ಸಮಗ್ರ ಸುದ್ದಿ

ಜಾರಕಬಂಡೆ ಕಾವಲ್ ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ |ವಾಯುಪಡೆ ಅರಣ್ಯಭೂಮಿ ಮರುವಶಕ್ಕೆ 64ಎ ಪ್ರಕ್ರಿಯೆ: ಈಶ್ವರ ಖಂಡ್ರೆ ಸೂಚನೆ

Share

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕು ಜಾರಕಬಂಡೆ ಶ್ರೀಗಂಧದ ಕಾವಲ್ ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ ಕೂಡಲೇ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ಎ ಅಡಿ ಪ್ರಕ್ರಿಯೆ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಲಿಖಿತ ಸೂಚನೆ ನೀಡಿದ್ದಾರೆ.

ಈ ಸಂಬಂಧ ಅಪರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎರಡು ಪ್ರತ್ಯೇಕ ಸೂಚನೆ ನೀಡಿರುವ ಅವರು, ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ವಾಯುಪಡೆಗೆ ನೀಡಲಾಗಿದ್ದ 452ಎಕರೆ 4½ ಗುಂಟೆ ಭೂ ಮಂಜೂರಾತಿಯನ್ನು ರಾಜ್ಯ ಸರ್ಕಾರ 2017ರ ಅಕ್ಟೋಬರ್ 09ರಂದು ರದ್ದುಗೊಳಿಸಿದ್ದು, ಇದನ್ನು ಅತ್ಯಗತ್ಯವಾದ ಶ್ವಾಸತಾಣವಾಗಿ ಉಳಿಸಲು ತೀರ್ಮಾನಿಸಲಾಗಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹಿತದ ದೃಷ್ಟಿಯಿಂದ ಭೂಮಂಜೂರಾತಿ ರದ್ದು ಪಡಿಸಿದ ಬಳಿಕವೂ ಭಾರತೀಯ ವಾಯುಪಡೆ ಸದರಿ ಭೂಮಿಯನ್ನು ಬಳಸಲು, ಅರಣ್ಯ (ಸಂರಕ್ಷಣಾ) ಕಾಯ್ದೆ-1980 ರಡಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪರ್ಯಾಯ ಭೂಮಿ ನೀಡುವಂತೆ ತಿಳಿಸಿದ್ದರೂ ವಾಯುಪಡೆ ನಿಯಮ ಉಲ್ಲಂಘಿಸಿದೆ. ಈ ನಿಟ್ಟಿನಲ್ಲಿ 64ಎ ನೋಟಿಸ್ ನೀಡಿ ಒತ್ತುವರಿ ತೆರವು ಮಾಡಿಸಲು ಸೂಚಿಸಿದ್ದಾರೆ.

ಈ ಜಮೀನಿಗೂ ವಾಯುಪಡೆಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಈಶ್ವರ ಖಂಡ್ರೆ, ಇನ್ನು ಮುಂದೆ ಸದರಿ ಪ್ರದೇಶದಲ್ಲಿ ಅನಿವಾರ್ಯವಾಗಿ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ನಿಯಮಾನುಸಾರ ಅರಣ್ಯ ಇಲಾಖೆಯಿಂದ (ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ) ಅನುಮತಿ ಪಡೆಯುವಂತೆ ಸುತ್ತೋಲೆ ಹೊರಡಿಸಲು ಮತ್ತು ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲು ಕ್ರಮ ವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ.


Share

You cannot copy content of this page