ಸಮಗ್ರ ಸುದ್ದಿ

ಪರಮ್ ಫೌಂಡೇಶನ್‌ನಿಂದ ಕಲಾ ಸೌಂದರ್ಯದ ಅನಾವರಣ|ಬದುಕು ಮತ್ತು ಕಲೆ ಬೇರೆಯಲ್ಲ: ಶತಾವಧಾನಿ ಡಾ. ಆರ್. ಗಣೇಶ್ | ಸಿನೆಮಾ ಎಂಬುದು ಬರಿ ಮನರಂಜನೆಯಲ್ಲ, ಅದು ಅನುಭೂತಿ

Share

ಬೆಂಗಳೂರು: ಕಲೆ ಎನ್ನುವುದು ಬದುಕಿನಿಂದ ಬೇರೆಯಲ್ಲ. ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ನಾವು ಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ ಎಂದು ಶತಾವಧಾನಿ ಡಾ. ಆರ್. ಗಣೇಶ್ ಅವರು ಅಭಿಪ್ರಾಯಪಟ್ಟರು.

ಪರಮ್ ಫೌಂಡೇಶನ್ ಆಯೋಜಿಸಿದ್ದ ಕಲಾ ಸಂವಾದದಲ್ಲಿ ತೆಲುಗಿನ ಶ್ರೇಷ್ಠ ನಿರ್ದೇಶಕ ಕೆ. ವಿಶ್ವನಾಥ್ ಅವರ ‘ಸ್ವರ್ಣಕಮಲಂ’ ಚಿತ್ರದ ವಿವಿಧ ಮಗ್ಗುಲುಗಳ ಬಗ್ಗೆ ಅವರು ಮಾತನಾಡಿದ ಅವರು, ‘ಸ್ವರ್ಣಕಮಲಂ’ ಚಿತ್ರದ ಸೌಂದರ್ಯವನ್ನು ವರ್ಣಿಸಿದರು. ಅಲ್ಲದೆ, ಈ ಚಿತ್ರದಲ್ಲಿ ಭಗವದ್ಗೀತೆಯ ‘ಸ್ವಧರ್ಮ’ದ ಪರಿಕಲ್ಪನೆಯನ್ನು ಸಾಕಷ್ಟು ಅಳವಡಿಸಿಕೊಳ್ಳಲಾಗಿದೆ. ಜೊತೆಗೆ ಸಿನಿಮಾ ಯಶಸ್ಸಿನ ಹಿಂದೆ ಭಾರತದ ದಿಗ್ಗಜ ನೃತ್ಯ ಸಂಯೋಜಕರ ಶ್ರಮವೂ ಇದೆ ಎಂದು ಬಣ್ಣಿಸಿದರು.

ಭಗವದ್ಗೀತೆಯ ‘ಸ್ವಧರ್ಮ’ದ ಪರಿಕಲ್ಪನೆಯನ್ನು ಚಿತ್ರಕ್ಕೆ ಅನ್ವಯಿಸಿದ ಅವರು, ತನ್ನಲ್ಲಿರುವ ಪ್ರತಿಭೆಯನ್ನು ಗುರುತಿಸದೆ ಅನ್ಯ ಸುಖದ ಹಿಂದೆ ಹೋಗುವುದು ಹೇಗೆ ವ್ಯರ್ಥ ಎನ್ನುವುದನ್ನು ನಾಯಕಿ ಮೀನಾಕ್ಷಿಯ ಪಾತ್ರದ ಮೂಲಕ ಕೆ. ವಿಶ್ವನಾಥ್ ತೋರಿಸಿದ್ದಾರೆ. ತನ್ನ ತಂದೆ ನೃತ್ಯಾಚಾರ್ಯರಾಗಿದ್ದರೂ ಅವಳಲ್ಲಿರುವ ನಿರಾಸಕ್ತಿ ಮತ್ತು ನಂತರದ ಪರಿವರ್ತನೆ, ಕಲೆ ಮತ್ತು ಬದುಕು ಒಂದೇ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ವಿಶ್ಲೇಷಿಸಿದರು.

