ಸಮಗ್ರ ಸುದ್ದಿ

ಜಯನಗರದಲ್ಲಿ ಸಾಂಸ್ಕೃತಿಕ ಸೌರಭ: ‘ಪರಮ್ ವಿಹಾರ’ ವೇದಿಕೆಯಲ್ಲಿ ಮೇಳೈಸಿದ ಗಾನ-ನೃತ್ಯ ವೈಭವ |ಮನಸೂರೆಗೊಂಡ ಶ್ರೀನಿಧಿ ರಾಮಸ್ವಾಮಿ ನೃತ್ಯ ಪ್ರದರ್ಶನ

Share

ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿರುವ ಪಟ್ಟಾಭಿರಾಮ ಸೇವಾ ಮಂಡಳಿಯ ಸಭಾಂಗಣವು ಭಾನುವಾರ ಸಂಜೆ ಒಂದು ಅಪರೂಪದ ಕಲಾ ದರ್ಶನಕ್ಕೆ ಸಾಕ್ಷಿಯಾಯಿತು. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗಿದ್ದ ‘ಪರಮ್ ವಿಹಾರ-10’ ಕಾರ್ಯಕ್ರಮವು ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಘಮವನ್ನು ಪಸರಿಸಿ, ಸೇರಿದ್ದ ಕಲಾಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಮನಸೂರೆಗೊಂಡ ಮಾನ್ಯ ಮಂಜುನಾಥ್ ಕಂಠಸಿರಿ
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಮಾನ್ಯ ಮಂಜುನಾಥ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ತಮ್ಮ ಸುಶ್ರಾವ್ಯ ಕಂಠದಿಂದ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದ ಅವರು, ಲಯಬದ್ಧ ಗಾಯನದ ಮೂಲಕ ಗಮನ ಸೆಳೆದರು. ಇವರಿಗೆ ಮೃದಂಗದಲ್ಲಿ ವಿದ್ವಾನ್ ಸುಮಧುರ್ ಅನೂರ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ರಾಘವೇಂದ್ರ ಡಿ.ಆರ್. ಅವರು ಅತ್ಯುತ್ತಮ ಸಾಥ್ ನೀಡುವ ಮೂಲಕ ಸಂಗೀತ ಕಛೇರಿಯ ರಂಗನ್ನು ಹೆಚ್ಚಿಸಿದರು. ವಾದ್ಯಗಳ ನಾದ ಮತ್ತು ಗಾಯನದ ಸಮನ್ವಯವು ಶ್ರೋತೃಗಳಿಗೆ ಹಿತವಾದ ಅನುಭವ ನೀಡಿತು.

ಶ್ರೀನಿಧಿ ರಾಮಸ್ವಾಮಿ ಅವರ ನೃತ್ಯ ವೈಭವ
ಗಾಯನದ ನಂತರ ನಡೆದ ಕುಮಾರಿ ಶ್ರೀನಿಧಿ ರಾಮಸ್ವಾಮಿ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವು ಸಭೆಯ ಕಣ್ಮಣಿಯಾಯಿತು. ಸಾಂಪ್ರದಾಯಿಕ ನೃತ್ಯ ಪ್ರಕಾರದ ಘನತೆ ಮತ್ತು ಲಾಸ್ಯವನ್ನು ತಮ್ಮ ಅಭಿನಯದ ಮೂಲಕ ಶ್ರೀನಿಧಿಯವರು ತೆರೆದಿಟ್ಟರು. ಅವರ ಹಾವಭಾವಗಳು ಹಾಗೂ ಪಾದಚಲನೆಯು ಶಾಸ್ತ್ರೀಯ ನೃತ್ಯದ ಶಿಸ್ತನ್ನು ಸಾರುತ್ತಿತ್ತು. ರಂಗದ ಮೇಲಿನ ಅವರ ಪ್ರತಿಯೊಂದು ಭಂಗಿಯೂ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಪರಮ್‌ನಿಂದ 10ನೇ ಆವೃತ್ತಿ ಕಾರ್ಯಕ್ರಮ
ಪರಮ್ ಫೌಂಡೇಶನ್‌ನ ಈ 10ನೇ ಆವೃತ್ತಿಯು ಹೊಸ ತಲೆಮಾರಿನ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ದೊಡ್ಡ ಯಶಸ್ಸು ಕಂಡಿದೆ. ಸಂಜೆ 6 ಗಂಟೆಯಿಂದ ಆರಂಭವಾದ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ನಾನಾ ಭಾಗಗಳಿಂದ ಬಂದಿದ್ದ ಸಂಗೀತ ಮತ್ತು ನೃತ್ಯ ಆಸಕ್ತರು ಕಲಾವಿದರನ್ನು ಹುರಿದುಂಬಿಸಿದರು.


Share

You cannot copy content of this page