ಸಮಗ್ರ ಸುದ್ದಿ

ʼಬೆಂಗಳೂರು ಆತ್ಮʼ ಕಲಾತ್ಮಕ ಶಿಲ್ಪ ಅನಾವರಣಗೊಳಿಸಿದ ಪ್ರಿಯಾಂಕ್‌ ಖರ್ಗೆ | ಬೆಂಗಳೂರು ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡ ವಿಶಿಷ್ಟ ನಗರ

Share

ಬೆಂಗಳೂರು: ಬೆಂಗಳೂರು ಜಗತ್ತನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿದ್ದರೂ, ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡಿರುವ ವಿಶಿಷ್ಟ ನಗರ, ವಿಜ್ಞಾನ, ಸಂಸ್ಕೃತಿ ಮತ್ತು ಕಲೆಗಳು ಬೆಸೆದುಕೊಳ್ಳುವ; ಮಹತ್ವಾಕಾಂಕ್ಷೆ ಹಾಗೂ ಸಂವೇದನೆಗಳು ಜತೆಗೂಡುವ ನಗರ ಇದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಗಳೂರು ನಗರವನ್ನು ಬಣ್ಣಿಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖ್ಯಾತ ಕಲಾವಿದ ಜೌಮೆ ಪ್ಲೆನ್ಸಾ ವಿನ್ಯಾಸಗೊಳಿಸಿದ ʼಬೆಂಗಳೂರಿನ ಆತ್ಮʼ ಎಂಬ ಭವ್ಯ, ಚಿತ್ತಾಕರ್ಷಕ ಕಲಾತ್ಮಕ ಶಿಲ್ಪವನ್ನು ಸಚಿವರು ಅನಾವರಣಗೊಳಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ಸಚಿವರು ಅಭಿವ್ಯಕ್ತಿಗೊಳಿಸಿದರು.

ಬೆಂಗಳೂರು ಹಲವಾರು ಭಾಷೆಗಳು, ಅನೇಕ ಪಯಣಗಳು ಮತ್ತು ಅನೇಕ ಕನಸುಗಳಿಂದ ನಿರ್ಮಾಣಗೊಂಡ ನಗರ, ಕರ್ನಾಟಕದ ಪ್ರತಿಯೊಂದು ಭಾಗದಿಂದಲೇ ಅಲ್ಲದೆ ಭಾರತದ ಎಲ್ಲ ರಾಜ್ಯಗಳೂ ಸೇರಿದಂತೆ ಪ್ರಪಂಚದಾದ್ಯಂತ ಜನರು ಈ ನಗರಕ್ಕೆ ಬಂದಿದ್ದಾರೆ. ಅವರು ಕಲಿಯಲು, ಕಟ್ಟಲು, ಸೃಷ್ಟಿಸಲು, ದುಡಿಯಲು ಮತ್ತು ಇಲ್ಲಿಯವರಾಗಲು ಬಂದಿದ್ದಾರೆ. ಇದುವೇ ಬೆಂಗಳೂರಿನ ಆತ್ಮದ ಸಂಕೇತ ಎಂದು ಕಲಾಕೃತಿಯ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯ ವ್ಯಕ್ತಗೊಳಿಸಿದರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್-2ರಲ್ಲಿ ಅನಾವರಣಗೊಂಡಿರುವ ‘ಬೆಂಗಳೂರಿನ ಆತ್ಮ’ (Soul of Bengaluru), ಪ್ರಸಿದ್ಧ ಸ್ಪ್ಯಾನಿಷ್ ಕಲಾವಿದ ಜೌಮೆ ಪ್ಲೆನ್ಸಾ Jaume Plensa ವಿನ್ಯಾಸಗೊಳಿಸಿದ 16 ಅಡಿ ಎತ್ತರದ ಭವ್ಯ ಕಲಾಕೃತಿಯಾಗಿದೆ. ಇದು ವಿವಿಧ ಭಾಷೆಗಳ ಅಕ್ಷರಗಳನ್ನು ಒಳಗೊಂಡಿದ್ದು, ನಗರದ ವೈವಿಧ್ಯಮಯ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ. ಕನ್ನಡ, ಅರೇಬಿಕ್, ಚೈನೀಸ್, ತಮಿಳು, ಹಿಂದಿ, ಇಂಗ್ಲಿಷ್ (ಲ್ಯಾಟಿನ್) ಸೇರಿದಂತೆ ವಿವಿಧ ಭಾಷೆಗಳ ಅಕ್ಷರಗಳು ಮತ್ತು ಗಣಿತದ ಚಿಹ್ನೆಗಳನ್ನು ಬಳಸಿ ರಚಿಸಲಾದ ಸಂಕೀರ್ಣ ಕಲಾಕೃತಿ ಇದಾಗಿದೆ.

ಭಾರತದಲ್ಲಿನ ಸ್ಪೇನ್ ರಾಯಭಾರಿ ಜುವಾನ್ ಆಂಟೋನಿಯೊ ಮಾರ್ಚ್ ಪೂಜೋಲ್ ಶಿಲ್ಪ ಅನಾವರಣಗೊಳಿಸಿದರು. ಸಚಿವ ಪ್ರಿಯಾಂಕ್ ಖರ್ಗೆ, ಉದ್ಯಮಿ ಕಿರಣ್ ಮಜುಂದಾರ್ ಶಾ ಹಾಗೂ ಬಿಐಎಎಲ್ ಸಿಇಒ ಹರಿ ಮರಾರ್ ಉಪಸ್ಥಿತರಿದ್ದರು.


Share

You cannot copy content of this page