ಬದುಕಿನ ದರ್ಶನ ಮತ್ತು ಸ್ವಧರ್ಮ

ಈ ಚಿತ್ರ ಕೇವಲ ನೃತ್ಯದ ಬಗ್ಗೆಯಲ್ಲ, ಬದಲಾಗಿ ವ್ಯಕ್ತಿಯೊಬ್ಬನ ಅಸ್ತಿತ್ವದ ಹುಡುಕಾಟದ ಬಗ್ಗೆಯೂ ಆಗಿದೆ. ಭಗವದ್ಗೀತೆಯ “ಸ್ವಧರ್ಮೇ ನಿಧನಂ ಶ್ರೇಯಃ” ಎಂಬ ತತ್ವದಂತೆ, ನಾಯಕಿ ಮೀನಾಕ್ಷಿ ತನ್ನೊಳಗಿನ ನೃತ್ಯ ಪ್ರತಿಭೆಯನ್ನು ಕಡೆಗಣಿಸಿ ಲೌಕಿಕ ಸುಖದ ಹಿಂದೆ ಓಡುತ್ತಾಳೆ. ತನ್ನ ತಂದೆ ನೃತ್ಯಾಚಾರ್ಯರಾಗಿದ್ದರೂ ಅವಳಲ್ಲಿರುವ ನಿರಾಸಕ್ತಿ, ನಂತರ ಪರಿಸರ ಮತ್ತು ಪ್ರೇರಣೆಯು ಅವಳನ್ನು ಮತ್ತೆ ತನ್ನ ಮೂಲಕ್ಕೆ (ನೃತ್ಯಕ್ಕೆ) ಹೇಗೆ ಕರೆತರುತ್ತದೆ ಎಂಬುದನ್ನು ಚಿತ್ರ ಅದ್ಭುತವಾಗಿ ಚಿತ್ರಿಸಿದೆ. ಹೀಗಾಗಿ ನಮ್ಮ ಅಸ್ತಿತ್ವದಿಂದ ಜಗತ್ತಿಗೆ ಹೇಗೆ ಸೌಖ್ಯ ಉಂಟಾಗಬಲ್ಲದು ಎನ್ನುವುದೇ ಸ್ವಧರ್ಮ ಎಂದು ಡಾ. ಶತವಾಧಾನಿ ಗಣೇಶ್ ವಿವರಿಸಿದರು.

ತಾಂತ್ರಿಕ ಕುಶಲತೆ ಮತ್ತು ನೃತ್ಯದ ಲಾಸ್ಯ

ಚಿತ್ರದ ಪ್ರತಿಯೊಂದು ಹಾಡು ಮತ್ತು ನೃತ್ಯ ಸಂಯೋಜನೆಯ ಹಿಂದೆ ದೊಡ್ಡ ಪ್ರತಿಭೆಗಳೇ ಕೆಲಸ ಮಾಡಿವೆ. ಕೇಳುಚರಣ್ ಮಹಾಪಾತ್ರ (ಒಡಿಸ್ಸಿ), ಗೋಪಿ ಕೃಷ್ಣ, ಕೆ. ಉಮಾ ರಾಮರಾವ್ ಅವರಂತಹ ದಿಗ್ಗಜರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಇಳಯರಾಜಾ ಅವರ ಸಂಗೀತ ಮತ್ತು ಸಿರವೆನ್ನೆಲ ಸೀತಾರಾಮಶಾಸ್ತ್ರಿಗಳ ಸಾಹಿತ್ಯವು ಚಿತ್ರದ ಭಾವವನ್ನು ಉತ್ತುಂಗಕ್ಕೇರಿಸಿವೆ. ವಿಶ್ವನಾಥ್ ಅವರು ಕೇವಲ ನಿರ್ದೇಶಕರಲ್ಲ, ಪ್ರತಿ ಪಾತ್ರವನ್ನು ತಾವೇ ಅಭಿನಯಿಸಿ ತೋರಿಸುವ ‘ಟಫ್ ಮಾಸ್ಟರ್’ ಆಗಿದ್ದರು ಎಂದು ಗಣೇಶ್ ನೆನಪಿಸಿಕೊಂಡರು.

