ಸಮಗ್ರ ಸುದ್ದಿ

ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ: ಈಶ್ವರ ಖಂಡ್ರೆ | ಚಾರಣಕ್ಕೆ ಪ್ರಮಾಣಿತ ಮಾನದಂಡ ರೂಪಿಸಲು ಸೂಚನೆ

Share

ಬೆಂಗಳೂರು: ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ತಡಿಯಾಂಡಮೋಲ್ ಚಾರಣದ ವೇಳೆ ಕೇರಳದ ಶರಣ್ಯ ಎಂಬ ಮಹಿಳೆ 3 ದಿನ ಕಾಡಿನಲ್ಲಿ ದಿನ ಕಳೆದ ಹಾಗೂ ಚಂದ್ರದ್ರೋಣ ಪರ್ವತದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಅವರು, ಈ ಸೂಚನೆ ನೀಡಿದ್ದಾರೆ.

ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಎಂ.ಸ್ಟ್ರೈಪ್ಸ್ ನಂತಹ ಆಪ್ ರೀತಿಯಲ್ಲೇ ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್ ನಲ್ಲಿ ಈ ಆಪ್ ಅಳವಡಿಸಿದರೆ, ಯಾರೇ ದಾರಿ ತಪ್ಪಿಸಿಕೊಂಡರೂ ಅವರ ಶೋಧಕಾರ್ಯ ಸುಲಭವಾಗುತ್ತದೆ, ಹೀಗಾಗಿ ಆಪ್ ಅಭಿವೃದ್ಧಿಗೆ ಕ್ರಮವಹಿಸುವಂತೆ ಮತ್ತು ಚಾರಣಿಗರಿಗೆ ಗುಂಪು ವಿಮೆ ಮಾಡಿಸುವಂತೆ ಅರಣ್ಯ ಸಚಿವರು ನಿರ್ದೇಶಿಸಿದ್ದಾರೆ.

ಇದರ ಜೊತೆಗೆ ಚಾರಣಿಗರಿಗೆ ಮಾರ್ಗದರ್ಶನ ಮಾಡುವ ನೇಚರ್ ಗೈಡ್ ಗಳಿಗೆ ಕಡ್ಡಾಯವಾಗಿ ವೈರ್ ಲೆಸ್ ಸೆಟ್ ನೀಡುವಂತೆ ಮತ್ತು ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್ ಗಳಿಗೆ ಹೊಣೆಗಾರಿಕೆ ನಿಗದಿ ಮಾಡುವಂತೆಯೂ ಈಶ್ವರ ಖಂಡ್ರೆ ಸೂಚಿಸಿದ್ದಾರೆ.


Share

You cannot copy content of this page