿಯೆಯನ್ನು ತಂತ್ರಾಂಶದಲ್ಲಿ ಅಳವಡಿಸಿರುವ ಕಾರಣ, ಹೊಸ ನಮೂನೆ-11ಬಿ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಉಂಟಾಗಿದೆ. ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಮೋದನೆ ನೀಡಿದ ನಂತರ, ಗ್ರಾಮ ಪಂಚಾಯತಿಗಳಿಂದ 15 ಕೆಲಸ ದಿನಗಳ ಕಾಲಾವಧಿಯಲ್ಲಿ ನಮೂನೆ-11ಬಿ ಗಳನ್ನು ವಿತರಿಸಲಾಗುವುದು, ಈಗಾಗಲೇ ಸಲ್ಲಿಕೆಯಾಗಿರುವ ಹೊಸ ನಮೂನೆ-11ಬಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಋಣಭಾರ ಪ್ರಮಾಣ ಪತ್ರ ಸಲ್ಲಿಕೆಯ ಬಗ್ಗೆ ಸಚಿವರು ಮಾಹಿತಿ ಹಂಚಿಕೊಂಡಿದ್ದು ವಿವರಗಳು ಹೀಗಿವೆ:
ಇ -ಸ್ವತ್ತು ಅರ್ಜಿದಾರರ ನೋಂದಾಯಿತ ಪತ್ರವು (Registered Deed) 01-04-2004 ಕ್ಕಿಂತ ಮುಂಚಿತವಾಗಿದ್ದರೆ, ಅರ್ಜಿದಾರರು ಎರಡು ಋಣಭಾರ ಪ್ರಮಾಣಪತ್ರ (EC) ದಾಖಲೆಗಳನ್ನು ಪಡೆಯಬೇಕಾಗುತ್ತದೆ:
- ಅರ್ಜಿದಾರರು ನೋಂದಣಿ ದಿನಾಂಕಕ್ಕಿಂತ ಕನಿಷ್ಠ ಒಂದು ದಿನ ಮೊದಲ ದಿನಾಂಕದಿಂದ 31-03-2004 ರವರೆಗಿನ ಋಣಭಾರ ಪ್ರಮಾಣಪತ್ರ (EC) ಹಾಗೂ,
- ದಿನಾಂಕ: 01-04-2004 ರಿಂದ ಕನಿಷ್ಠ ಅರ್ಜಿ ಸಲ್ಲಿಸುವವರೆಗಿನ ಇಸಿ (EC).
ಅರ್ಜಿದಾರರ ನೋಂದಾಯಿತ ಪತ್ರವು ದಿನಾಂಕ : 17-08-1998 ರಂದು ನೋಂದಣಿಯಾಗಿದ್ದರೆ, ದಿನಾಂಕ 16-08-1998 ರಿಂದ 31-03-2004 ವರೆಗಿನ ಋಣಭಾರ ಪ್ರಮಾಣಪತ್ರ (EC) ಪಡೆದುಕೊಳ್ಳುವುದು ಹಾಗೂ ದಿನಾಂಕ 01-04- 2004 ರಿಂದ ಅರ್ಜಿ ಸಲ್ಲಿಸುವವರೆಗಿನ ಋಣಭಾರ ಪ್ರಮಾಣಪತ್ರ (EC) ಪಡೆಡುಕೊಳ್ಳುವುದು.
ನೋಂದಾಯಿತ ಪತ್ರವು ದಿನಾಂಕ 13-12-2004 ನೋಂದಣಿಯಾಗಿದ್ದರೆ, 12.12.2004 ರಿಂದ ಅರ್ಜಿ ಸಲ್ಲಿಸುವವರೆಗಿನ ಒಂದೇ ಋಣಭಾರ ಪ್ರಮಾಣಪತ್ರ (EC) ಪಡೆದುಕೊಳ್ಳುವುದು.
ನೋಂದಾಯಿತ ಪತ್ರವು ದಿನಾಂಕ 13-12-2025ರಂದು ನೋಂದಣಿಯಾಗಿದ್ದರೆ, ದಿನಾಂಕ 12-12-2025ರಿಂದ ಅರ್ಜಿ ಸಲ್ಲಿಸುವವರೆಗಿನ ಒಂದೇ ಋಣಭಾರ ಪ್ರಮಾಣಪತ್ರ (EC) ಪಡೆದುಕೊಳ್ಳುವುದು.
ಗಮನಿಸಬೇಕಾದ ಅಂಶ: ಅರ್ಜಿದಾರರು ಸಲ್ಲಿಸಿದ ಋಣಭಾರ ಪ್ರಮಾಣಪತ್ರ (EC) ದಾಖಲೆಯಲ್ಲಿ ನಿಮ್ಮ ನೋಂದಾಯಿತ ಪತ್ರದ ಸಂಖ್ಯೆ ಇಲ್ಲವಾದಲ್ಲಿ, ಇ-ಸ್ವತ್ತು ಖಾತೆಗೆ ಸಲ್ಲಿಸಿದ ಅರ್ಜಿಯನ್ನು ಮುಂದಿನ ಪ್ರಕ್ರಿಯೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಈ ನಿಯಮಗಳ ಅನುಸಾರ ಇ-ಸ್ವತ್ತು ಅರ್ಜಿಗಳನ್ನು ಸಲ್ಲಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