ಜಾಗತಿಕ ಮತ್ತು ಭಾರತೀಯ ಸೌಂದರ್ಯ

ಯಾವುದು ನೈಸರ್ಗಿಕವಾಗಿ ಜಾಗತಿಕವೋ (ಯೂನಿವರ್ಸಲ್) ಅದು ಅಪ್ಪಟ ಭಾರತೀಯವೂ ಆಗಿರುತ್ತದೆ ಎಂದು ಹೇಳುತ್ತಾ, ಸಿನೆಮಾದಲ್ಲಿನ ‘ರಸ ಸಿದ್ಧಾಂತ’ವನ್ನು ಅವರು ವಿಶ್ಲೇಷಿಸಿದರು. ಒಂದು ಕಲಾಕೃತಿಯಲ್ಲಿ ಆನಂದದ ಜೊತೆಗೆ ಒಂದು ಬೋಧನೆಯೂ ಇರಬೇಕು, ಅದು ಈ ಚಿತ್ರದಲ್ಲಿ ಸಮರ್ಥವಾಗಿ ಮೂಡಿಬಂದಿದೆ. ‘ಕಮರ್ಷಿಯಲ್’ ಮತ್ತು ‘ಆರ್ಟ್’ ಎಂಬ ಗೆರೆಗಳನ್ನು ಅಳಿಸಿ ಹಾಕಿ, ಸಿನೆಮಾ ಎಂದರೆ ಅದು ಕಲೆ ಎನ್ನುವುದನ್ನು ಈ ಚಿತ್ರ ಸಾಬೀತುಪಡಿಸಿದೆ.

ಪರಂಪರೆ ಮತ್ತು ಆಧುನಿಕತೆಯ ಸಮತೋಲನ

1988ರಲ್ಲಿ ತೆರೆಕಂಡ ಈ ಚಿತ್ರ ಇಂದು ಅರ್ಧ ಶತಮಾನ ಕಳೆಯುತ್ತಿದ್ದರೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಇಳಯರಾಜ ಅವರ ಅದ್ಭುತ ಹಿನ್ನೆಲೆ ಸಂಗೀತ ಮತ್ತು ಸಿರವೆನ್ನೆಲ ಸೀತಾರಾಮಶಾಸ್ತ್ರಿಗಳ ಸಾಹಿತ್ಯವು ಚಿತ್ರದ ಆಳವನ್ನು ಹೆಚ್ಚಿಸಿವೆ. “ಯಾವುದು ಅಪ್ಪಟ ಭಾರತೀಯವೋ ಅದು ಜಾಗತಿಕವೂ ಆಗಿರುತ್ತದೆ” ಎಂಬ ತತ್ವಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಡಾ. ಗಣೇಶ್ ಅಭಿಪ್ರಾಯಪಟ್ಟರು.

ಪರಮ್ ಫೌಂಡೇಶನ್ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಆಯೋಜಿಸಿದ್ದ ಈ ಕಲಾ ಸಂವಾದವು ಪ್ರೇಕ್ಷಕರಿಗೆ ಕೇವಲ ಒಂದು ಚಲನಚಿತ್ರದ ವಿಶ್ಲೇಷಣೆಯಾಗಿ ಉಳಿಯದೆ, ಭಾರತೀಯ ಪರಂಪರೆಯ ಸೌಂದರ್ಯವನ್ನು ಮರುಶೋಧಿಸುವ ಒಂದು ಬೌದ್ಧಿಕ ಪ್ರಯಾಣವಾಗಿ ಮಾರ್ಪಟ್ಟಿತ್ತು.


Share

You cannot copy content of this page