ಸಮಗ್ರ ಸುದ್ದಿ

ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Share

ಬೆಂಗಳೂರು, ನ.30: ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇವರ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 2024ನೇ ಸಾಲಿನ ಅರೆ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಜಂಬರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಅರೆಭಾಷಿಕರದ್ದು ವಿಭಿನ್ನ ಸಂಸ್ಕೃತಿ:
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದು, ಇವರ ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ. 1882 ನೇ ಗೆಜೆಟ್ ಬಂದಾಗ ಸಕಲೇಶಪುರದಲ್ಲಿದ್ದು, ಬರಗಾಲದ ಸಂದರ್ಭದಲ್ಲಿ ಹೇಮಾವತಿ ನದಿ ಬತ್ತಿದಾಗ ಪಕ್ಕದ ಜಿಲ್ಲೆ ಸುಳ್ಯಕ್ಕೆ ಬಂದು ನೆಲೆಯೂರುತ್ತಾರೆ, ತುಳು, ಕೊಂಕಣಿ ಜೊತೆಗೆ ಕನ್ನಡ ಸೇರಿ ಅರೆಭಾಷೆಯಾಗಿದೆ. ಹೋಗುತ್ತೇನೆ ಎನ್ನುವುದು ವೋನೆ , ಬರುತ್ತೇನೆ ಎನ್ನುವುದು ಬನೇ ಎಂದು ಹೇಳುತ್ತಾರೆ. ಹೀಗೆ ಕೆಲವು ಅಕ್ಷರಗಳು ಬಿಟ್ಟುಹೋಗಿ ಅರೆಭಾಷೆಯಾಗಿದೆ. ಮೂಲತ: ಗೌಡ ಸಮುದಾಯಕ್ಕೆ ಸೇರಿರುವ ಇವರನ್ನು ಅರೆಭಾಷೆ ಗೌಡರು ಎನ್ನುತ್ತಾರೆ. ಅರೆಭಾಷಿಕರದ್ದು ವಿಭಿನ್ನ ಸಂಸ್ಕೃತಿಯಾಗಿದೆ ಎಂದರು.

ಕರ್ನಾಟಕದಲ್ಲಿ 230 ಸಣ್ಣ ಭಾಷೆಗಳಿವೆ:
ಅರೆಭಾಷಿಕರಾಗಿದ್ದ ಕುರುಂಜಿ ವೆಂಕಟರಮಣಗೌಡರು, ನನಗೆ ಪರಿಚಿತರು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ 230 ಸಣ್ಣ ಭಾಷೆಗಳಿವೆ. ಇವೆಲ್ಲವೂ ಕನ್ನಡದಿಂದಲೇ ಹುಟ್ಟಿದ್ದು, ಅರೆಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮಾಡಲಿ ಎಂದರು.

50 ಲಕ್ಷ ರೂ.ಬೇಡಿಕೆಯನ್ನು ಈಡೇರಿಸಲಾಗುವುದು
ಭಾಗಮಂಡಲದಲ್ಲಿ ನಾಡಗೌಡ ಸಮುದಾಯಕ್ಕೆ ಒಂದು ಕೋಟಿ ರೂ .ಗಳನ್ನು ಹಿಂದೆ ಒದಗಿಸಲಾಗಿತ್ತು. ಪ್ರಸ್ತುತ 50 ಲಕ್ಷ ರೂ.ಬೇಡಿಕೆಯನ್ನು ಈಡೇರಿಸಲಾಗುವುದು. ಇತರೆ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು: ಭರವಸೆ
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ ಇದ್ದು, ಇದನ್ನು ಈಡೇರಿಸಲಾಗುವುದು ಎಂದು ಭರವಸೆಯಿತ್ತರು.

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಕೆ.ಆರ್.ಗಂಗಾಧಾರ, ಯು. ಪಿ.ಶಿವಾನಂದ ಹಾಗೂ ಡಿ.ಎಸ್.ಆನಂದ ಅವರಿಗೆ ಸರ್ಕಾರದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಚಿವ ಭೈರತಿ ಸುರೇಶ್, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕ ಅಂತರಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಉಪಸ್ಥಿತರಿದ್ದರು.


Share

You cannot copy content of this page