ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ʼ ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ʼದಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ₹51,469 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದ್ದು, ಈ ಸಂಬಂಧ ಒಪ್ಪಂದಗಳಿಗೆ ಸಹಿ ಮಾಡಿವೆ.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ವಿವಿಧ ಕಂಪೆನಿಗಳ ಮುಖ್ಯಸ್ಥರು ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿ, ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಅವರು, ʼಈ ಹೊಸ ಹೂಡಿಕೆಗಳು ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ದಾವೋಸ್ ಶೃಂಗಸಭೆಗೆ ಹೊರತಾಗಿದ್ದು, ಕಳೆದ ಎರಡು ತಿಂಗಳ ಸತತ ಪ್ರಯತ್ನದ ಫಲ ಇದಾಗಿದೆ. ಬಂಡವಾಳ ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ಮುಂದೆಯೂ ಸುಸ್ಥಿರ ರೀತಿಯಲ್ಲಿ ನಡೆಯಲಿವೆ. ಈ ಹೂಡಿಕೆ ಬದ್ಧತೆಗಳಿಂದ ರಾಜ್ಯದಲ್ಲಿ 70,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ದೇಶದ ಕೈಗಾರಿಕಾ ಭೂಪಟದಲ್ಲಿ ಪ್ರಮುಖ ಕೈಗಾರಿಕಾ ಮತ್ತು ಉದ್ಯೋಗ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವಲ್ಲಿ ಈ ಬಂಡವಾಳ ಹೂಡಿಕೆಗಳು ಮಹತ್ವದ ಪಾತ್ರವಹಿಸಲಿವೆʼ ಎಂದು ತಿಳಿಸಿದ್ದಾರೆ.
ʼಬಂಡವಾಳ ಹೂಡಿಕೆಗೆ ಗುರುತಿಸಲಾಗಿರುವ ವಿವಿಧ ವಲಯಗಳು ಮತ್ತು ಹೂಡಿಕೆಯ ಮೊತ್ತವು, ರಾಜ್ಯದಲ್ಲಿನ ಕೈಗಾರಿಕಾ ಸ್ನೇಹಿ, ಸುಲಲಿತ ಉದ್ಯಮ ನೀತಿ, ಕುಶಲ ಮಾನವ ಸಂಪನ್ಮೂಲದ ವಿಪುಲ ಲಭ್ಯತೆ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯದಲ್ಲಿ ಉದ್ಯಮ ದಿಗ್ಗಜರು ಹೊಂದಿರುವ ದೃಢ ವಿಶ್ವಾಸದ ಪ್ರತೀಕವಾಗಿದೆʼ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ʼಏಕಸ್, ಅಲ್ಟ್ರಾವಯಲೆಟ್, ಎಸ್ಎಫ್ಒ ಟೆಕ್ನಾಲಜೀಸ್, ಮಹೀಂದ್ರಾ ಏರೊಸ್ಪೇಸ್, ಯಜಕಿ ಮುಂತಾದ ಕಂಪನಿಗಳ ಜೊತೆ ಹೂಡಿಕೆ ಒಪ್ಪಂದಕ್ಕೆ ಸಮಾವೇಶದಲ್ಲಿ ತಿಳಿವಳಿಕೆ ಒಪ್ಪಂದ ಪತ್ರಗಳಿಗೆ (ಎಂಒಯು) ಅಂಕಿತ ಹಾಕಲಾಗಿದೆ.
ʼಕರ್ನಾಟಕ ಸರ್ಕಾರವು ಹೂಡಿಕೆ ಪ್ರೋತ್ಸಾಹದ ದಿಸೆಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿರುವುದರಿಂದ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆ ಆಕರ್ಷಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದʼ ಎಂದು ಸಚಿವರು ತಿಳಿಸಿದ್ದಾರೆ.
ಸಮಾವೇಶದಲ್ಲಿ ಪ್ರಮುಖ ಬಹುರಾಷ್ಟ್ರೀಯ ಉದ್ಯಮಗಳ ಹಾಗೂ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಉತ್ತೇಜನ ಕ್ರಮಗಳ ಪುನರುಚ್ಚಾರ
ಉದ್ಯಮಗಳಿಗೆ ಸರ್ಕಾರ ನೀಡುತ್ತಿರುವ ಉತ್ತೇಜನ ಕ್ರಮಗಳನ್ನು ಸಮಾವೇಶದಲ್ಲಿ ಪುನರುಚ್ಚರಿಸಲಾಯಿತು.
ಅದರಲ್ಲೂ ವಿಶೇಷವಾಗಿ ಕೈಗಾರಿಕೆಗಳ ಬಳಕೆಗೆ ಲಭ್ಯವಿರುವ ಭೂಮಿಯ ವಿಸ್ತೀರ್ಣವನ್ನು ಕೈಗಾರಿಕಾ ಪಾರ್ಕ್ಗಳ ಮಟ್ಟದಲ್ಲಿ ಶೇಕಡ 68 ರಿಂದ ಶೇಕಡ 70ಕ್ಕೆ ಮತ್ತು ವೈಯಕ್ತಿಕ ನಿವೇಶನ ಮಟ್ಟದಲ್ಲಿ ಶೇಕಡ 34-44 ರಿಂದ ಶೇಕಡ 48-53 ಕ್ಕೆ ಹೆಚ್ಚಿಸಲು ವಲಯ ನಿಯಂತ್ರಣಗಳನ್ನು ಪರಿಷ್ಕರಿಸಿರುವುದನ್ನು ಉದ್ಯಮಿಗಳ ಗಮನಕ್ಕೆ ತರಲಾಯಿತು.
