ಸಮಗ್ರ ಸುದ್ದಿ

ಮಹಾಮಹಿಮರ ಜಯಂತಿ ಆಚರಣೆಯಿಂದ ಸಮಾಜದಲ್ಲಿ ಸಾಮರಸ್ಯ: ಈಶ್ವರ ಖಂಡ್ರೆ

Share

ಬೆಂಗಳೂರು: ಸಮಾಜದಲ್ಲಿ ಸದ್ಭಾವನೆ, ಸಾಮರಸ್ಯ, ಸೋದರತ್ವ, ಸಹಬಾಳ್ವೆ ಬೆಳೆಸಲು ಜಗದ್ಗುರು ರೇಣುಕಾಚಾರ್ಯರಂತಹ ಮಹಾಮಹಿಮರ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ ಎಂದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಸರ್ವರ ಒಳಿತಿಗಾಗಿ, ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು.

ರೇಣುಕಾದಿ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಶಾಂತಿ ಎಂದು ಅವರು ಪ್ರತಿಪಾದಿಸಿದ್ದರೆ, ಬಸವಾದಿ ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಬೇಕು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳಿನ ಸಮಸಮಾಜ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಎಲ್ಲ ಧರ್ಮಗಳ ಸಾರವೂ ಮಾನವೀಯತೆಯೇ ಆಗಿದ್ದು, ನಾವೂ ಬದುಕಬೇಕು, ಇತರರಿಗೂ ಬದುಕಲು ಬಿಡಬೇಕು ಎಂದರು.

ವೀರಶೈವ ಲಿಂಗಾಯತ ಮಠಮಾನ್ಯಗಳು ಸರ್ವ ಧರ್ಮ, ಸರ್ವಜಾತಿ, ಜನಾಂಗದವರಿಗೂ ಆಶ್ರಯ, ಅನ್ನ ಮತ್ತು ಅರಿವು (ವಿದ್ಯೆ) ನೀಡುವ ಮೂಲಕ ಪರಂಪರೆಯನ್ನು ಪೋಷಿಸಿಕೊಂಡು ಬಂದಿದ್ದಾರೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

ನಮ್ಮ ಪೂರ್ವಿಕರು ಮಹಾಪುರುಷರು, ನಮ್ಮದು ಶ್ರೀಮಂತ ಪರಂಪರೆ ಎಂದು ಹೆಮ್ಮೆ ಪಟ್ಟರೆ ಸಾಲದು ವರ್ತಮಾನದಲ್ಲಿನ ಸನ್ನಿವೇಶದ ಆತ್ಮವಾವಲೋಕನ ಮಾಡಿಕೊಳ್ಳಬೇಕು. ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು, ಎಲ್ಲರನ್ನೂ ಜೊತೆಗೆಯಲ್ಲಿ ತೆಗೆದುಕೊಂಡು ಬೆಳೆಯಬೇಕು ಎಂದರು.

ಯುವಶಕ್ತಿ ಅಣುಶಕ್ತಿಗಿಂತ ಮಿಗಿಲಾದದ್ದು, ಭಾರತ ಯುವಜನರ ರಾಷ್ಟ್ರವಾಗಿದ್ದು ನಮ್ಮ ಯುವಕರಲ್ಲಿ ಏನನ್ನಾದರೂ ಸಾಧಿಸುವ ಶಕ್ತಿ ಇದೆ. ಆದರೆ ಯುವಶಕ್ತಿಯ ಸದ್ಬಳಕೆ ಆಗಬೇಕು. ಆದರೆ ಯುವಜನರು ನಶೆಯ ದಾಸರಾಗುತ್ತಿದ್ದಾರೆ. ಯುವಜನರು ದುಶ್ಚಟ, ದುರ್ವ್ಯಸನ ಮುಕ್ತರಾಗಿ ಶಾರೀರಿಕವಾಗಿ, ಮಾನಸಿಕವಾಗಿ ಸದೃಢರಾಗಿರಬೇಕು.

ನಮ್ಮ ವಚನಗಳಲ್ಲಿ ಸದಾಚಾರ, ಸದ್ಗುಣಗಳನ್ನು ಬೆಳೆಸುವ ಶಕ್ತಿಯಿದ್ದು, ವಚನಗಳ ಸಾರವನ್ನು ಯುವಜನರಿಗೆ ತಿಳಿಸುವ ಪ್ರಯತ್ನವಾಗಬೇಕು. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.

ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ. ತಂದೆ ತಾಯಿಗಳ ಸೇವೆ ಮಾಡುವುದೇ ಪರಮ ಧರ್ಮ. ಹಸಿದು ಬಂದವನಿಗೆ ಆಹಾರ ನೀಡುವುದು ಧರ್ಮ. ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು ಧರ್ಮ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದರು.


Share

You cannot copy content of this page