ಬೆಂಗಳೂರು: ಬೌದ್ಧ ಧರ್ಮದ ಪವಿತ್ರ ಗ್ರಂಥಗಳೆಂದು ಪರಿಗಣಿಸಲಾಗುವ ತಿಪಿಟಕ ಗ್ರಂಥಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸದಾಶಿವನಗರದಲ್ಲಿರುವ ನಾಗಸೇನಾ ಬುದ್ಧ ವಿಹಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಭಗವಾನ್ ಬುದ್ಧ ಜಯಂತಿಯನ್ನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಗವಾನ್ ಬುದ್ಧರ ಬೋಧನೆಗಳು ಹಿಂದೆoದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ, ಮನುಷ್ಯ ಅತಿಯಾದ ಆಸೆಗಳಲ್ಲಿ ಹಾಗೂ ಹಿಂಸೆಯಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ಭಗವಾನ್ ಬುದ್ಧರು ಬೋಧಿಸಿದ ಶಾಂತಿಯ ತತ್ವ ಹಾಗೂ ಅವರ ಮನುಷ್ಯ ಕರುಣೆ ಅತ್ಯಂತ ಮುಖ್ಯವಾಗಿದೆ. ಆ ತತ್ವಗಳನ್ನು ಪುಸ್ತಕಗಳ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಇದಲ್ಲದೆ ಬೌದ್ಧರ ಸ್ಮಾರಕಗಳ ರಕ್ಷಣೆ ಮತ್ತು ಪುನರ್ ನಿರ್ಮಾಣದ ಕೆಲಸ ಅತ್ಯಂತ ಮುಖ್ಯವಾದದ್ದು , ನಮ್ಮ ಸರ್ಕಾರ ಈ ಕೆಲಸವನ್ನು ಈಗಾಗಲೇ ಕೈಗೆತ್ತಿಕೊಂಡು ಸನ್ನತಿಯಿಂದ ಆರಂಭ ಮಾಡಿದೆ. ಅದನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಬುದ್ಧ, ಬಸವ ಹಾಗೂ ಅಂಬೇಡ್ಕರ್ ಈ ಮೂರು ಮಹಾಪುರುಷರ ಚಿಂತನೆ ಒಂದೇ ಆಗಿದೆ ,ಅವರನ್ನು ಅನುಸರಿಸಿದರೆ ಮನುಷ್ಯ ಜೀವನ ಸಾರ್ಥಕತೆ ಪಡೆಯುತ್ತದೆ ಎಂದರು.
ಯಾವುದೇ ಮಹಾಪುರುಷರನ್ನ ಒಂದೊಂದು ಸಮುದಾಯಕ್ಕೆ ಸೀಮಿತ ಮಾಡುವ ಕ್ರಿಯೆ ಒಳ್ಳೆಯದಲ್ಲ ,ಈ ಮಹಾನ್ ಪುರುಷರು ಯಾವುದೇ ಒಂದು ಜಾತಿ ವರ್ಗ ಸಮುದಾಯಕ್ಕೆ ಸೇರಿದವರಲ್ಲ ,ಅವರು ಇಡೀ ಪ್ರಪಂಚಕ್ಕೆ ಸನ್ಮಾರ್ಗ ಬೋಧಿಸಿದವರು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾದ ಶ್ರೀ ಬೋಧಿದತ್ತ ಭಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಡಾ. ವಡ್ಡಗೆರೆ ನಾಗರಾಜಯ್ಯ ಹಾಗೂ ಪ್ರೊ. ಎಂ. ವಿ. ಉಷಾದೇವಿ ಅವರು ಭಗವಾನ್ ಬುದ್ಧರನ್ನು ಕುರಿತಂತೆ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ದಕ್ಷಿಣ ಭಾರತ ಬುದ್ಧ ಸಂಘದ ತಸುತೇಸಮ್ಮ ಜಥೋನೋ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ ಎಸ್ ಮಂಜುನಾಥ ಸ್ವಾಮಿ, ನಾಗಸೇನ ಬುದ್ಧ ವಿಹಾರದ ಅಧ್ಯಕ್ಷ ಡಾ. ಎಂ ವೆಂಕಟಸ್ವಾಮಿ., ಸಾಮಾಜಿಕ ಹೋರಾಟಗಾರ ಎನ್.ಮೂರ್ತಿ, ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್ ಹಾಗೂ ಅಶೋಕ್ ಚಲವಾದಿ, ವಿವಿಧ ಬೌದ್ಧ ಸಂಘಗಳ ಪ್ರತಿನಿಧಿಗಳು ಹಾಗೂ ಮುಂಡಗೋಡಿನ ಬೌದ್ಧ ಭಿಕ್ಕುಗಳು ಭಾಗವಹಿಸಿದ್ದರು.
