ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಅತ್ಯಂತ ವೈಭವದಿಂದ ನಡೆಯುತ್ತಿರುವ ‘ಬೂದನೂರು ಉತ್ಸವ’ದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ರಂಗೋಲಿ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ. ಶಾಸಕ ರವಿಕುಮಾರ್ ಗಣಿಗ ಅವರ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಕರ್ನಾಟಕ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳ ಕುರಿತು ಆಕರ್ಷಕ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದ ವೈಯಕ್ತಿಕ ನಗದು ಬಹುಮಾನಗಳನ್ನು ವಿತರಿಸಲಾಯಿತು.
ರಂಗೋಲಿ ಸ್ಪರ್ಧೆಯ ವಿಜೇತರು ಮತ್ತು ಬಹುಮಾನದ ವಿವರ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ರಂಗೋಲಿ ಕಲೆಯ ಮೂಲಕ ಜನಮನಕ್ಕೆ ತಲುಪಿಸಿದ ಮಹಿಳೆಯರು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಪ್ರಥಮ ಬಹುಮಾನ (₹15,000/-): ಉಮೇಶ್ವರಿ ಕೆ.ಎಸ್. (ಕೊಮ್ಮೆರಹಳ್ಳಿ ಗ್ರಾಮ, ಮಂಡ್ಯ ತಾಲೂಕು).
ದ್ವಿತೀಯ ಬಹುಮಾನ (₹10,000/-): ನಿಶ್ವಿತ (ಗೋಪಾಲಪುರ ಗ್ರಾಮ, ಮಂಡ್ಯ ತಾಲೂಕು). ತೃತೀಯ ಬಹುಮಾನ (₹5,000/-): ಪೂರ್ವಿತಾ ಎಚ್.ಜಿ. (ಹನಕೆರೆ ಗ್ರಾಮ, ಮಂಡ್ಯ ತಾಲೂಕು).
ಗಣ್ಯರಿಂದ ಪ್ರಶಸ್ತಿ ಪ್ರದಾನ:
ಸಂಜೆ ನಡೆದ ಸಮಾರಂಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಶಾಸಕರುಗಳಾದ ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಮತ್ತು ದರ್ಶನ್ ಧ್ರುವನಾರಾಯಣ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರು ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಿದರು.
ಈ ವೇಳೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ಮಂಡ್ಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಂದಿನಿ ಹಾಗೂ ಎಸ್ಪಿ ಶೋಭಾ ರಾಣಿ ಉಪಸ್ಥಿತರಿದ್ದರು.
ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಡಿಸಿಎಂ ಅವರು ಸ್ವತಃ ನಗದು ಬಹುಮಾನ ಘೋಷಿಸಿದ್ದು ಸ್ಪರ್ಧಾಳುಗಳಲ್ಲಿ ಹೊಸ ಉತ್ಸಾಹ ತುಂಬಿತ್ತು. ಬೂದನೂರು ಉತ್ಸವವು ಮಂಡ್ಯದ ಸಾಂಸ್ಕೃತಿಕ ಕಂಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ.