ರಾಜ್ಯದಾದ್ಯಂತ 20 ವಿಶೇಷ ಹೂಡಿಕೆ ಪ್ರದೇಶಗಳನ್ನು ಗೊತ್ತುಪಡಿಸಲಾಗಿದೆ. ಪ್ರತಿ ಪ್ರದೇಶದಿಂದ ಸಂಗ್ರಹಿಸಲಾದ ಆಸ್ತಿ ತೆರಿಗೆಯನ್ನು ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಅದೇ ಪ್ರದೇಶದಲ್ಲಿ ಮರುಹೂಡಿಕೆ ಮಾಡಲಾಗುತ್ತದೆ. ಹೊಸ ಏಕ ಗವಾಕ್ಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ರಾಜ್ಯದಲ್ಲಿ ಹೂಡಿಕೆಗಳನ್ನು ಸುಲಲಿಗೊಳಿಸಲು ಸುವ್ಯವಸ್ಥಿತ ವಿಧಾನ ಒದಗಿಸಲಿದೆ ಎಂದು ತಿಳಿಸಿದರು.
ʼಮುಂಚೂಣಿಯಲ್ಲಿ ಇರಲು ಕರ್ನಾಟಕ ಬದ್ಧʼ
ʼಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು ಮತ್ತು ಕೈಗಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸುವ ಮೂಲಕ ಕರ್ನಾಟಕವು ಭವಿಷ್ಯದ ಅಗತ್ಯಗಳನ್ನು ಊಹಿಸಿ ಮುಂಚಿತವಾಗಿ ಕಾರ್ಯೋನ್ಮುಖವಾಗಲು ಬದ್ಧವಾಗಿದೆ. ಅತ್ಯಾಧುನಿಕ ತಯಾರಿಕೆ, ಸೆಮಿಕಂಡಕ್ಟರ್, ಪರಿಸರ ಸ್ನೇಹಿ ಇಂಧನ ಮತ್ತು ಡಿಜಿಟಲ್ ತಂತ್ರಜ್ಞಾನ ಒಳಗೊಂಡಂತೆ, ಕೈಗಾರಿಕಾ ಬೆಳವಣಿಗೆಯ ಮುಂದಿನ ಹಂತಕ್ಕೆ ಚಾಲನೆ ನೀಡುವ ಸಮಗ್ರ ಹಾಗೂ ಪರಿಪೂರ್ಣ ಮೂಲ ಸೌಲಭ್ಯಗಳನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಹೊಸ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹೂಡಿಕೆದಾರರ ಸಂಪರ್ಕ ಕಾರ್ಯತಂತ್ರ ಬಲಪಡಿಸಲು ರಾಜ್ಯ ಸರ್ಕಾರವು ಚುರುಕಾಗಿ ಕಾರ್ಯನಿರ್ವಹಿಸುತ್ತಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಸಚಿವರು, ʼಸದ್ಯದ ಜಾಗತಿಕ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉದ್ಯಮಗಳು ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿರುವಾಗ ಸರ್ಕಾರ ಹಾಗೂ ಉದ್ಯಮ ವಲಯಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯವು ಈ ಮೊದಲಿಗಿಂತ ಹೆಚ್ಚಿದೆ.
ʼ ʼವೈಮಾಂತರಿಕ್ಷ ಹಾಗೂ ರಕ್ಷಣೆ, ವಿದ್ಯುತ್ ಚಾಲಿತ (ಇವಿ) ಸೇರಿದಂತೆ ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್, ಡೇಟಾ ಸೆಂಟರ್, ಔಷಧಿ , ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ ದೇಶಿ ಹಾಗೂ ಜಾಗತಿಕ ಮಟ್ಟದ 48 ಕಂಪನಿಗಳು ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ವಹಿವಾಟು ವಿಸ್ತರಣೆ ಉದ್ದೇಶದ ಬಂಡವಾಳ ಹೂಡಿಕೆಗೆ ತಮ್ಮ ಬದ್ಧತೆ ಪ್ರದರ್ಶಿಸಿವೆʼ ಎಂದು ವಿವರಿಸಿದ್ದಾರೆ.
ಸಮಾವೇಶದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್ ಅವರು ಮಾತನಾಡಿದರು. ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿರುವ ಗುಂಜನ್ ಕೃಷ್ಣ ಅವರು ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ಉಪಕ್ರಮಗಳನ್ನು ಪ್ರಸ್ತುತ ಪಡಿಸಿದರು. ಎಲ್ಲ 48 ಕಂಪನಿಗಳ ಮುಖ್ಯಸ್ಥರು ಒಡಂಬಡಿಕೆ ಪತ್ರಗಳನ್ನು ಸಚಿವರಿಂದ ಪಡೆದರು.
